ಮಂಗಳೂರು: ಅಯೋಧ್ಯೆಗೆ ತೆರಳುವ ಮುನ್ನ ಮೂಲ ಮಠ ಕಣ್ವತೀರ್ಥಕ್ಕೆ ಪೇಜಾವರ ಶ್ರೀ ಭೇಟಿ

Published : Jan 10, 2024, 06:52 AM IST
ಮಂಗಳೂರು: ಅಯೋಧ್ಯೆಗೆ ತೆರಳುವ ಮುನ್ನ ಮೂಲ ಮಠ ಕಣ್ವತೀರ್ಥಕ್ಕೆ ಪೇಜಾವರ ಶ್ರೀ ಭೇಟಿ

ಸಾರಾಂಶ

ಕಣ್ವತೀರ್ಥದ ಶ್ರೀರಾಮಾಂಜನೇಯ ದೇವಸ್ಥಾನದ ತೀರ್ಥಕೆರೆಯಲ್ಲಿ ತೀರ್ಥಸ್ನಾನ ಮಾಡಿ ಶ್ರೀರಾಮಾಂಜನೇಯ ದೇವರಿಗೆ ಆರತಿ ಬೆಳಗಿದರು. ಬಳಿಕ ಮೆರವಣಿಗೆಯಲ್ಲಿ ಕಡಲ ತೀರಕ್ಕೆ ತೆರಳಿ ಸಮುದ್ರ ಪೂಜೆ ನೆರವೇರಿಸಿದರು. ಸಮುದ್ರ ರಾಜನಿಗೆ ಹಾಲೆರೆದು, ಹೂವು ಅರ್ಪಿಸಿ ಅಭಿಷೇಕ ನೆರವೇರಿಸಿ ಆರತಿ ಬೆಳಗಿದರು. ಅಲ್ಲದೆ ಸಮುದ್ರ ಸ್ನಾನ ಜತೆಗೆ ಸಮುದ್ರದಲ್ಲಿ ಈಜಿ ಸಂಭ್ರಮಿಸಿದರು.

ಮಂಗಳೂರು(ಜ.10): ಜ.22ರಂದು ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ತೆರಳಲಿರುವ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸದಸ್ಯರಾಗಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಉಡುಪಿ ಅಷ್ಟ ಮಠಗಳಿಗೆ ಮೂಲ ಮಠವಾದ ಗಡಿನಾಡು ಕಾಸರಗೋಡಿನ ಮಂಜೇಶ್ವರ ಕಣ್ವತೀರ್ಥ ಮಠಕ್ಕೆ ಮಂಗಳವಾರ ಭೇಟಿ ನೀಡಿದರು.

ಕಣ್ವತೀರ್ಥದ ಶ್ರೀರಾಮಾಂಜನೇಯ ದೇವಸ್ಥಾನದ ತೀರ್ಥಕೆರೆಯಲ್ಲಿ ತೀರ್ಥಸ್ನಾನ ಮಾಡಿ ಶ್ರೀರಾಮಾಂಜನೇಯ ದೇವರಿಗೆ ಆರತಿ ಬೆಳಗಿದರು. ಬಳಿಕ ಮೆರವಣಿಗೆಯಲ್ಲಿ ಕಡಲ ತೀರಕ್ಕೆ ತೆರಳಿ ಸಮುದ್ರ ಪೂಜೆ ನೆರವೇರಿಸಿದರು. ಸಮುದ್ರ ರಾಜನಿಗೆ ಹಾಲೆರೆದು, ಹೂವು ಅರ್ಪಿಸಿ ಅಭಿಷೇಕ ನೆರವೇರಿಸಿ ಆರತಿ ಬೆಳಗಿದರು. ಅಲ್ಲದೆ ಸಮುದ್ರ ಸ್ನಾನ ಜತೆಗೆ ಸಮುದ್ರದಲ್ಲಿ ಈಜಿ ಸಂಭ್ರಮಿಸಿದರು.

ಹಿಂದುಗಳು ಒಂದೆರಡು ಮಕ್ಕಳಿಗೆ ಜನ್ಮ ನೀಡಿದ್ರೆ ಸಾಲದು; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ!

ಬಳಿಕ ಶ್ರೀರಾಮಾಂಜನೇಯ ದೇವಸ್ಥಾನಕ್ಕೆ ಆಗಮಿಸಿ ನವೀಕೃತ ಹೊರ ಸುತ್ತು ಪೌಳಿಯನ್ನು ಲೋಕಾರ್ಪಣೆಗೊಳಿಸಿದರು. ಪೇಜಾವರಶ್ರೀಗಳ 60 ನೇ ವರ್ಷದ ನೆನಪಿಗಾಗಿ ಈ ಸುತ್ತು ಪೌಳಿ ನವೀಕರಣಗೊಳಿಸಲಾಗಿದೆ. ಈ ವೇಳೆ ನಡೆದ ಸರಳ ಸಮಾರಂಭದಲ್ಲಿ ಸುತ್ತು ಪೌಳಿ ನವೀಕರಣದ ಉಸ್ತುವಾರಿ ವಹಿಸಿದ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ದಂಪತಿಯನ್ನು ಪೇಜಾವರಶ್ರೀ ಗೌರವಿಸಿದರು.

ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿಯ ಮೂಲ ಮಠವಾದ ಈ ಕಣ್ವ ಮಠದಲ್ಲಿ ಶ್ರೀರಾಮನಿಗೆ ನವೀಕೃತ ಸುತ್ತು ಪೌಳಿ ಅರ್ಪಿಸಲಾಗಿದೆ. ಇಲ್ಲಿಂದ ನಾವು ಅಯೋಧ್ಯೆ ಶ್ರೀರಾಮನ ಮಂದಿರ ಸಮರ್ಪಣೆಗೆ ತೆರಳುವವರಿದ್ದೇವೆ. ಇಲ್ಲಿ ಶ್ರೀರಾಮನ ಜತೆಗೆ ವಿಠಲನೂ ಇದ್ದು, ರಾಮ ವಿಠಲ ಮಠದ ನಮ್ಮ ಪಟ್ಟದ ದೇವರು. ಶ್ರೀಕೃಷ್ಣನ ನಿತ್ಯ ಪೂಜೆಗೆ ಪರ್ಯಾಯ ಶ್ರೀಗಳಿಗೆ ತೊಂದರೆ ಆದಾಗ ಇನ್ನೊಂದು ಮಠ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಇದಕ್ಕೆ ದ್ವಂದ್ವ ಮಠ ಎನ್ನುತ್ತೇವೆ. ಈ ಪರಿಕಲ್ಪನೆ ಇಲ್ಲಿಂದಲೇ ಆರಂಭವಾಗಿದೆ. ಶ್ರೀಕಣ್ವ ಮಹರ್ಷಿಯ ತಪೋಭೂಮಿ, ಆಚಾರ್ಯ ಮಧ್ವರು ಸ್ಥಾಪಿಸಿದ ಮೂಲಮಠ, ಗೃಹಣಕಾಲದಲ್ಲಿ ಮಧ್ವರು ಸಮುದ್ರ ಸ್ನಾನ ಮಾಡಿದ ಪವಿತ್ರ ಪ್ರದೇಶ ಇದು ಎಂದರು. ಮಂಗಳೂರು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಸುಧಾಕರ ರಾವ್‌ ಪೇಜಾವರ ಇದ್ದರು.

ಮಂಗಳೂರು: ಅರುಣ್‌ ಕುಮಾರ್‌ ಪುತ್ತಿಲ ಜತೆಗಿನ ಬಿಜೆಪಿ ಸಂಧಾನ ಬಾಗಿಲು ಬಂದ್‌?

ರಾಮ ಮಂದಿರ ಬ್ರಹ್ಮಕಲಶೋತ್ಸವ ನೇತೃತ್ವ; ಪೇಜಾವರಶ್ರೀ 15ರಂದು ಅಯೋಧ್ಯೆಗೆ

ಜ.15ರಂದು ಉಡುಪಿಯಿಂದ ಅಯೋಧ್ಯೆಗೆ ಹೊರಡುವ ಪೇಜಾವರಶ್ರೀಗಳು 48 ದಿನಗಳ ಮಂಡಲ ಪೂರೈಸುವ ವರೆಗೆ ಅಯೋಧ್ಯೆಯಲ್ಲೇ ಇದ್ದು ಶ್ರೀರಾಮ ಮಂದಿರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಜ.14ರಂದು ಹರಿಪಾದ ಸೇರಿದ ಶ್ರೀವಿಶ್ವೇಶತೀರ್ಥರ ಪುಣ್ಯತಿಥಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯಲಿದೆ. ಜ.10 ರಿಂದ 13ರ ವರೆಗೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 13 ವರ್ಷ ಕಾಲ ವೇದಾಧ್ಯಯನ ನಡೆಸಿದ ಅಭ್ಯಾಸಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡಯಲಿದೆ. ಇದಕ್ಕೆ ಪೂರಕವಾಗಿ ಅಭ್ಯಾಸಿಗಳಿಗೆ ಮೌಖಿಕ ಕಠಿಣ ವಾಕ್‌ ಪರೀಕ್ಷೆ ನಡೆಯಲಿದೆ. ಜ.13ರಿಂದ 16ರ ವರೆಗೆ ನೀಲಾವರ ಗೋಶಾಲೆಯ ವಾರ್ಷಿಕೋತ್ಸವ ನಡೆಯಲಿದೆ.

ಇವೆಲ್ಲರದಲ್ಲಿ ಪಾಲ್ಗೊಂಡ ಬಳಿಕ ಜ15ರಂದು ಉಡುಪಿಯಲ್ಲಿ ಚೂರ್ಣೋತ್ಸವದಲ್ಲಿ ಭಾಗವಹಿಸಿ ಅಂದೇ ರಾತ್ರಿ ಅಯೋಧ್ಯೆಗೆ ತೆರಳಲಿದ್ದೇವೆ. ಬಳಿಕ 48 ದಿನಗಳ ಕಾಲ ಒಂದು ಮಂಡಲ ಅವಧಿಯಲ್ಲಿ ಅಯೋಧ್ಯೆಯಲ್ಲೇ ತಂಗಲಿದ್ದೇವೆ. ಈ ವೇಳೆ ಶ್ರೀರಾಮ ಮಂದಿರ ಲೋಕಾರ್ಪಣೆಯ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ನೇತೃತ್ವದಲ್ಲೇ ನಡೆಯಲಿದೆ. ನಿತ್ಯ ಕಲಶಾಭಿಷೇಕ, ಯಜ್ಞ ಯಾಗಗಳು, ಪಾಲಕಿ ಉತ್ಸವ ಇತ್ಯಾಗಿ ವಿವಿಧ ಕಾರ್ಯಕ್ರಮ ನೆರವೇರಲಿದೆ ಎಂದರು.

PREV
Read more Articles on
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?