1.2 ಲಕ್ಷ ಅಲೆಮಾರಿಗಳಿಗೆ ಕಾಯಂ ಸೂರು: ಜ.19ಕ್ಕೆ ಮೋದಿ ಹಕ್ಕುಪತ್ರ

By Kannadaprabha NewsFirst Published Jan 15, 2023, 2:18 PM IST
Highlights

ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಅವರು ವಾಸಿಸುವ ಸ್ಥಳಕ್ಕೆ ಅನುಗುಣವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅವರ ಹೆಸರಿಗೆ ನೋಂದಣಿ ಮಾಡಿಸಲಾಗುವುದು. ಇದಕ್ಕಾಗಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮುಂದಿನ 2-3 ತಿಂಗಳ ಅವಧಿಗೆ ಪ್ರತಿನಿತ್ಯ 1 ಗಂಟೆ ಇವರ ನೋಂದಣಿಗೆ ಸಮಯ ಮೀಸಲು. 

ಕಲಬುರಗಿ(ಜ.15):  ರಾಜ್ಯಾದ್ಯಂತ ಲಂಬಾಣಿ ತಾಂಡಾ, ಹಟ್ಟಿಹಾಗೂ ಹಾಡಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಕಾಯಂ ಸೂರು ಒದಗಿಸುವ ದೃಷ್ಟಿಯಿಂದ 1.2 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲನೇ ಹಂತವಾಗಿ ಜ.19ರಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿಯವರು ಕಲಬುರಗಿ ಸೇರಿ 5 ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ನಗರ ಹೊರವಲಯದ ಮಳಖೇಡ್‌ದಲ್ಲಿ ಸುಮಾರು 150 ಎಕರೆ ವಿಶಾಲ ಪ್ರದೇಶದಲ್ಲಿ ಈ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿದ್ದು, ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ಫಲಾನುಭವಿಗಳು ಸೇರಿದಂತೆ 1.50 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಇವರಿಗಾಗಿ 2,382 ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಜ.19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಸಚಿವ ಆರ್.ಅಶೋಕ್‌ರಿಂದ ಪೂರ್ವಸಿದ್ಧತೆ ಪರಿಶೀಲನೆ

ಎರಡನೇ ಹಂತದಲ್ಲಿ ಬಂಜಾರಾ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲ ಮಹಾರಾಜರ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮದಲ್ಲಿ 68,000 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿಸಿ, ಮೂಲಸೌಕರ್ಯ ಒದಗಿಸುವ ಕಂದಾಯ ಇಲಾಖೆಯ ಕ್ರಾಂತಿಕಾರಿ ಹೆಜ್ಜೆ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಅವರು ವಾಸಿಸುವ ಸ್ಥಳಕ್ಕೆ ಅನುಗುಣವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅವರ ಹೆಸರಿಗೆ ನೋಂದಣಿ ಮಾಡಿಸಲಾಗುವುದು. ಇದಕ್ಕಾಗಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮುಂದಿನ 2-3 ತಿಂಗಳ ಅವಧಿಗೆ ಪ್ರತಿನಿತ್ಯ 1 ಗಂಟೆ ಇವರ ನೋಂದಣಿಗೆ ಸಮಯ ಮೀಸಲಿರಿಸಲಾಗುವುದು. ಜೊತೆಗೆ, ಇಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ, ದೀಪ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

click me!