ಹೆಣ್ಣು ಮಕ್ಕಳ ಶೌಚಾಲಯಗಳ ಬಗ್ಗೆ ಗಮನಹರಿಸಿ

By Kannadaprabha NewsFirst Published Jan 20, 2023, 5:58 AM IST
Highlights

  ಹೆಣ್ಣು ಮಕ್ಕಳ ಶೌಚಾಲಯಗಳ ಬಗ್ಗೆ ತಕ್ಷಣ ಗಮನಹರಿಸಿ ಶೌಚಾಲಯಗಳಿಲ್ಲದ ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನಿಯೋಗ ಜಿ.ಪಂ. ಸಿಇಓ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿತು.

  ತುಮಕೂರು :  ಹೆಣ್ಣು ಮಕ್ಕಳ ಶೌಚಾಲಯಗಳ ಬಗ್ಗೆ ತಕ್ಷಣ ಗಮನಹರಿಸಿ ಶೌಚಾಲಯಗಳಿಲ್ಲದ ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನಿಯೋಗ ಜಿ.ಪಂ. ಸಿಇಓ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಗೆ ಗುರುವಾರ ವಿವಿಧ ಕಾಂಗ್ರೆಸ್‌ ಮುಖಂಡರೊಂದಿಗೆ ಭೇಟಿ ನೀಡಿ ಸಿಇಒ ಅವರೊಂದಿಗೆ ಚರ್ಚಿಸಿದ ಮುರಳೀಧರ ಹಾಲಪ್ಪ, ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ದುರಸ್ಥಿಗೊಳಿಸಿ ಶಾಲೆಗಳ ಸುತ್ತ ಕಾಂಪೌಂಡ್‌ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ಕುಡಿಯುವ ನೀರಿನ ಸಮಸ್ಯೆ ಇದ್ದು, ಪಿಡಿಒಗಳ ಮುಖಾಂತರ ವರದಿ ತರಿಸಿಕೊಂಡು, ಆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೋರ್ವೆಲ್‌ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮಕೈಗೊಳ್ಳಬೇಕು, ಬೋರ್ವೆಲ್‌ ವಿಫಲವಾದರೆ ಟ್ಯಾಂಕರ್‌ ಮೂಲಕ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕು, ಗ್ರಾಮೀಣ ಭಾಗಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು ಕೂಡಲೇ ದುರಸ್ಥಿಪಡಿಸಬೇಕು ಎಂದು ಒತ್ತಾಯಿಸಿದರು.

ನರೇಗಾ ಯೋಜನೆಯಡಿಯಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಬೇಕು, ಜಮೀನುಗಳಲ್ಲಿ ಬದುಗಳ ನಿರ್ಮಾಣ, ಇಂಗು ಗುಂಡಿಗಳು, ಕುರಿ, ಮೇಕೆ ಶೆಡ್‌ಗಳ ನಿರ್ಮಾಣ, ಜಮೀನುಗಳಲ್ಲಿ ಸಸಿ ನೆಡುವುದು, ಕೆಟ್ಟಿರುವ ಬೀದಿ ದೀಪ ಹಾಗೂ ಹೈಮಾಸ್‌್ಕ ದೀಪಗಳನ್ನು ಕೂಡ ರಿಪೇರಿ ಮಾಡಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ ನಲ್ಲಿ ಈಗಾಗಲೇ ಕ್ರಿಯಾಯೋಜನೆಗೆ ಅನುಮೋದನೆ ಪಡೆದು, ಪ್ರಾರಂಭಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಇದುವರೆಗೂ ಪ್ರಾರಂಭವಾಗದ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಡಿಆರ್‌ಡಿಎ ಶಾಖೆಯು ನಿರ್ವಹಿಸುವ ವಿವಿಧ ವಸತಿ ಯೋಜನೆಗಳಾದ ಆಶ್ರಯ, ಡಾ.ಅಂಬೇಡ್ಕರ್‌, ಇಂದಿರಾ ಆವಾಸ್‌ ಯೋಜನೆ, ಬಸವ ವಸತಿ ಯೋಜನೆಗಳ ಅನುಷ್ಠಾನ, ಆಶ್ರಯ ನಿವೇಶನ ಯೋಜನೆ ಅನುಷ್ಠಾನ ಮಾಡಬೇಕು, ವಸತಿ ಯೋಜನೆಗಳಡಿ ಬರುವ ದೂರುಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಭಾಗದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು, ಚರಂಡಿ ಸ್ವಚ್ಛತೆ ಮತ್ತು ಗ್ರಾಮ ನೈರ್ಮಲ್ಯವನ್ನು ನಿರ್ವಹಿಸುವುದು, ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸಿಇಓರೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟುಶೌಚಾಲಯಗಳನ್ನು ನಿರ್ಮಿಸಲಾಗಿದೆ. ಎಲ್ಲಿ ಶೌಚಾಲಯಗಳ ಅವಶ್ಯಕತೆ ಇದೆಯೋ ಅಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲು ಜಿಪಂ ಕ್ರಮ ವಹಿಸುತ್ತಿದೆ ಎಂದರು.

ಜಿ.ಪಂಗೆ ಬರುವ ಯಾವುದಾದರೂ ಯೋಜನೆಗಳಿಗೆ ಬಳಸದೆ ವಾಪಸ್‌ ಹೋಗುವಂತಹ ಅನುದಾನವನ್ನು ಗ್ರಾಮೀಣ ಪ್ರದೇಶದ ವಸತಿ ಇಲ್ಲದ ಕುಟುಂಬಗಳಿಗೆ ವಸತಿ ಕಲ್ಪಿಸುವ ಹಾಗೂ ಜಮೀನುಗಳಲ್ಲಿ ಬದುಗಳ ನಿರ್ಮಾಣ, ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ನೇಮಕ ಸೇರಿದಂತೆ ಇತರೆ ಯೋಜನೆಗಳಿಗೆ ಬಳಸುವಂತೆ ಕಾಂಗ್ರೆಸ್‌ ಮುಖಂಡ ರೇವಣ ಸಿದ್ಧಯ್ಯ ಜಿಪಂ ಸಿಇಒ ಅವರಿಗೆ ಮನವಿ ಮಾಡಿದರು.

ಇದಕ್ಕೆ ಇತ್ತರಿಸಿದ ಸಿಇಒ ಡಾ.ಕೆ.ವಿದ್ಯಾಕುಮಾರಿ, ನಮ್ಮಲ್ಲಿ ಕುರಿ, ಮೇಕೆ ಶೆಡ್‌ಗಳ ನಿರ್ಮಾಣಕ್ಕೆ ಎಷ್ಟುಅನುದಾನ ಬೇಕಾದರೂ ಇದೆ. ಇದು ಹೊರತು ಪಡಿಸಿ, ವಾಪಸ್‌ ಹೋಗುವಂತಹ ಅನುದಾನ ಯಾವುದೂ ಇಲ್ಲ, ಎಲ್ಲವನ್ನೂ ಎಲ್ಲಾ ಯೋಜನೆಗಳಲ್ಲೂ ತೊಡಗಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲೂ ಸಹ ಈಗಾಗಲೇ ಹೆಚ್ಚುವರಿ ಸಿಬ್ಬಂದಿ ಇದ್ದು, ಅವರಿಗೇ ವೇತನ ನೀಡಲು ಸಾಧ್ಯವಾಗುತ್ತಿಲ್ಲ, ಹೊಸದಾಗಿ ಸಿಬ್ಬಂದಿ ನೇಮಕ ಪ್ರಸ್ತುತ ಸಾಧ್ಯವಿಲ್ಲ ಎಂದು ನುಡಿದರು.

ಈ ಸಂದರ್ಭದಲ್ಲಿ ಪೀಣ್ಯ ಕೈಗಾರಿಕಾ ಕೇಂದ್ರದ ಮಾಜಿ ಛೇರ್ಮೆನ್‌ ವೆಂಕಟೇಶ್‌, ಮುಖಂಡರಾದ ನಟರಾಜ್‌, ರೇವಣ ಸಿದ್ಧಯ್ಯ, ಚಿಕ್ಕನಾಯಕನಹಳ್ಳಿಯ ವೈದ್ಯ ಡಾ.ಪರಮೇಶ್‌, ಸಂಜೀವ್‌ಕುಮಾರ್‌, ನಿವೃತ್ತ ತಹಶೀಲ್ದಾರ್‌ ಎಂ.ಎನ್‌. ಹನುಮಂತಯ್ಯ, ಪ್ರಕಾಶ್‌, ಅಶ್ವತ್ಥನಾರಾಯಣ, ನಾರಾಯಣಪ್ಪ, ಕೃಷ್ಣಮೂರ್ತಿ, ಚನ್ನಿಗಪ್ಪ, ಆದಿಲ್‌ಪಾಷ, ತಾಹೇರಾ, ಚಂದ್ರಕಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಆರೋಗ್ಯ ಸಿಬ್ಬಂದಿಗಳ ನಿಯೋಜನೆ ಭರವಸೆ

ಪಾವಗಡದಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಮೂರು ಕೇಂದ್ರಗಳಲ್ಲಿ ವೈದ್ಯರು, ಎಎನ್‌ಎಂಗಳ ಕೊರತೆ ಇದೆ. ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಿ, ಸಿಬ್ಬಂದಿ ನೇಮಕ ಮಾಡಬೇಕೆಂದು ವೈದ್ಯೆ ಡಾ.ಅರುಂಧತಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಇಒ ಕೂಡಲೇ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರಿಸಿದರೆ ಚುನಾವಣೆಯತ್ತ ಬೆರಳು ಮಾಡಿ ತೋರಿಸದೆ, ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಜಿ.ಪಂ ಅಡಿಯಲ್ಲಿ ಬರುವಂತಹ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಬೇಕು.

- ಮುರಳೀಧರ ಹಾಲಪ್ಪ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ

click me!