ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅಗತ್ಯ: ವಚನಾನಂದ ಸ್ವಾಮೀಜಿ

By Kannadaprabha NewsFirst Published Nov 27, 2022, 12:21 PM IST
Highlights
  • ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅಗತ್ಯ
  • ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

ಹಾನಗಲ್ಲ (ನ.27) : ಮೀಸಲಾತಿ ಸಮಸ್ಯೆ ಪಂಚಮಸಾಲಿ ಸಮಾಜದ ಪ್ರತಿಭಾವಂತರನ್ನು ಪ್ರತಿ ಹಂತದಲ್ಲಿ ಕಾಡುತ್ತಿದೆ. ಕೃಷಿ ಆಧಾರಿತ ಪಂಚಮಸಾಲಿಗಳು ನಷ್ಟದ ಹಾದಿಯಲ್ಲಿದ್ದಾರೆ. ಹೀಗಾಗಿ 2ಎ ಮೀಸಲಾತಿ ಅತ್ಯಗತ್ಯವಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ 5 ದಿನಗಳು ಮೀಸಲಾತಿ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಂಡಿರುವ ಪಂಚಮಸಾಲಿ ಪೀಠದ ಸ್ವಾಮೀಜಿ ತಾಲೂಕಿನ ಕೂಡಲ ಗ್ರಾಮದಲ್ಲಿ ಸಮಾಜದ ಜಾಗೃತಿ ಸಭೆ ನಡೆಸಿ ಮಾತನಾಡಿದರು.

ನಮ್ಮ ಸಮಾಜದ ಮುಂದಿನ ಜನಾಂಗದ ಒಳಿತಿಗಾಗಿ ಮೀಸಲಾತಿ ಹೋರಾಟ ನಡೆಯುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಜನಾಂಗಕ್ಕೆ 2ಎ ಮೀಸಲಾತಿ ಮತ್ತು ಸಮಸ್ತ ಲಿಂಗಾಯತ ಪಂಗಡಕ್ಕೆ ಓಬಿಸಿ ಮೀಸಲಾತಿ ನಮ್ಮ ಹೋರಾಟವಾಗಿದೆ ಎಂದರು.

ಪಂಚಮಸಾಲಿಗೆ 2ಎ ಮೀಸಲಾತಿ ನಂತರವೇ ಹರಜಾತ್ರೆ ಆಚರಣೆ: ವಚನಾನಂದ ಶ್ರೀ

ಮೀಸಲಾತಿಗಾಗಿ ಸುದೀರ್ಘ ಅವಧಿಯ ಹೋರಾಟ ನಡೆದಿದೆ. ಈಗ ಕಾಲ ಪಕ್ವವಾಗಿದೆ. ಸಮಾಜ ಜಾಗ್ರತಗೊಂಡಿದೆ. ಎಲ್ಲೆಡೆ ಪಂಚಮಸಾಲಿ ಗಾಳಿ ಬೀಸುತ್ತಿದೆ. ನಮ್ಮ ಹಕ್ಕು ಪಡೆಯಲು ಇದೇ ಒಳ್ಳೆಯ ಸಮಯ. ಬಿಜೆಪಿ ಸರಕಾರದಲ್ಲಿ ಹೆಚ್ಚು ಶಾಸಕರು ಇದ್ದಾರೆ. ಸಚಿವರೂ ನಮ್ಮವರೇ. ಹೀಗಾಗಿ ಮೀಸಲಾತಿ ಘೋಷಣೆ ಖಚಿತ ಎಂದರು.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರ ಕಟಕೋಳ ಮಾತನಾಡಿ, ಮೀಸಲಾತಿ ವಂಚಿತ ಪಂಚಮಸಾಲಿಗಳು ಸಾಕಷ್ಟುನೋವುಂಡಿದ್ದೇವೆ. ಸಮಾಜದ ಹಕ್ಕು ಪಡೆಯಲು ಸಂಘಟನೆ, ಜಾಗೃತಿ ಸದೃಢಗೊಳ್ಳಬೇಕು ಎಂದರು. ಸಂಘದ ಸಮನ್ವಯ ಸಮಿತಿ ಅಧ್ಯಕ್ಷ ವೀರೇಶ ಮತ್ತಿಹಳ್ಳಿ, ವಿವಿಧ ಗ್ರಾಮಗಳಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆಯುವ ಯಾತ್ರೆಗೆ ಪಂಚಮಸಾಲಿಗಳು ಕೈಜೋಡಿಸಬೇಕು ಎಂದರು.

ಸಮಾಜದ ಮುಖಂಡ ಮಾಲತೇಶ ಸೊಪ್ಪಿನ್‌ ಮಾತನಾಡಿದರು. ಪ್ರಮುಖರಾದ ಸೋಮಶೇಖರ ಕೊತಂಬರಿ, ಮಹದೇವಪ್ಪ ಬಾಗಸರ, ಮಲ್ಲಿಕಾರ್ಜುನ ಅಂಗಡಿ, ಮಧು ಪಾಣಿಗಟ್ಟಿ, ನಿಜಲಿಂಗಪ್ಪ ಮುದಿಯಪ್ಪನವರ, ಅನಿತಾ ಶಿವೂರ, ಗೀತಾ ಪೂಜಾರ, ವಾಸಂತಿ ಹುಲ್ಲತ್ತಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಪ್ರಾಣ ಬಿಟ್ಟೇವು, ಮೀಸಲಾತಿ ಬಿಡೆವು: ವಚನಾನಂದ ಶ್ರೀ

ಇದಕ್ಕೂ ಮುನ್ನ ವರ್ದಿ ಕ್ರಾಸ್‌ನಿಂದ ಹರಿಹರ ಪಂಚಮಸಾಲಿ ಪೀಠದ ಶ್ರೀಗಳನ್ನು ಸ್ವಾಗತಿಸಲಾಯಿತು. ಬೈಕ್‌ ರಾರ‍ಯಲಿ ಮೂಲಕ ನರೇಗಲ್‌ ಮಾರ್ಗವಾಗಿ ಕೂಡಲ ಗ್ರಾಮಕ್ಕೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಬಳಿಕ ನರೇಗಲ್‌ ಜಿ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮೀಸಲಾತಿ ಜನಜಾಗೃತಿ ಯಾತ್ರೆಯಲ್ಲಿ ಶ್ರೀಗಳು ಭಾಗವಹಿಸಿದ್ದರು.

click me!