ಮಡಿಕೇರಿ : ಸ್ಥಗಿತವಾದ ಬಸ್ ಮತ್ತೆ ಶೀಘ್ರ ಸಂಚಾರ?

By Kannadaprabha NewsFirst Published Aug 31, 2020, 1:22 PM IST
Highlights

ಕೊರೋನಾ ಲಾಕ್‌ಡೌನ್‌ನಿಂದ ಸ್ಥಗಿತವಾಗಿರುವ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಶನಿವಾರಸಂತೆ (ಆ.31): ಶನಿವಾರಸಂತೆ, ಗೋಪಾಲಪುರ, ಮುಳ್ಳೂರು, ಮಾಲಂಬಿ, ಆಲೂರು ಸಿದ್ದಾಪುರ, ಬಾಣವಾರ ಮಾರ್ಗವಾಗಿ ಕುಶಾಲನಗರ ಕಡೆಗೆ ಕಳೆದ 5 ತಿಂಗಳಿನಿಂದ ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದೆ. 

ಈ ಭಾಗದ ಪ್ರಯಾಣಿಕರು ಖಾಸಗಿ ವಾಹನ, ಬಾಡಿಗೆ ವಾಹನ ಮಾಡಿಕೊಂಡು ಅಧಿಕ ಹಣತೆತ್ತು ಪ್ರಯಾಣಿಸುತ್ತಿದ್ದಾರೆ. ಈ ಮಾರ್ಗವಾಗಿ ಮತ್ತೊಂದು ಕೆಎಸ್‌ಆರ್‌ಟಿ ಬಸ್ಸು ಸಂಚಾರಕ್ಕಾಗಿ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮೀಣ ಭಾಗದ ಪ್ರಯಾಣಿಕರು ಮಡಿಕೇರಿ ವಿಭಾಗದ ವ್ಯವಸ್ಥಾಪಕರಿಗೆ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ಅಂದು ಪರಿಹಾರಕ್ಕಾಗಿ ಜಗಳವಾಡಿದ್ದ ತಲಕಾವೇರಿ ಅರ್ಚಕರ ಮಕ್ಕಳ ಮತಾಂತರದ ವಿಷ್ಯ ರಟ್ಟು

ಕಳೆದ ಐದು ತಿಂಗಳಿನಿಂದ ಕೋವಿಡ್‌-19 ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಖಾಸಗಿ ಬಸ್ಸುಗಳಲ್ಲಿ ಓಡಾಡುತ್ತಾರೆ. ಆದರೆ ಐದು ತಿಂಗಳಿನಿಂದ ಖಾಸಗಿ ಬಸ್‌ಗಳ ಓಡಾಟ ಸ್ಥಗಿತಗೊಂಡಿರುವುದಲ್ಲದೆ, ಸರ್ಕಾರಿ ಸಾರಿಗೆ ಬಸ್‌ಗಳೂ ಇಲ್ಲದೆ ಗ್ರಾಮೀಣ ಭಾಗದ ಸಾರ್ವಜನಿಕರು, ಉದ್ಯೋಗಿಗಳು, ಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ. ಬಾಡಿಗೆ ವಾಹನದಲ್ಲಿ ಅಧಿಕ ಹಣತೆತ್ತು ಪ್ರಯಾಣಿಸುವಂತಾಗಿದೆ.

ಬ್ರಹ್ಮಗಿರಿ ಬೆಟ್ಟ ಕುಸಿತ; ಈ ಕಾರಣಕ್ಕೆ ಕಾವೇರಿ ತಾಯಿ ಮುನಿಸಿಕೊಂಡಳಾ?...

ಈ ಮಾರ್ಗದಲ್ಲಿ ಪ್ರತಿದಿನ 25 ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದರಿಂದ ಈ ಭಾಗದ ಜನರಿಗೆ ಸಮಸ್ಯೆ ಉಂಟಾಗಿರಲಿಲ್ಲ. ಇದೇ ಮಾರ್ಗವಾಗಿ ಹಲವಾರು ವರ್ಷಗಳಿಂದ ಕೇವಲ ಒಂದೇ ಒಂದು ರಾಜ್ಯ ಸಾರಿಗೆ ಬಸ್‌ ಸಂಚರಿಸುತ್ತಿದೆ. ಈ ಬಸ್‌ ಸಕಲೇಶಪುರ, ಶನಿವಾರಸಂತೆ, ಆಲೂರುಸಿದ್ದಾಪುರ, ಬಾಣವಾರ, ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ಬೆಳಗ್ಗೆ 9.30ಕ್ಕೆ ಈ ಮಾರ್ಗವಾಗಿ ಸಂಚರಿಸಿ ಇದೆ ಮಾರ್ಗವಾಗಿ ಸಂಜೆ 4.30ಕ್ಕೆ ಸಕಲೇಶಪುರ ಕಡೆಗೆ ವಾಪಸಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

click me!