Pornography ಬಗ್ಗೆ ಪಾಲಕರು ಎಚ್ಚರವಾಗಿರಿ; ನ್ಯಾಯಾಧೀಶ ಪ್ರವೀನ್ ನಾಯಕ್ ಸಲಹೆ

By Kannadaprabha NewsFirst Published Sep 28, 2022, 10:16 AM IST
Highlights
  • ಫೋನೋಗ್ರಾಫಿ ಬಗ್ಗೆ ಪಾಲಕರು ಎಚ್ಚರವಾಗಿರಿ
  • ಕಾರ್ಯಾಗಾರದಲ್ಲಿ ನ್ಯಾಯಾಧೀಶ ಪ್ರವೀಣ್‌ ನಾಯಕ್‌ ಸಲಹೆ
  • ಅಪ್ರಾಪ್ತರ, ಮಹಿಳೆಯರ ಫೋಟೋ, ವೀಡಿಯೋ ಮಾಡಿ ದುರ್ಬಳಕೆ

 ದಾವಣಗೆರೆ ಸೆ.(28) : ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ದುರ್ಬಳಕೆ ಮಾಡಿ, ಫೋನೋಗ್ರಫಿ ಮಾಡುವ ಪ್ರಕರಣಗಳ ಹಿನ್ನೆಲೆಯಲ್ಲಿ ಪಾಲಕರು ಜಾಗೃತಿಯಾಗುವ ಜೊತೆಗೆ ಮಕ್ಕಳಿಗೂ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರವೀಣ್‌ ನಾಯಕ್‌ ಸಲಹೆ ನೀಡಿದ್ದಾರೆ.

Operation Megha Chakra: 20 ರಾಜ್ಯಗಳ 56 ಸ್ಥಳಗಳ ಚೈಲ್ಡ್ ಪೋರ್ನೊಗ್ರಫಿ ದಂಧೆಯ ಮೇಲೆ ಸಿಬಿಐ ದಾಳಿ!

ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆ ಹಮ್ಮಿಕೊಂಡಿದ್ದ ಪ್ರಸಕ್ತ ಸವಾಲುಗಳು ಮತ್ತು ಮಹಿಳಾ ನಾಯಕತ್ವ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹಲವಾರೆಡೆ ಅಪ್ರಾಪ್ತ ವಯಸ್ಸಿನ ಮಕ್ಕಳ ಚಿತ್ರೀಕರಿಸಿ, ಅದನ್ನು ದುರ್ಬಳಕೆ ಮಾಡಿ ಪ್ರಕರಣಗಳಿವೆ. ಫೋನೋಗ್ರಾಫಿ ಬಗ್ಗೆ ಜಾಗೃತಿ ಅತ್ಯಗತ್ಯವಾಗಿದ್ದು, ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇದರ ಬಗ್ಗೆ ಎಚ್ಚರದಿಂದ ಇರಬೇಕು. ಅನೇಕ ಪ್ರಕರಣಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಜಾಗೃತರಾಗುವ ಜೊತೆಗೆ ಸಂಘಟಿತರಾಗಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರ ಬಗ್ಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾನೂನಿನಲ್ಲಿ ಕಠಿಣ ಶಿಕ್ಷೆ:

ಮಹಿಳೆಯರಿಂದ ಮಹಿಳೆಯರಿಗೆ ಆಗುವ ತೊಂದರೆಗಳ ಹಿನ್ನೆಲೆಯಲ್ಲಿ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡಲಿದೆ. ಈಚೆಗೆ ಕೌಟುಂಬಿಕ ದೌರ್ಜನ್ಯ ಸೇರಿ ಮಹಿಳೆಯರ ಶೋಷಣೆ, ದೌರ್ಜನ್ಯ, ಅತ್ಯಾಚಾರ, ಬೆದರಿಕೆಯಂತಹ ಪ್ರಕರಣ ಹೆಚ್ಚುತ್ತಿವೆ. ಅದರಲ್ಲೂ ಪೋಕ್ಸೋ ಪ್ರಕರಣಗಳು ಮಕ್ಕಳ ಮೇಲಾಗುತ್ತಿವೆ. ಸಂಬಂಧಿಗಳು ಮಾತ್ರವಲ್ಲದ ನೆರೆ ಹೊರೆಯವರು, ಅಪರಿಚಿತರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಅಲ್ಲದೇ, ಕೆಲ ಪ್ರಕರಣಗಳಲ್ಲಿ ಸ್ವತಃ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದುಇದೆ. ಇಂತಹ ಪ್ರಕರಣಗಳ ಅಪರಾಧಿಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.

ಮಹಿಳೆಯರು ಹೆಚ್ಚು ಸಂಘಟಿತರಾಗಿ:

ಹಿರಿಯ ವಕೀಲ ಎಲ್‌.ಎಚ್‌.ಅರುಣಕುಮಾರ ಮಾತನಾಡಿ, ಅನಾದಿಯಿಂದಲೂ ಮಹಿಳೆಯರ ಶೋಷಣೆ ನಿರಂತರ ನಡೆದೇ ಬರುತ್ತಿದೆ. ಮಹಿಳೆಯರಿಗೆ ನೀಡುವ ಪ್ರಾತಿನಿಧ್ಯ, ಸಮಾನತೆ, ಅವಕಾಶ ಇಂದಿಗೂ ಸಮರ್ಪಕವಾಗಿ ಸಿಗುತ್ತಿಲ್ಲ. ಮಹಿಳೆಯರು ಇನ್ನಾದರೂ ಶೋಷಣೆ ವಿರುದ್ಧ ಧ್ವನಿ ಎತ್ತಬೇಕು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ನ್ಯಾಯಾಂಗ, ವಿಜ್ಞಾನ, ತಂತ್ರಜ್ಞಾನ, ರಕ್ಷಣಾ ಹೀಗೆ ನಾನಾ ಕ್ಷೇತ್ರಗಳಲ್ಲಿ ಮಹಿಳೆಯರಿದ್ದಾರೆ. ಆದರೆ, ಮಹಿಳಾ ನಾಯಕರ ಸಂಘಟನೆ ಕೊರತೆ ಇದ್ದೇ ಇದೆ. ಹೆಣ್ಣು ಮಕ್ಕಳಿಗೆ ಅವಕಾಶ, ಮೀಸಲಾತಿ, ರಾಜಕೀಯ ಪ್ರಾತಿನಿಧ್ಯ ಸಿಗಬೇಕೆಂದರೆ ಹೆಚ್ಚು ಹೆಚ್ಚು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಸ್ಲಂ ಕಾಲನಿ ಮುಖಂಡರಾದ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಸ್ಲಂ ಜನಾಂದೋಲನದ ಜಿಲ್ಲಾ ಗೌರವಾಧ್ಯಕ್ಷ ಶಬ್ಬೀರ್‌ ಸಾಬ್‌, ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಮುಖಂಡರಾದ ಜಂಶಿದಾ ಬಾನು, ಮಂಜುಳಾ, ಲಕ್ಷ್ಮೀಬಾಯಿ, ರೇಖಾ, ಆಸ್ಕಾ ಬಾನು ಇತರರು ಇದ್ದರು. ಇದೇ ವೇಳೆ ಮಾಗನೂರು ಬಸಪ್ಪ ಶಿಕ್ಷಣ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ದೊಡ್ಡಗೌಡರ್‌ ಉಪನ್ಯಾಸ ನೀಡಿದರು.

ಪೋರ್ನೋಗ್ರಫಿ ಕೋರ್ಸ್‌, ವಿದ್ಯಾರ್ಥಿಗಳು ಜೊತೆಯಲ್ಲೇ ಕುಳಿತು ಅಶ್ಲೀಲ ಸಿನಿಮಾ ನೋಡ್ಬೋದು

ಸಾಮಾಜಿಕವಾಗಿ ದೌರ್ಜನ್ಯ, ಶೋಷಣೆಗೆ ಒಳಗಾದವರಿಗೆ ಕಾನೂನು ಸೇವಾ ಪ್ರಾಧಿಕಾರವು ರಾಷ್ಟ್ರ, ರಾಜ್ಯಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಸಮಿತಿಗಳು ಕಣ್ಗಾವಲು ವ್ಯವಸ್ಥೆ ರೀತಿ ಕೆಲಸ ಮಾಡುತ್ತಿವೆ. ರಾಜಕೀಯ ಪಕ್ಷಗಳು ಮಹಿಳೆಯರಿಗೆ ಶೇ.50 ಸ್ಥಾನಮಾನ, ಅವಕಾಶಗಳನ್ನು ನೀಡಬೇಕು. ಮಹಿಳಾ ಶಾಸಕರು, ಮಹಿಳಾ ಸಂಸದರ ಆಯ್ಕೆಯು ರಾಜ್ಯದ ಕೇಂದ್ರ ಬಿಂದುವಾದ ದಾವಣಗೆರೆಯಿಂದಲೇ ಶುರುವಾಗಲಿ.

ಎಲ್‌.ಎಚ್‌.ಅರುಣಕುಮಾರ, ಹಿರಿಯ ವಕೀಲರು.

click me!