ಚಿಕ್ಕಬಳ್ಳಾಪುರ ಉತ್ಸವಕ್ಕೆ ಊರ ಹಬ್ಬದ ಮೆರುಗು..!

By Kannadaprabha NewsFirst Published Jan 12, 2023, 11:57 AM IST
Highlights

ಚಿಕ್ಕಬಳ್ಳಾಪುರ ಉತ್ಸವದ ಹಿನ್ನೆಲೆಯಲ್ಲಿ 5ನೇ ದಿನವಾದ ಬುಧವಾರ ತಾಲೂಕಿನ ಹಲವು ಗ್ರಾಮಗಳಲ್ಲಿ ಅದ್ಧೂರಿಯಾಗಿ ನಡೆದ ಊರಹಬ್ಬದ ವಿಶೇಷಗಳಿವು. ಗ್ರಾಮಗಳಿಗೆ ಕಾಲಿಟ್ಟರೆ ಊರ ಹಬ್ಬಕ್ಕೆ ಸ್ವಾಗತ ಕೋರುವ ಸ್ವಾಗತ ಕಾಮಾನುಗಳು ಒಂದಡೆಯಾದರೆ, ಕಿವಿಗೆ ಇಂಪು ನೀಡುವ ಡೋಲು, ನಾದಸ್ವರಗಳ ನಿನಾದ ಹೊಸ ಉತ್ಸಾಹ ಮೂಡಿಸಿತು.

ಚಿಕ್ಕಬಳ್ಳಾಪುರ(ಜ.12): ಮೊಳಗಿದ ಡೋಲು, ನಾದಸ್ವರದ ನಿನಾದ... ನವ ವಧುವಿನಂತೆ ತಳಿರು-ತೋರಣಗಳಿಂದ ಸಿಂಗಾರಗೊಂಡ ಗ್ರಾಮಗಳು. ರಂಗೋಲಿಗಳ ಚಿತ್ತಾರದಿಂದ ಅಂದಗೊಂಡ ರಾಜ ಬೀದಿಗಳು, ಅಲಂಕೃತ ಪಲ್ಲಕ್ಕಿಗಳಲ್ಲಿ ಹೂವಿನ ಸಿಂಗಾರದೊಂದಿಗೆ ವಿರಾಜಮಾನವಾದ ಗ್ರಾಮ ದೇವತೆಗಳು, ಕಳಶಗಳ ಹೊತ್ತು ಮೆರವಣಿಗೆ ನಡೆಸಿದ ಮುತ್ತೈದೆಯರು!

ಚಿಕ್ಕಬಳ್ಳಾಪುರ ಉತ್ಸವದ ಹಿನ್ನೆಲೆಯಲ್ಲಿ 5ನೇ ದಿನವಾದ ಬುಧವಾರ ತಾಲೂಕಿನ ಹಲವು ಗ್ರಾಮಗಳಲ್ಲಿ ಅದ್ಧೂರಿಯಾಗಿ ನಡೆದ ಊರಹಬ್ಬದ ವಿಶೇಷಗಳಿವು. ಗ್ರಾಮಗಳಿಗೆ ಕಾಲಿಟ್ಟರೆ ಊರ ಹಬ್ಬಕ್ಕೆ ಸ್ವಾಗತ ಕೋರುವ ಸ್ವಾಗತ ಕಾಮಾನುಗಳು ಒಂದಡೆಯಾದರೆ, ಕಿವಿಗೆ ಇಂಪು ನೀಡುವ ಡೋಲು, ನಾದಸ್ವರಗಳ ನಿನಾದ ಹೊಸ ಉತ್ಸಾಹ ಮೂಡಿಸಿತು.

Chikkaballapur Utsav: ಬರದ ನಾಡನ್ನು ಮಲೆನಾಡು ಮಾಡಿದ ಸುಧಾಕರ್‌: ಸಚಿವ ಸೋಮಣ್ಣ

ತುಂಬಿದ ಕೆರೆಗಳಿಗೆ ಬಾಗಿನ: 

ದಶಕಗಳ ನಂತರ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ನೋಡುವಂತಾಗಿದೆ. ವಿಫಲವಾದ ಕೊಳವೆ ಬಾವಿಗಳಲ್ಲಿಯೂ ನೀರು ಉಕ್ಕುತ್ತಿರುವುದನ್ನು ಕಂಡು ರೈತರು ಸಂತಸಗೊಂಡಿದ್ದಾರೆ. ಇದರಿಂದಾಗಿ ರೈತರು ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸುವ ಮೂಲಕ ಭಕ್ತಿ ತೋರಿಸುವ ಕೆಲಸ ಮಾಡಿದರು. ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿ ಗ್ರಾಪಂನಿಂದ ಊರಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಸುತ್ತಮುತ್ತಲ ಸುಮಾರು ನಾಲ್ಕು ಗ್ರಾಮಗಳ 500ಕ್ಕೂ ಹೆಚ್ಚು ಜನರು ಸೇರಿ, ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ವೀರಗಾಸೆ, ಮಂಗಳವಾದ್ಯಗಳೊಂದಿಗೆ ಪೂರ್ಣಕುಂಭ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿಸಿ, ನಂತರ ಕೆರೆಯವರೆಗೂ ಪೂರ್ಣಕುಂಭ ಮತ್ತು ವೀರಗಾಸೆಯೊಂದಿಗೆ ಸಾಗಿ ನಾಗರಬಾವಿ ಕೆರೆಗೆ ಬಾಗಿನ ಸಮರ್ಪಣೆ ಮಾಡಿದರು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ, ಬೊಮ್ಮನಹಳ್ಳಿ, ನಂದಿ, ಪೆರೇಸಂದ್ರ ಸೇರಿದಂತೆ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಊರ ಹಬ್ಬ ಅದ್ಧೂರಿಯಾಗಿ ನೆರವೇರಿತು.

ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ

ವಿವಿಧ ಗ್ರಾಮಗಳಲ್ಲಿ ಗ್ರಾಮದ ಹೆಬ್ಬಾಗಿಲಿಗೆ ತಳಿರು ತೋರಣಗಳ ಸಿಂಗಾರ ಮಾಡಿ, ಗ್ರಾಮದೇವತೆಗಳನ್ನು ಗ್ರಾಮದ ಮಧ್ಯೆ ಪ್ರತಿಷ್ಠಾಪಿಸಿ, ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಪ್ರಸ್ತುತ ಇರುವ ಸಮೃದ್ಧಿ ನಿರಂತರವಾಗಿ ಮುಂದುವರಿಯಲಿ ಎಂಬ ಬೇಡಿಕೆಯನ್ನು ಗ್ರಾಮದೇವತೆಗಳಲ್ಲಿ ಕೋರಲಾಯಿತು. ಹಲವು ಗ್ರಾಮಗಳಲ್ಲಿ ಗ್ರಾಮದೇವರ ಪಲ್ಲಕ್ಕಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.

ಸಚಿವ ಸುಧಾಕರ್‌ಗೆ ಕ್ಷೇತ್ರದಲ್ಲಿ ಎದುರಾಳಿಯೇ ಇಲ್ಲ: ಬಿಸಿಪಾ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವಿರುದ್ಧ ಸ್ಪರ್ಧಿಸಲು ಎದುರಾಳಿಯೇ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಚಿಕ್ಕಬಳ್ಳಾಪುರ ಉತ್ಸವದ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಚಿಕ್ಕಬಳ್ಳಾಪುರದ ಅದ್ಧೂರಿ ಉತ್ಸವ ನೋಡಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ ಎಂದರು.

Chikkaballapura: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗ ಮೇಳ : 12 ಸಾವಿರ ಜನರಿಗೆ ಕೆಲಸದ ಭರವಸೆ

ಕೋವಿಡ್‌ ಎದುರಿಸಿದರು: 

ಉತ್ಸವದ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೊಸ ರೂಪ ನೀಡಲು ಸಚಿವ ಸುಧಾಕರ್‌ ಮುಂದಾಗಿದ್ದಾರೆ. ಸುಧಾಕರ್‌ ಅವರು 2019, 2020, 2021ರಲ್ಲಿ ರಾಜ್ಯವನ್ನು ಆವರಿಸಿದ್ದ ಕೋವಿಡ್‌ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿ ಲಕ್ಷಾಂತರ ಜನರ ಜೀವ ಉಳಿಸಿದ ಸುಧಾಕರ್‌ಗೆ ರಾಜ್ಯದಲ್ಲಿ ಉತ್ತಮ ಭವಿಷ್ಯ ಇದೆ. ಅವರ ರಾಜ್ಯಕ್ಕೆ, ದೇಶಕ್ಕೆ ಆಸ್ತಿ ಆಗಬೇಕು, ಅವರನ್ನು ಕ್ಷೇತ್ರದ ಜನತೆ ಕೈಹಿಡಿಯಬೇಕೆಂದು ಬಿ.ಸಿ.ಪಾಟೀಲ್‌ ಮನವಿ ಮಾಡಿದರು.
ಜತೆಗೆ, ಸುಧಾಕರ್‌ ಕಲಾ ರಸಿಕ, ಕಲಾನಿಕೇತನ, ಕಲಾ ಚತುರ. ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿರುವುದು ನಿಮ್ಮ ಭಾಗ್ಯ, ಸುಧಾಕರ್‌ಗೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಭವಿಷ್ಯ ಇದೆ ಎಂದರು.

10 ಕೋಟಿ ವೆಚ್ಚದಲ್ಲಿ ಕೋಲ್‌ ಸ್ಟೋರೆಜ್‌: 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಸಂಸ್ಕರಣ ಕೇಂದ್ರ ಅಗತ್ಯವಾಗಿ ಬೇಕೆಂದು ಸುಮಾರು 10 ಕೋಟಿ ರು. ವೆಚ್ಚದಲ್ಲಿ ಕೃಷಿ ಇಲಾಖೆಯಿಂದ ಕೋಲ್ಡ್‌ ಸ್ಟೋರೆಜ್‌ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಕಾಮಗಾರಿ ಭರದಿಂದ ಸಾಗಿದೆ ಎಂದರು.

click me!