ಈ ಬಾರಿ ಬೆಂಗಳೂರಿಗೆ ಇಲ್ಲ ನೀರಿನ ಸಮಸ್ಯೆ

By Kannadaprabha NewsFirst Published Jan 30, 2020, 10:19 AM IST
Highlights

ಈ ಬಾರಿ ಬೇಸಿಗೆಗೆ ಬೆಂಗಳೂರಿನಲ್ಲಿ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಜಲಮಂಡಳಿ  ಹೇಳಿದೆ. 

ಬೆಂಗಳೂರು [ಜ.30]:  ಕೆಆರ್‌ಎಸ್‌ನಲ್ಲಿ ಸಾಕಷ್ಟುನೀರಿನ ಸಂಗ್ರಹ ಇರುವುದರಿಂದ ಬೇಸಿಗೆ ಮುಗಿದು ಮಳೆಗಾಲ ಬರುವವರೆಗೂ ನಗರಕ್ಕೆ ನೀರಿನ ಸಮಸ್ಯೆ ಇಲ್ಲ ಎಂದು ಬೆಂಗಳೂರು ಜಲಮಂಡಳಿಯ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್‌ ದೇವರಾಜ್‌ ಭರವಸೆ ನೀಡಿದರು.

ಬುಧವಾರ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಗರದ ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ವಹಣೆ ಸೇರಿದಂತೆ ವಿವಿಧ ವಿಚಾರದ ಬಗ್ಗೆ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ದಿನ ನಗರಕ್ಕೆ 1,450 ಎಂಎಲ್‌ಡಿ ನೀರನ್ನು ಕೆಆರ್‌ಎಸ್‌ನಿಂದ ಸರಬರಾಜು ಮಾಡಲಾಗುತ್ತಿದೆ. ಕಳೆದ ಮಳೆಗಾಲದ ಅವಧಿಯಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆಆರ್‌ಎಸ್‌ನಲ್ಲಿ ಸಾಕಷ್ಟುಪ್ರಮಾಣದ ನೀರಿನ ಸಂಗ್ರಹವಿದ್ದು, ಈ ಬಾರಿ ಬೇಸಿಗೆ ಅವಧಿ ಮುಗಿದು ಮಳೆಗಾಲ ಆರಂಭವಾಗುವವರೆಗೆ ನಗರಕ್ಕೆ ಬೇಕಾದಷ್ಟುನೀರನ್ನು ಸರಬರಾಜು ಮಾಡಬಹುದಾಗಿದೆ. ಹಾಗಾಗಿ, ಈ ವರ್ಷ ಬೇಸಿಗೆ ಅವಧಿಯಲ್ಲಿ ನಗರಕ್ಕೆ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗದಂತೆ ಎಚ್ಚರವಹಿಸುವುದಕ್ಕೆ ಕಳೆದ ನಾಲ್ಕು ವರ್ಷದಿಂದ ಜಲ ಮಂಡಳಿಯ 45 ಉಪ ವಲಯಗಳಿಗೆ ಹಿರಿಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗುತ್ತಿದೆ. ಜತೆಗೆ 168 ನೀರಿನ ಟ್ಯಾಂಕರ್‌ ವ್ಯವಸ್ಥೆಯೂ ಇದೆ ಎಂದು ವಿವರಿಸಿದರು.

ಈ ವಿವರಣೆಗೆ ಆಕ್ಷೇಪಣೆ ವ್ಯಕ್ತಪಡಿಸಿದ ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ಜಲಮಂಡಳಿಯು ಒಳಚರಂಡಿ ನೀರನ್ನು ಕೆರೆ ಹಾಗೂ ರಾಜಕಾಲುವೆ ಹರಿಸುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಸುಧಾರಣೆ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಶಿಥಿಲಾವಸ್ಥೆ ತಲುಪಿದ ಓವರ್‌ಹೆಡ್‌ ಟ್ಯಾಂಕ್‌: ಮಕ್ಕಳ ಜೀವಕ್ಕೆ ಬೆಲೆನೇ ಇಲ್ವಾ?..

ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವರಾಜು, ಮುಂದಿನ ಮಾಚ್‌ರ್‍ನಿಂದ ಯಾವುದೇ ರಸ್ತೆಗಳಲ್ಲಿ ಕಾಮಗಾರಿ ಪ್ರಾರಂಭಿಸುವ ಮುನ್ನ ಪಾಲಿಕೆ ಸದಸ್ಯರ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

 25 ಕೋಟಿ ದಂಡ ವಸೂಲು ಮಾಡಿ

ಕೆರೆಗಳಿಗೆ ತ್ಯಾಜ್ಯ ನೀರು ಹರಿಸುತ್ತಿರುವುದಕ್ಕೆ ಬಿಬಿಎಂಪಿಗೆ ಸುಪ್ರಿಂ ಕೋರ್ಟ್‌ 25 ಕೋಟಿ ರು. ದಂಡ ವಿಧಿಸಿದೆ. ಕೆರೆಗಳಿಗೆ ತ್ಯಾಜ್ಯ ನೀರನ್ನು ಹರಿಸುತ್ತಿರುವ ಜಲಮಂಡಳಿಯ ತಪ್ಪಿಗೆ ಬಿಬಿಎಂಪಿ ದಂಡ ಪಾವತಿ ಮಾಡಬೇಕಿದೆ. ಹಾಗಾಗಿ, ದಂಡವನ್ನು ಜಲಮಂಡಳಿಯಿಂದ ವಸೂಲಿ ಮಾಡಿ ಎಂದು ಮಾಜಿ ಮೇಯರ್‌ ಮಂಜುನಾಥ್‌ ರೆಡ್ಡಿ ಆಗ್ರಹಿಸಿದರು.

click me!