ಗುಡ್ ನ್ಯೂಸ್ : ಪ್ರತಿ ರೈತರಿಗೆ ಸಾಲ ನೀಡುವ ಯೋಜನೆ

By Kannadaprabha NewsFirst Published Oct 24, 2021, 10:03 AM IST
Highlights
  •  ಮುಂದಿನ ಎರಡು ವರ್ಷಗಳಲ್ಲಿ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ಪ್ರತಿಯೊಬ್ಬ ರೈತರನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರ ಷೇರುದಾರರನ್ನಾಗಿ ಮಾಡುವ ಗುರಿ
  • ಸಾಲ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಂಡಿಸಿಸಿ ಬ್ಯಾಂಕ್‌ ಅಧಕ್ಷ ಜಿ.ಡಿ. ಹರೀಶ್‌ಗೌಡ ಹೇಳಿಕೆ

 ಕೆ.ಆರ್‌. ನಗರ (ಅ.24):  ಮುಂದಿನ ಎರಡು ವರ್ಷಗಳಲ್ಲಿ ಮೈಸೂರು (Mysuru) ಮತ್ತು ಚಾಮರಾಜ ನಗರ (chamarajanagar) ಜಿಲ್ಲೆಗಳ ಪ್ರತಿಯೊಬ್ಬ ರೈತರನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರ ಷೇರುದಾರರನ್ನಾಗಿ ಮಾಡಿ ಎಲ್ಲರಿಗೂ ಸಾಲ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಂಡಿಸಿಸಿ (MDCC) ಬ್ಯಾಂಕ್‌ (Bank) ಅಧಕ್ಷ ಜಿ.ಡಿ. ಹರೀಶ್‌ಗೌಡ (Harish Gowda) ಹೇಳಿದರು.

ಸಾಲಿಗ್ರಾಮ ತಾಲೂಕಿನ ಹಾಡ್ಯ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತೀವ್ರ ಆರ್ಥಿಕ ಸಂಕಷ್ಠದಲ್ಲಿದ್ದ ಬ್ಯಾಂಕ್‌ನ್ನು (Bank) ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಸ್ಥಿತಿಗೆ ತರುವುದರ ಜತೆಗೆ ಈವರೆಗೆ ರೈತರಿಗೆ 1,150 ಕೋಟಿ ಸಾಲ ನೀಡಲಾಗಿದೆ ಎಂದರು.

ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ: ರಮೇಶ್ ಕುಮಾರ್‌ರನ್ನು ಜೈಲಿಗೆ ಕಳ್ಸೋವರ್ಗು ಬಿಡಲ್ಲ: ಸುಧಾಕರ್

ರೈತರು (Farmers) ಮುಂದೆ ಎಂಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ತಮ್ಮ ಸಂಪೂರ್ಣ ವ್ಯವಹಾರವನ್ನು ಇಲ್ಲಿಯೆ ಮಾಡಬೇಕೆಂದು ಮನವಿ ಮಾಡಿ, ಸಂಘದ ಎಲ್ಲ ಸದಸ್ಯರು ಸರ್ವ ಸದಸ್ಯರ ಸಭೆ ಸೇರಿದಂತೆ ಇತರ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.

ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಟ್ಟಡ ನಿಧಿಯನ್ನು ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಈ ವಿಚಾರವನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದ ನಂತರ ಹಣ ನೀಡಲಾಗುತ್ತದೆ ಎಂದು ಅವರು ನುಡಿದರು.

ವ್ಯವಸ್ಥಾಪಕನಿಗೆ ತರಾಟೆ-ಚುಂಚನಕಟ್ಟೆಹೋಬಳಿ ಹಳಿಯೂರು ಬಡಾವಣೆಯಲ್ಲಿರುವ ಎಂಡಿಸಿಸಿ (MDCC) ಬ್ಯಾಂಕಿನ ವ್ಯವಸ್ಥಾಪಕ ಪ್ರತಾಪ್‌ (Pratap) ರೈತರೊಂದಿಗೆ ಸಭ್ಯತೆಯಿಂದ ವರ್ತಿಸುವುದಿಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ ಮತ್ತು ಇತರರು ದೂರಿದಾಗ ವೇದಿಕೆಯಲ್ಲಿಯೆ ಆತನನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು ಮತ್ತೆ ರೈತರಿಂದ ದೂರು ಬಂದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

ಎಂಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಎಸ್‌. ಸಿದ್ದೇಗೌಡ, ನಿರ್ದೇಶಕ ಎಚ್‌.ವಿ. ಸುಬ್ಬಯ್ಯ, ಮಾಜಿ ನಿರ್ದೇಶಕ ಎಚ್‌.ಬಿ. ವೀರಭದ್ರಪ್ಪ, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಸಂಘದ ಅಧ್ಯಕ್ಷ ಎಚ್‌.ವಿ. ನಟರಾಜು, ಉಪಾಧ್ಯಕ್ಷ ಹನುಮಂತಶೆಟ್ಟಿ, ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ರಾಮೇಗೌಡ, ಎಪಿಎಂಸಿ ಅಧ್ಯಕ್ಷ ನಟರಾಜು, ನಿರ್ದೇಶಕ ಸೋಮಶೇಖರ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎನ್‌.ಸಿ. ಪ್ರಸಾದ್‌, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಎಚ್‌.ಬಿ. ಕುಮಾರ್‌, ಎಂಡಿಸಿಸಿ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ಸಂಘದ ಮಾಜಿ ಅಧ್ಯಕ್ಷರಾದ ತ್ರಯಂಬಕಸ್ವಾಮಿ, ಚಿತ್ರಶೇಖರ್‌, ಮಹೇಶ್‌, ಚನ್ನಬಸಪ್ಪ, ಟಿ.ಸಿ.ವಿಶ್ವನಾಥ್‌, ಮುಖಂಡ ಮಲ್ಲಿಕಾರ್ಜುನ, ರಘು, ಸಂಘದ ಸಿಇಒ ಜಿ.ಸಿ. ಅನಂತು, ಜಿಲ್ಲಾ ಬ್ಯಾಂಕ್‌ ಮೇಲ್ವಿಚಾರಕ ಎನ್‌. ದಿನೇಶ್‌ ಇದ್ದರು.

ಠೇವಣಿ ದುಪ್ಪಟ್ಟು ಮಾಡಲು ತೀರ್ಮಾನ

ಪ್ರಸ್ತುತ ಎಂಡಿಸಿಸಿ ಬ್ಯಾಂಕ್‌ 4 ಕೋಟಿ ರು. ಲಾಭದಲ್ಲಿದ್ದು, ಮುಂದಿನ ದಿನಗಳಲ್ಲಿ ಸಾಲದ ನೀಡಿಕೆಯ ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ ಠೇವಣಿಯನ್ನು ದುಪ್ಪಟ್ಟು ಮಾಡಲು ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ಹರೀಶ್‌ ಗೌಡ ಮಾಹಿತಿ ನೀಡಿದರು. ಮೈಸೂರು ಚಾಮರಾಜನಗರ ಎರಡು ಜಿಲ್ಲೆಗಳ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಅಗತ್ಯವಿರುವಷ್ಟುಸಾಲವನ್ನು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೊಡಲಾಗಿದ್ದು, ಭವಿಷ್ಯದ ದಿನಗಳಲ್ಲಿ ಸಂಘಗಳ ನಿರ್ದೇಶಕರಿಗೆ ತರಬೇತಿ ನೀಡಲು ನಿರ್ಧರಿಸಿದೆ ಎಂದು ಅವರು ಪ್ರಕಟಿಸಿದರು.

click me!