ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ಯಾನಿಗಳ ಪರದಾಟ, ಜಿಲ್ಲಾಡಳಿತ ವಿರುದ್ಧ ಗರಂ

By Kannadaprabha NewsFirst Published May 14, 2020, 9:19 AM IST
Highlights

ಕೇಂದ್ರ ಸರ್ಕಾರದ ವಂದೇ ಭಾರತ್‌ ಮಿಷನ್‌ ಯೋಜನೆಯಡಿ ಮಂಗಳವಾರ ರಾತ್ರಿ ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ 176 ಪ್ರಯಾಣಿಕರ ಪೈಕಿ 33 ಮಂದಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಪೂರ್ತಿ ಸುಮಾರು 5 ಗಂಟೆಗಳ ಕಾಲ ಅತಂತ್ರ ಸ್ಥಿತಿಯಲ್ಲಿ ಕಳೆದ ಬಗ್ಗೆ ಆರೋಪ ವ್ಯಕ್ತವಾಗಿದೆ. ವಿಮಾನ ನಿಲ್ದಾಣ ಸಿಬ್ಬಂದಿ ಸಹಿತ ಜಿಲ್ಲಾಡಳಿತ ಸೂಕ್ತವಾಗಿ ಸ್ವಂದಿಸದ ಬಗ್ಗೆ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು(ಮೇ 14): ಕೇಂದ್ರ ಸರ್ಕಾರದ ವಂದೇ ಭಾರತ್‌ ಮಿಷನ್‌ ಯೋಜನೆಯಡಿ ಮಂಗಳವಾರ ರಾತ್ರಿ ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ 176 ಪ್ರಯಾಣಿಕರ ಪೈಕಿ 33 ಮಂದಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಪೂರ್ತಿ ಸುಮಾರು 5 ಗಂಟೆಗಳ ಕಾಲ ಅತಂತ್ರ ಸ್ಥಿತಿಯಲ್ಲಿ ಕಳೆದ ಬಗ್ಗೆ ಆರೋಪ ವ್ಯಕ್ತವಾಗಿದೆ. ವಿಮಾನ ನಿಲ್ದಾಣ ಸಿಬ್ಬಂದಿ ಸಹಿತ ಜಿಲ್ಲಾಡಳಿತ ಸೂಕ್ತವಾಗಿ ಸ್ವಂದಿಸದ ಬಗ್ಗೆ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ.

ದುಬೈನಿಂದ ವಿಮಾನದಲ್ಲಿ ಆಗಮಿಸಿ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಭಾರತೀಯ ಸಿಮ್‌ ವಿತರಣೆ, ಆರೋಗ್ಯ ಕಿಟ್‌ ವಿತರಣೆ ಮಾಡಲಾಯಿತು. ನಂತರ ಪ್ರಯಾಣಿಕರ ಸ್ಟಾಂಪಿಂಗ್‌ ಮಾಡಿ ಇಮಿಗ್ರೆಷನ್‌ ಪ್ರಕ್ರಿಯೆ ನಡೆಸಲಾಯಿತು. ಅಲ್ಲಿವರೆಗೆ ಎಲ್ಲವೂ ಸರಿಯಾಗಿಯೇ ಇದ್ದುದು ಕ್ವಾರಂಟೈನ್‌ ವಿಚಾರ ಬಂದಾಗ ಅಯೋಮಯವಾಗಿತ್ತು ಎಂದು ಆರೋಪಿಸಲಾಗಿದೆ.

ಶೂನ್ಯ ಬಡ್ಡಿ ದರದಲ್ಲಿ ಡಿಸಿಸಿ ಬ್ಯಾಂಕ್‌ ಸಾಲ..!

ಲಗೇಜು ಸಾಗಾಟಕ್ಕೆ ಹಿಂದೇಟು: ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಅಶಕ್ತರು, ಅನಾರೋಗ್ಯಪೀಡಿತರು ಬಂದಾಗ ಅವರಿಗೆ ಲಗೇಜು ಸಾಗಾಟಕ್ಕೆ ಅಲ್ಲಿನ ಸಿಬ್ಬಂದಿ ನೆರವು ನೀಡುತ್ತಾರೆ. ಆದರೆ ದುಬೈ ಯಾನಿಗಳ ಪೈಕಿ ಗರ್ಭಿಣಿಯರು ಹಾಗೂ ಅಶಕ್ತರಿಗೆ ಲಗೇಜು ಸಾಗಿಸಿ ಹೊರಬರಲು ವಿಮಾನ ನಿಲ್ದಾಣ ಸಿಬ್ಬಂದಿ ಯಾವುದೇ ಸಹಾಯ ಮಾಡಿಲ್ಲ ಎಂದು ಕೊಣಾಜೆಯ ಲಿನ್ಸಿಯಾ ಎಂಬಾಕೆ ಮಾಧ್ಯಮಗಳಿಗೆ ಆರೋಪಿಸಿದ್ದಾರೆ. ತನ್ನ ಪತಿಗೆ ಅನಾರೋಗ್ಯವಿದ್ದರೂ ಲಗೇಜಿಗೆ ನೆರವು ನೀಡಲು ಯಾರೂ ಮುಂದೆ ಬರಲಿಲ್ಲ. ನಿಮ್ಮ ಲಗೇಜನ್ನು ನೀವೇ ಎತ್ತಿಕೊಳ್ಳಿ ಎಂದು ಹೇಳಿ ಸಾಗಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣದಿಂದ ಹೊರಗೆ ಬಂದಾಗ 23 ಮಂದಿಗೆ ಆಹಾರ ನೀಡಿ ಎಲ್ಲರೂ ಹಂಚಿಕೊಳ್ಳಿ, ನಮಗೆ ಲೆಕ್ಕ ಕೊಡಬೇಕಾಗಿದೆ ಎಂದು ಹೇಳಿದ್ದಾಗಿ ಆಕೆ ಆರೋಪಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಗೆ ಸರ್ಕಾರಿ ಬಸ್‌ನಲ್ಲಿ ಹೋಗುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. 1 ಸಾವಿರ ರು.ನಿಂದ 2 ಸಾವಿರ ರು. ವರೆಗಿನ ವಿವಿಧ ರೂಂ ಬುಕ್‌ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದರು. ಹಣವಿಲ್ಲದೆ ನಮಗೆ ದಿಕ್ಕೇ ತೋಚುತ್ತಿಲ್ಲ ಎಂದು ಲಿಸ್ಸಿಯಾ ಆರೋಪಿಸಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ವರ್ಷ ಪೂರ್ತಿ ವೇತನಕ್ಕೆ ಆಗ್ರಹ; ಸಂಸದ ರಾಘವೇಂದ್ರಗೆ ಮನವಿ

ರೂಮಿಗೆ ಬಂದ ಬಳಿಕ ಬೆಳಗ್ಗೆ ನಮ್ಮನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ನಾನು ಸೇರಿದಂತೆ ಹಲವು ಮಂದಿ ಗರ್ಭಿಣಿಯರಿದ್ದಾರೆ. ಅನಾರೋಗ್ಯಪೀಡಿತರು, ಅಶಕ್ತರೂ ಇದ್ದಾರೆ. ಇವರೆಲ್ಲರನ್ನು ನೋಡಿಕೊಳ್ಳಬೇಕಾದ ಜಿಲ್ಲಾಡಳಿತ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ಈಕೆಯ ಆರೋಪಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ, ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ, ಈಕೆಯನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಅವಕಾಶ ಒದಗಿಸುವ ಭರವಸೆ ನೀಡಿದೆ.

ದುಬಾರಿ ವಸತಿ ಪಡೆಯಲು ಒತ್ತಾಯ: 176 ಪ್ರಯಾಣಿಕರ ಪೈಕಿ 33 ಮಂದಿಯನ್ನು ಹೊರತುಪಡಿಸಿ ಬೇರೆಲ್ಲರೂ ಶುಲ್ಕ ತೆತ್ತು ಕ್ವಾರಂಟೈನ್‌ಗೆ ಸಿದ್ಧರಾಗಿದ್ದರು. ಆದರೆ 33 ಮಂದಿ ತಮಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ವಸತಿಗೃಹ ಬದಲು ಹಾಸ್ಟೆಲ್‌ನಲ್ಲಿ ಸಾಕು ಎಂದು ತಿಳಿಸಿದ್ದರು. ಆದರೆ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ, ವಸತಿಗೃಹ ಪಡೆದುಕೊಳ್ಳುವಂತೆ ಜಿಲ್ಲಾಡಳಿತದ ಅಧಿಕಾರಿಗಳು ತಾಕೀತು ಮಾಡುತ್ತಿದ್ದರು. 14 ದಿನಕ್ಕೆ ಸಾವಿರಗಟ್ಟಲೆ ಮೊತ್ತವನ್ನು ನೀಡಲು ಸಾಧ್ಯವಿಲ್ಲ. ನಮ್ಮಲ್ಲಿ ಅಷ್ಟೊಂದು ಹಣವಿಲ್ಲ ಎಂದು ಈ ಮಂದಿ ಪರಿಪರಿಯಾಗಿ ಹೇಳಿಕೊಂಡರೂ ಇದನ್ನು ಕೇಳಿಸಿಕೊಳ್ಳುವ ವ್ಯವಧಾನ ಅಧಿಕಾರಿಗಳಲ್ಲೂ ಇರಲಿಲ್ಲ ಎಂದು ಸಂತ್ರಸ್ತ ಯಾನಿಗಳು ದೂರಿದ್ದಾರೆ. ಯಾನಿಗಳು ಈ ದೂರು ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೊರೋನಾ ಎಫೆಕ್ಟ್: ಗಿರಿಯ ನಾಡಿನಲ್ಲಿ ಕುಸಿದ ಪ್ರವಾಸೋದ್ಯಮ

ಬಂಟ್ವಾಳ ಮಾಣಿಯ ದಾರುಲ್‌ ಇರ್ಶಾದ್‌ ಮತ್ತು ಮಂಜನಾಡಿಯ ಅಲ್‌ ಮದೀನಾ ಹಾಸ್ಟೆಲ್‌ನ್ನು ಸಾಂಸ್ಥಿಕ ಕ್ವಾರಂಟೈನ್‌ ಆಗಿ ಜಿಲ್ಲಾಡಳಿತ ಗುರುತಿಸಿತ್ತು. ಅಲ್ಲಿ ನಮಗೆ ವಸತಿ ವ್ಯವಸ್ಥೆ ಕಲ್ಪಿಸುವಂತೆ ಯಾನಿಗಳು ಕೋರಿಕೊಂಡಿದ್ದರು. ಆದರೆ ಜಿಲ್ಲಾಡಳಿತ ಅದಕ್ಕೂ ಅವಕಾಶ ನೀಡದೆ, ವಸತಿಗೃಹವನ್ನು ಆಯ್ಕೆ ಮಾಡುವಂತೆ ಒತ್ತಡ ಹೇರಿತ್ತು ಎಂದು ಸಂತ್ರಸ್ತ ಯಾನಿಯೊಬ್ಬರು ಆರೋಪಿಸಿದ್ದಾರೆ. ಅತಂತ್ರ ಸ್ಥಿತಿಯಲ್ಲಿದ್ದ ಯಾನಿಗಳಿಗೆ ಸಂಘಸಂಸ್ಥೆಗಳು ಆಹಾರದ ವ್ಯವಸ್ಥೆ ಕಲ್ಪಿಸಿದ್ದು, ದಿನದ ಮಟ್ಟಿಗೆ ವಸತಿ ಸೌಲಭ್ಯವನ್ನೂ ಮಾಡಿರುವುದಾಗಿ ಹೇಳಿಕೊಂಡಿವೆ.

ಜಿಲ್ಲಾಡಳಿತಕ್ಕೆ ಖಾದರ್‌ ತರಾಟೆ: ದುಬೈ ಯಾನಿಗಳು ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಗೆ ಒಳಗಾಗಿರುವ ಬಗ್ಗೆ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌ ಅವರು ಜಿಲ್ಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದೇಶದಿಂದ ಬಂದವರು ನಮ್ಮವರು ಎಂಬ ಭಾವನೆ ನಮಗೆ ಇರಬೇಕು. ಅಧಿಕಾರಿಗಳು ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜನಪ್ರತಿನಿಧಿಗಳನ್ನು ನಂಬಿಸಿದ್ದರು. ವಿಮಾನ ನಿಲ್ದಾಣಕ್ಕೆ ಜನಪ್ರತಿನಿಧಿಗಳ ಪ್ರವೇಶವನ್ನು ನಿರಾಕರಿಸಿದ್ದರು. ಹೀಗಾಗಿ ನಮಗೂ ವಿಮಾನ ನಿಲ್ದಾಣಕ್ಕೆ ಬರಲು ಆಗಲಿಲ್ಲ. ಪ್ರಥಮ ವಿಮಾನ ಆಗಮಿಸಿದಾಗ ಲೋಪದೋಷಗಳು ಆಗಿರಬಹುದು. ಅದನ್ನು ಮುಂದೆ ಸರಿಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡುತ್ತೇನೆ ಎಂದಿದ್ದಾರೆ.

ಅನಗತ್ಯ ಬರಬೇಡಿ; ಜಾಲತಾಣದಲ್ಲಿ ಪ್ರಚಾರ!

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ದುಬೈ ಯಾನಿಗಳನ್ನು ನಡೆಸಿಕೊಂಡ ರೀತಿಯಿಂದ ಕೆಂಗೆಟ್ಟುಹೋಗಿರುವ ಯಾನಿಗಳ ಕುಟುಂಬಸ್ಥರು ಈಗ ಅನವಶ್ಯಕವಾಗಿ ಮಂಗಳೂರಿಗೆ ಬರುವ ಸಾಹಸ ಮಾಡಬೇಡಿ ಎಂದು ಅನಿವಾಸಿ ಕನ್ನಡಿಗರಿಗೆ ಜಾಲತಾಣ ಮೂಲಕ ವಿನಂತಿಸುತ್ತಿದ್ದಾರೆ.

ವೀಸಾ ರದ್ದತಿಗೊಂಡವರು, ಕೆಲಸ ಕಳಕೊಂಡಿದ್ದರೆ ಅಥವಾ ಅನಾರೋಗ್ಯ ಸಮಸ್ಯೆಯಂತಹ ತುರ್ತು ಇದ್ದರೆ ಮಾತ್ರ ಮಂಗಳೂರಿಗೆ ಬರುವ ನಿರ್ಧಾರ ಕೈಗೊಳ್ಳಿ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದವರನ್ನು ನಡೆಸಿಕೊಳ್ಳುವ ರೀತಿ ಹಾಗೂ ಜಿಲ್ಲಾಡಳಿತದ ಕ್ವಾರಂಟೈನ್‌ ಸೌಲಭ್ಯ ಸಮರ್ಪಕವಾಗಿಲ್ಲ ಎಂದು ಬಹಿರಂಗವಾಗಿಯೇ ಜಾಲತಾಣಗಳಲ್ಲಿ ಪಸರಿಸುತ್ತಿದ್ದಾರೆ. ಆದರೆ ಈ ಆರೋಪಗಳನ್ನು ದ.ಕ. ಜಿಲ್ಲಾಡಳಿತ ನಿರಾಕರಿಸಿದೆ.

ಸಭೆ ನಡೆಸಿದರೂ ಜಿಲ್ಲಾಡಳಿತ ಎಡವಿತೇ?

ದುಬೈ ಸೇರಿದಂತೆ ವಿದೇಶದಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸುವ ಬಗ್ಗೆ ಸಾಕಷ್ಟುಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿದರೂ ಕೊನೆಗೆ ಆರೋಪ ಎದುರಿಸುವ ಪ್ರಮೇಯ ಯಾಕೆ ಬಂತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ.

ಹತ್ತುಹಲವು ಸಭೆಗಳನ್ನು ನಡೆಸಿ, ಸಾಕಷ್ಟುಹೊಟೇಲ್‌ ಮತ್ತು ಹಾಸ್ಟೆಲ್‌ಗಳನ್ನು ಗುರುತಿಸಿದ್ದ ಜಿಲ್ಲಾಡಳಿತ, ಕೊನೆಗೆ ಕಷ್ಟದಲ್ಲಿರುವ ಯಾನಿಗಳಿಗೆ ಉಚಿತ ಕ್ವಾರಂಟೈನ್‌ಗೆ ಸ್ಪಂದಿಸಲು ಸಾಧ್ಯವಾಗಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ವಿಮಾನ ನಿಲ್ದಾಣದಲ್ಲಿ ನಿರ್ಗಮನ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಮಧ್ಯರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆ ವರೆಗೆ ಯಾನಿಗಳನ್ನು ನಡೆಸಿಕೊಂಡ ರೀತಿ, ನಂತರ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸುವಲ್ಲಿನ ಎಡವಟ್ಟುಗಳು ಜಿಲ್ಲಾಡಳಿತಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಈ ಲೋಪಗಳನ್ನು ಕೂಡಲೇ ಸರಿಪಡಿಸಿಕೊಂಡರೆ, ಮುಂದೆ ಆಗಮಿಸುವ ಯಾನಿಗಳಿಗೆ ಅನುಕೂಲವಾಗಲಿದೆ ಎಂಬುದು ಸಂತ್ರಸ್ತ ಯಾನಿಗಳ ಅಭಿಪ್ರಾಯ.

ಅತಿಥಿ ಉಪನ್ಯಾಸಕರಿಗೆ ವರ್ಷ ಪೂರ್ತಿ ವೇತನಕ್ಕೆ ಆಗ್ರಹ; ಸಂಸದ ರಾಘವೇಂದ್ರಗೆ ಮನವಿ

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ವಿದೇಶದಿಂದ ಆಗಮಿಸಿದವರು 14 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಜಿಲ್ಲಾಡಳಿತದಿಂದ ಯಾವುದೇ ಲೋಪವಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ತಪ್ಪು ಮಾಹಿತಿ ನೀಡಬಾರದು ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.

ವಿದೇಶದಿಂದ ಬಂದವರು ನಮ್ಮವರು ಎಂಬ ಭಾವನೆ ನಮಗೆ ಇರಬೇಕು. ಅಧಿಕಾರಿಗಳು ಸೌಲಭ್ಯ ಕಲ್ಪಿಸಿರುವ ಬಗ್ಗೆ ಸೂಕ್ತ ಗಮನ ಹರಿಸಬೇಕು. ಮುಂದಿನ ಹಂತದಲ್ಲಿ ಈ ರೀತಿ ಲೋಪದೋಷ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಯು.ಟಿ.ಖಾದರ್‌ ತಿಳಿಸಿದ್ದಾರೆ.

click me!