'ಯಡಿಯೂರಪ್ಪ ಸಿಎಂ ಆದ್ರೂ ಮಹದಾಯಿ ಯೋಜನೆ ಏಕೆ ಅನುಷ್ಠಾನ ಮಾಡಿಲ್ಲ'

By Suvarna NewsFirst Published Dec 28, 2019, 12:36 PM IST
Highlights

13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಮಹದಾಯಿ ನ್ಯಾಯಾಧಿಕರಣ ಅನುಮತಿ ನೀಡಿದೆ. ಈ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸದೇ ಇರುವುದರಿಂದ ತೊಂದರೆಯಾಗಿದೆ| ಗೋವಾ ಮುಖ್ಯಮಂತ್ರಿ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಪದೇ ಪದೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ|

ನರಗುಂದ(ಡಿ.28): ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣ ಈಗಾಗಲೇ ನಮ್ಮ ರಾಜ್ಯಕ್ಕೆ 13.42 ಟಿಎಂಸಿ ನೀರು ನೀಡಿದೆ. ಕೇಂದ್ರ ಸರ್ಕಾರ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ರೈತ ಸೇನೆ ಕೋಶಾಧ್ಯಕ್ಷ ಎಸ್.ಬಿ. ಜೋಗಣ್ಣವರು ಹೇಳಿದರು. 

1625 ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಮಹದಾಯಿ ನ್ಯಾಯಾಧಿಕರಣ ಅನುಮತಿ ನೀಡಿದೆ. ಆದರೆ ಈ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸದೇ ಇರುವುದರಿಂದ ತೊಂದರೆಯಾಗಿದೆ. ಗೋವಾ ಮುಖ್ಯಮಂತ್ರಿ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಪದೇ ಪದೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ಖಂಡನೀಯ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀ ನೇತೃತ್ವದಲ್ಲಿ ನಾಲ್ಕು ವರ್ಷಗಳಿಂದ ಪ್ರಾಣದ ಹಂಗು ತೊರೆದು ಹೋರಾಟ ಮಾಡುತ್ತಿದ್ದೇವೆ. ಈ ದೀರ್ಘಾವಧಿ ಹೋರಾಟದಲ್ಲಿ ನಾವು 12 ರೈತರನ್ನು ಕಳೆದುಕೊಂಡಿದ್ದೇವೆ. 250ಕ್ಕೂ ಹೆಚ್ಚು ಮಹದಾಯಿ ಹೋರಾಟಗಾರರು ದೆಹಲಿಗೆ ಹೋಗಿ ರಾಷ್ಟ್ರಪತಿ ಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಮಗೆ ನೀರು ಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ಕೋರಿದ್ದೇವೆ. ಇಷ್ಟೆಲ್ಲ ಹೋರಾಟ ನಡೆದರೂ ಯೋಜನೆ ಜಾರಿಯಾಗದಿರುವುದು ನೋವು ತಂದಿದೆ ಎಂದರು. 

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗ ನಾನು ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ಈ ಮಹದಾಯಿ ಯೋಜನೆ ಜಾರಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಮುಖ್ಯಮಂತ್ರಿಯಾದ ಮೇಲೆ ಏಕೆ ಯೋಜನೆ ಅನುಷ್ಠಾನ ಮಾಡಿಲ್ಲ ಎಂಬುದು ಮಹದಾಯ ಹೋರಾಟಗಾರರಿಗೆ ತಿಳಿಯದಾಗಿದೆ ಎಂದು ಹೇಳಿದರು. 

ವೀರಬಸಪ್ಪ ಹೂಗಾರ, ಮಲ್ಲೇಶಪ್ಪ ಅಣ್ಣಿಗೇರಿ, ಎ.ಪಿ. ಪಾಟೀಲ, ಅಡಿಯಪ್ಪ ಕೋರಿ, ಜಗನ್ನಾಥ ಮುಧೋಳೆ, ಸುಭಾಸ ಗಿರಿಯಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನುಮಂತ ಸರನಾಯ್ಕರ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಹನುಮಂತ ಸರನಾಯ್ಕರ, ಬಸವ್ವ ಪೂಜಾರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪುರ, ಕೆ.ಎಚ್. ಮೊರಬದ, ನಾಗರತ್ನಾ ಸವಳಭಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ ಇದ್ದರು.
 

click me!