ವೈದ್ಯರು ಇನ್ನೇನು ತೀರಿಕೊಂಡು ಬಿಡುತ್ತಾರೆಂದಿದ್ದ ಪ್ರಕರಣ| ಆಕ್ಸಿಜನ್ ತೆಗೆದರೆ ಕೆಲವೇ ಕ್ಷಣದಲ್ಲಿ ತೀರಿಕೊಳ್ಳುತ್ತಾರೆ ಎಂದಿದ್ದ ವೈದ್ಯರು| ವೈದ್ಯರ ಮಾತು ನಂಬಿ ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಕುಟುಂಬಸ್ಥರು| ಆಂಬ್ಯುಲೆನ್ಸ್ನಲ್ಲಿ ಮನೆಗೆ ಕರೆದೊಯ್ಯುವಾಗ ದಿಢೀರ್ ಚೇತರಿಸಿಕೊಂಡ ವೃದ್ಧೆ|
ಸುಳ್ಯ(ಆ.24): ಇನ್ನೇನು ಕೆಲವೇ ಕ್ಷಣಗಳಲ್ಲಿ ತೀರಿಕೊಂಡು ಬಿಡುತ್ತಾರೆ ಎಂಬ ವೈದ್ಯರ ಸೂಚನೆಯಂತೆ ಕೋಮಾದಲ್ಲಿದ್ದ ವೃದ್ಧೆಯೊಬ್ಬರನ್ನು ಕುಟುಂಬಸ್ಥರು ಮನೆಗೆ ಕೊಂಡೊಯ್ಯುವ ವೇಳೆ ವೃದ್ಧೆ ದಾರಿ ಮಧ್ಯೆ ಚೇತರಿಸಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಮರ್ಕಂಜ ಗ್ರಾಮದ ಪಟ್ಟೆಮನೆ ಹೇಮಾವತಿ ರೈ (80) ಅವರನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೋಮಾಕ್ಕೆ ಜಾರಿದ್ದರು. ಇನ್ನು ಬದುಕುವುದು ಕಷ್ಟ, ಮನೆಗೆ ಕೊಂಡೊಯ್ಯಬಹುದು. ಆಕ್ಸಿಜನ್ ಪೈಪ್ ತೆಗೆದ ಸ್ವಲ್ಪ ಹೊತ್ತಿನಲ್ಲಿ ಜೀವ ಹೋದೀತು ಎಂಬ ವೈದ್ಯರ ಹೇಳಿಕೆ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ನಲ್ಲಿ ಅವರನ್ನು ಕರೆದುಕೊಂಡು ಮನೆಯವರು ಊರಿಗೆ ಹೊರಟಿದ್ದರು. ಇದೇ ವೇಳೆ ಅವರ ಊರು ಮರ್ಕಂಜದಲ್ಲಿ ಅಂತ್ಯಕ್ರಿಯೆಗೂ ಸಿದ್ಥತೆ ನಡೆಸಲಾಗಿತ್ತು.
ಮಂಗಳೂರು ಏರ್ಪೋರ್ಟ್ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಆದರೆ ಆಂಬ್ಯುಲೆನ್ಸ್ ಊರಿನ ಸಮೀಪ ತಲುಪುತ್ತಿದ್ದಂತೆ ಇದ್ದಕ್ಕಿದ್ದಂತೆ ವೃದ್ಧೆ ಕೆಮ್ಮಿದರಲ್ಲದೆ ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ಚೇತರಿಸಿಕೊಂಡರು. ಕೂಡಲೇ ಮನೆಯವರನ್ನು ಸಂಪರ್ಕಿಸಿ ಅಂತ್ಯಕ್ರಿಯೆಗೆ ನಡೆಸಿದ್ದ ಸಿದ್ಧತೆಯನ್ನು ಸ್ಥಗಿತಗೊಳಿಸಿದರು. ಈಗ ವೃದ್ಧೆ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.