ಯಾದಗಿರಿ: ಹತ್ತಿ ಹೊಲಗಳಿಗೆ ಅಧಿಕಾರಿಗಳ ದಾಳಿ, 15 ಬಾಲ ಕಾರ್ಮಿಕರು ಪತ್ತೆ

Suvarna News   | Asianet News
Published : Dec 19, 2019, 10:15 AM IST
ಯಾದಗಿರಿ: ಹತ್ತಿ ಹೊಲಗಳಿಗೆ ಅಧಿಕಾರಿಗಳ ದಾಳಿ, 15 ಬಾಲ ಕಾರ್ಮಿಕರು ಪತ್ತೆ

ಸಾರಾಂಶ

ಗುರುಮಠಕಲ್‌ ತಾಲೂಕಿನ ಮತ್ತು ಸೈದಾಪುರ ವ್ಯಾಪ್ತಿಯಲ್ಲಿ ಹತ್ತಿ ಹೊಲಗಳಿಗೆ ಅಧಿಕಾರಿಗಳಿಂದ ದಾಳಿ|  6 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ತನಿಖೆ ನಡೆಸಿ 15 ಮಕ್ಕಳ ವರದಿಯನ್ನು ಪಡೆದು ಶಾಲೆಗೆ ದಾಖಲಿಸಿದ್ದಾರೆ| ವಾಹನಗಳನ್ನು ಜಪ್ತಿ ಮಾಡಿ ಪ್ರತಿಯೊಂದು ವಾಹನಕ್ಕೆ ದಂಡ ವಿಧಿಸಿದ ಪೊಲೀಸ್‌ ಇಲಾಖೆ|

ಯಾದಗಿರಿ(ಡಿ.19): ಗುರುಮಠಕಲ್‌ ತಾಲೂಕಿನ ಮತ್ತು ಸೈದಾಪುರ ವ್ಯಾಪ್ತಿಯಲ್ಲಿ ಬರುವ ಗುಂಜನೂರ, ಚಲ್ಹೇರಿ, ಜೈಗ್ರಾಮ, ನಂದೆಪಲ್ಲಿ, ಸಂಕ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ ಸೋಮವಾರ ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆ ಅ​ಧಿಕಾರಿಗಳು ಹತ್ತಿ ಹೊಲಗಳಿಗೆ ಅನಿರೀಕ್ಷಿತ ದಾಳಿ ನಡೆಸಿ, ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಪತ್ತೆಯಾದ 6 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ತನಿಖೆ ನಡೆಸಿ 15 ಮಕ್ಕಳ ವರದಿಯನ್ನು ಪಡೆದು ಶಾಲೆಗೆ ದಾಖಲಿಸಿದ್ದಾರೆ.

ಅನಿರೀಕ್ಷಿತ ದಾಳಿ ಮಾಡಿದಾಗ 6 ಟಂಟಂ, ಟಾಟಾ ಏಸ್‌, ಜೀಪ್‌ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ವಾಹನಗಳನ್ನು ತಡೆಹಿಡಿದು ವಿಚಾರಣೆಗೆ ಒಳಪಡಿಸಿದ ಅ​ಧಿಕಾರಿಗಳ ತಂಡ ವಾಹನ ಚಾಲಕರ ಮತ್ತು ಮಕ್ಕಳ ಮಾಹಿತಿಯನ್ನು ಪಡೆಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪೊಲೀಸ್‌ ಇಲಾಖೆಯವರು ವಾಹನಗಳನ್ನು ಜಪ್ತಿ ಮಾಡಿ ಪ್ರತಿಯೊಂದು ವಾಹನಕ್ಕೆ ದಂಡ ವಿ​ಧಿಸುವುದರ ಜೊತೆಗೆ 1988ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಬಂ​ಸಿದ ವಾಹನ ಚಾಲಕರಿಗೆ ಚಾಲನೆ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಂಡಿದ್ದಾರೆ. 

ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರ ಸಿಂಗ್‌ ಠಾಕೂರ್‌ ಮಾತನಾಡಿ, ಜಿಲ್ಲೆ ಮತ್ತು ತಾಲೂಕಿನಾದ್ಯಂತ 1986ರ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಕಲಂ 17ರಡಿ ನಿರೀಕ್ಷಕರುಗಳಾಗಿ ನೇಮಕಗೊಂಡಿರುವ ಮತ್ತು 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ಕಲಂ 26 (2)ರಡಿ ಹೆಚ್ಚುವರಿ ನಿರೀಕ್ಷಕರಾಗಿ ನೇಮಕಗೊಂಡಿರುವ ಅಧಿ​ಕಾರಿಗಳೊಂದಿಗೆ ತನಿಖಾ ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತನಿಖಾ ತಂಡಗಳ ಜೊತೆಯಲ್ಲಿ ಸೂಚಿಸಿರುವ ಎಲ್ಲಾ ಇಲಾಖೆಗಳು ಸೇರಿಕೊಂಡು ಅಂಗಡಿ, ಹೋಟೆಲ್‌, ರೆಸ್ಟೋರೆಂಟ್‌, ಗ್ಯಾರೇಜ್‌, ಬಾರ್‌ಅಂಗಡಿ ಹಾಗೂ ಇನ್ನಿತರ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಅಪಾಯಕಾರಿ ಮತ್ತು ಅಪಾಯಕಾರಿ ಅಲ್ಲದ ಬಾಲಕಾರ್ಮಿಕ ಮಕ್ಕಳು ಮತ್ತು ಶಾಲೆ ಬಿಟ್ಟಮಕ್ಕಳನ್ನು ಪತ್ತೆ ಹಚ್ಚಬೇಕಿದೆ.

ಅದರಂತೆ 1986ರ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಕಲಂ 17 ರಡಿ ನಿರೀಕ್ಷಕರುಗಳಾಗಿ ನೇಮಕಗೊಂಡಿರುವ ಅ​ಕಾರಿಗಳಿಂದ ಇನ್ನಿತರೆ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಶಾಲೆಬಿಟ್ಟ ಮಕ್ಕಳನ್ನು ನೇರವಾಗಿ ಕಡ್ಡಾಯ ಶಿಕ್ಷಣ ಕಾಯ್ದೆ-2009ರ ಅನ್ವಯ ಶಿಕ್ಷಣ ಇಲಾಖೆ ವತಿಯಿಂದ ಸರ್ವಶಿಕ್ಷಣ ಅಭಿಯಾನಡಿ ಸಂಬಂ​ಧಿಸಿದ ಶಾಲಾ ಮುಖ್ಯಗುರುಗಳ ಮೂಲಕ ಹತ್ತಿರದ ಸರ್ಕಾರಿ, ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ತೆಯಾದ ಬಾಲಕಾರ್ಮಿಕರಿಗೆ ವಸತಿಯ ಅವಶ್ಯಕತೆ ಇದ್ದಲ್ಲಿ ಅಂತಹ ಮಕ್ಕಳನ್ನು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆಯಿಂದ ಹಾಗೂ ಸರಕಾರದಿಂದ ನಡೆಯುವ ವಸತಿಶಾಲೆಗಳಲ್ಲಿ ಶಿಕ್ಷಣದ ಜೊತೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಹಾಗೂ ಕಾರ್ಮಿಕ ಆಯುಕ್ತರ ನಿರ್ದೇಶನದಂತೆ ಜಿಲ್ಲೆ, ತಾಲ್ಲೂಕಿನಾದ್ಯಂತ ಅನಿರೀಕ್ಷಿತ ತಪಾಸಣೆ, ದಾಳಿಗಳನ್ನು ಕೈಗೊಂಡು ಪತ್ತೆ ಹಚ್ಚಲಾದ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಲು ಸೂಚಿಸಿರುತ್ತಾರೆ ಎಂದು ಅವರು ವಿವರಿಸಿದರು.

ಸರಕು ಸಾಗಾಣೆ ವಾಹನಗಳಲ್ಲಿ ಹೊಲಗದ್ದೆ, ಕೂಲಿ, ಕೃಷಿ ಆಧಾರಿತ ಕೆಲಸಗಳಿಗಾಗಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿರುವ ಪ್ರಯುಕ್ತ ಯಾವುದೇ ರೀತಿಯ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮೋಟರ್‌ ವಾಹನ ಕಾಯ್ದೆಯಡಿಯಲ್ಲಿ ಆರ್‌.ಟಿ.ಓ ಮತ್ತು ಪೊಲೀಸ್‌ ಇಲಾಖೆಗಳು ಜಂಟಿಯಾಗಿ ತಪಾಸಣೆ ಕೈಗೊಂಡು ವಾಹನ ಮಾಲೀಕರಿಗೆ ದಂಡ ವಿ​ಧಿಸಲಾಗುತ್ತಿದೆ ಎಂದು ಎಎಸ್‌ಐ ಹನುಮಂತು ಅವರು ತಿಳಿಸಿದರು.
ದಾಳಿಯಲ್ಲಿ ಡಿಸಿಪಿಯು ಘಟಕದ ಸಾಬಯ್ಯ, ಮಕ್ಕಳ ಸಹಾಯವಾಣಿಯ ಶರಣಪ್ಪ, ಕಾರ್ಮಿಕ ಇಲಾಖೆಯ ಚಂದ್ರಶೇಖರ ಬಂದಳ್ಳಿ, ಅಮೃತರಾವ್‌ ಕೊತ್ವಾಲ್‌ ಅವರು ಭಾಗವಹಿಸಿದ್ದರು.

ಈ ಬಗ್ಗೆ ಮಾತನಾಡಿದ ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ್‌ ಅವರು, ಅಂಗಡಿ, ಹೋಟೆಲ್‌, ರೆಸ್ಟೋರೆಂಟ್‌, ಗ್ಯಾರೇಜ್‌, ಬಾರ್‌ ಅಂಗಡಿ ಹಾಗೂ ಇನ್ನಿತರ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಅಪಾಯಕಾರಿ ಮತ್ತು ಅಪಾಯಕಾರಿ ಅಲ್ಲದ ಸ್ಥಳಗಳಲ್ಲಿ ಬಾಲಕಾರ್ಮಿಕ ಮಕ್ಕಳು ಮತ್ತು ಶಾಲೆ ಬಿಟ್ಟಮಕ್ಕಳನ್ನು ಪತ್ತೆ ಹಚ್ಚಬೇಕಿದೆ ಎಂದು ತಿಳಿಸಿದ್ದಾರೆ. 

ಸರಕು ಸಾಗಾಣೆ ವಾಹನಗಳಲ್ಲಿ ಹೊಲಗದ್ದೆ, ಕೂಲಿ, ಕೃಷಿ ಆಧಾರಿತ ಕೆಲಸಗಳಿಗಾಗಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿರುವ ಪ್ರಯುಕ್ತ ಯಾವುದೇ ರೀತಿಯ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮೋಟರ್‌ ವಾಹನ ಕಾಯ್ದೆಯಡಿಯಲ್ಲಿ ಆರ್‌ಟಿಒ ಮತ್ತು ಪೊಲೀಸ್‌ ಇಲಾಖೆಗಳು ಜಂಟಿಯಾಗಿ ತಪಾಸಣೆ ಕೈಗೊಂಡು ವಾಹನ ಮಾಲೀಕರಿಗೆ ದಂಡ ವಿ​ಧಿಸಲಾಗುತ್ತಿದೆ ಎಂದು ಎಎಸ್‌ಐ ಹನುಮಂತು ಹೇಳಿದ್ದಾರೆ. 

ಗುರುಮಠಕಲ್‌ ತಾಲೂಕಿನ ಮತ್ತು ಸೈದಾಪುರ ವ್ಯಾಪ್ತಿಯಲ್ಲಿ ಬರುವ ಗುಂಜನೂರ, ಚಲ್ಹೇರಿ, ಜೈಗ್ರಾಮ, ನಂದೆಪಲ್ಲಿ, ಸಂಕ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆ ಅ​ಧಿಕಾರಿಗಳು ಹತ್ತಿ ಹೊಲಗಳಿಗೆ ಅನಿರೀಕ್ಷಿತ ದಾಳಿ ನಡೆಸಿ, ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು.(ಸಾಂದರ್ಭಿಕ ಚಿತ್ರ)
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ