Har Ghar Tiranga ಅಭಿಯಾನಕ್ಕೆ ಸಕಲ ಸಿದ್ಧತೆ, ರಾಯಚೂರಲ್ಲಿ 80 ಸಾವಿರ ಧ್ವಜ ತಯಾರಿ!

By Gowthami KFirst Published Aug 6, 2022, 9:15 PM IST
Highlights

450 ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಾಗುತ್ತಿವೆ ತ್ರಿವರ್ಣ ಧ್ವಜ. 80 ಸಾವಿರ ಧ್ವಜ ಸಿದ್ಧಗೊಳಿಸಲಿದ್ದಾರೆ ಸ್ವಸಹಾಯ ಗುಂಪುಗಳು
 

ವರದಿ: ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಆ.6): ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆ ದೇಶಾದ್ಯಂತ ಹರ್ ಘರ್ ತ್ರಿರಂಗಾ ಅಭಿಯಾನ ನಡೆಯುತ್ತಿದ್ದು, ತ್ರಿವರ್ಣ ಧ್ವಜಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಬಿಸಿಲುನಾಡು ರಾಯಚೂರಿನಲ್ಲಿಯೂ ಪ್ರತಿವೊಂದು ಮನೆ ಮೇಲೆ ಧ್ವಜ ಹಾರಿಸಲು ಸಕಲ ಸಿದ್ಧತೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಆಗಸ್ಟ್13 ರಿಂದ 15ರವರೆಗೆ ದೇಶದ ಪ್ರತಿ ಮನೆ ಮನೆ ಮೇಲೆಯೂ ತ್ರಿವರ್ಣ ಧ್ವಜ ಹಾರಿಸಿ ಈ ವರ್ಷ ಬರುತ್ತಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನ ಸಂಭ್ರಮದಿಂದ ಆಚರಿಸೋಣ ಅಂತ ಕೆರೆ ನೀಡಿದ್ರು. ಹೀಗಾಗಿ ರಾಯಚೂರು ಜಿಲ್ಲಾಡಳಿತದಿಂದ ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ತ್ರಿವರ್ಣ ಧ್ವಜಗಳನ್ನ ಸಿದ್ಧಪಡಿಸಲು ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯಲ್ಲಿ ಇರುವ 450 ಮಹಿಳಾ ಸ್ವಸಹಾಯ ಗುಂಪುಗಳಿಂದ 80 ಸಾವಿರ ಧ್ವಜಗಳನ್ನು ತಯಾರಿಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ 350ಕ್ಕೂ ಹೆಚ್ಚು ಧ್ವಜಗಳನ್ನು ಸಿದ್ಧಪಡಿಸಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದ್ದರಿಂದ ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಜಿಲ್ಲಾದ್ಯಂತ ಮಹಿಳಾ ಸ್ವಸಹಾಯ ಗುಂಪುಗಳು ಧ್ವಜಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ. ಒಂದು ಧ್ವಜವನ್ನ ಸಿದ್ಧಪಡಿಸಲು ನಾಲ್ಕು ರೂಪಾಯಿ ದರ ನಿಗದಿ ಮಾಡಿದ್ದು, ಮಹಿಳೆಯರು ನಾ  ಮುಂದು ತಾ ಮುಂದು ಅಂತ ತ್ರಿವರ್ಣ ಧ್ವಜಗಳನ್ನ ರೆಡಿ ಮಾಡಲು ಮುಂದಾಗಿದ್ದಾರೆ.

 ರಾಯಚೂರು ಜಿಲ್ಲಾಡಳಿತಕ್ಕೆ ಬಂದಿವೆ 70 ಸಾವಿರ ಧ್ವಜ! 
ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ರಾಜ್ಯ ಸರ್ಕಾರ ರಾಯಚೂರು ಜಿಲ್ಲೆಗೆ ಗುಜರಾತ್ ಮತ್ತು ದೆಹಲಿಯಿಂದ ಈಗಾಗಲ್ಲೇ 70 ಸಾವಿರ ತ್ರಿವರ್ಣ ಧ್ವಜಗಳನ್ನು ಕಳುಹಿಸಲಾಗಿದೆ. ಜೊತೆಗೆ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ 80 ಸಾವಿರ ಧ್ವಜಗಳನ್ನ ಸಿದ್ಧಪಡಿಸಲಾಗುತ್ತಿದೆ. ಒಟ್ಟು 1 ಲಕ್ಷ 50 ಸಾವಿರ ಧ್ವಜಗಳನ್ನ ವಿತರಿಸಲು ರಾಯಚೂರು ಜಿಲ್ಲಾಡಳಿತ ಮುಂದಾಗಿದೆ. ಅಷ್ಟೇ ಅಲ್ಲದೆ ಅಂಚೆ ಕಚೇರಿಯಲ್ಲಿಯೂ ತ್ರಿವರ್ಣ ಧ್ವಜಗಳನ್ನ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಧ್ವಜವನ್ನ ಮನೆಗಳ ಮೇಲೆ ಹಾರಾಟ ಮಾಡುವಂತೆ ರಾಯಚೂರು ಜಿಲ್ಲಾಧಿಕಾರಿಯಾದ ಎಲ್. ಚಂದ್ರಶೇಖರ ನಾಯಕ ಹೇಳಿದರು. 

ಹುಬ್ಬಳ್ಳಿ: ಬೆಂಗೇರಿ ಖಾದಿ ಧ್ವಜ ಕೇಂದ್ರಕ್ಕೆ ದುಪ್ಪಟ್ಟು ಆದಾಯ..!

 ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ 
ರಾಯಚೂರು ಜಿ.ಪಂ. ಸಭಾಂಗಣದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ‌ ನಡೆಯಿತು. ರಾಯಚೂರು ಎಡಿಸಿ ಡಾ.ದುರುಗೇಶ್ ಹಾಗೂ ರಾಯಚೂರು ಎಸಿ ರಜನಿಕಾಂತ್ ಚವ್ಹಾಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡುವ ಕುರಿತಂತೆ ಚರ್ಚೆ ನಡೆಸಲಾಯ್ತು. ಆ ಬಳಿಕ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತ್ರಿವರ್ಣ ಧ್ವಜವನ್ನು ‌ಪ್ರದರ್ಶನ ನಡೆಸಿದರು.

ಆರೆಸ್ಸೆಸ್‌ ಮೊದಲು ತನ್ನ ಶಾಖೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲಿ: ಸಿದ್ದರಾಮಯ್ಯ

ಒಟ್ಟಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ನಡೆಸಿದೆ. ಈ ಅಭಿಮಾನಿಯಾನಕ್ಕೆ ದೇಶದ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನ ಹಾರಿಸುವ ಮುಖಾಂತರ ಹರ್ ಘರ್ ತಿರಂಗಾ ಅಭಿಯಾನವನ್ನ ಯಶ್ವಸಿಗೊಳಿಸಲು ರಾಯಚೂರು ಜಿಲ್ಲಾಡಳಿತ ಸಕಲ ಸಿದ್ಧತೆ ‌ನಡೆಸಿದೆ.

click me!