ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ: ಡೇಟ್‌ ಫಿಕ್ಸ್‌..!

By Kannadaprabha NewsFirst Published Aug 9, 2019, 1:13 PM IST
Highlights

ಕರಾವಳಿಯಲ್ಲಿ ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಳಿಗಳ ಮೇಲೆ ಅಲ್ಲಲ್ಲಿ ಮಣ್ಣು ಕುಸಿಯುತ್ತಿದ್ದು, ಸಂಪೂರ್ಣ ತೆರವು ಕಾರ್ಯಾಚರಣೆ ಪೂರ್ಣಗೊಂಡಿಲ್ಲ. ಸಿರಿಬಾಗಿಲು- ಸುಬ್ರಹ್ಮಣ್ಯ ರೋಡ್‌ ಮಧ್ಯೆ ಘಾಟ್‌ ಪ್ರದೇಶದಲ್ಲಿಬೃಹತ್‌ ಪ್ರಮಾಣದಲ್ಲಿ ಮಣ್ಣು, ಮರ ಬಿದ್ದಿರುವ ಹಿನ್ನೆಲೆಯಲ್ಲಿ ಆ.11ರವರೆಗೂ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮಂಗಳೂರು(ಆ.09): ಸಿರಿಬಾಗಿಲು- ಸುಬ್ರಹ್ಮಣ್ಯ ರೋಡ್‌ ಮಧ್ಯೆ ಘಾಟ್‌ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದೆ. ಇಲ್ಲಿ ಹಳಿಯ ಮೇಲೆ ಬೃಹತ್‌ ಪ್ರಮಾಣದಲ್ಲಿ ಮಣ್ಣು, ಮರ ಬಿದ್ದಿರುವ ಹಿನ್ನೆಲೆಯಲ್ಲಿ ಆ.11ರವರೆಗೂ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಬುಧವಾರ ಒಂದೇ ದಿನ ಎಡಕಮರಿ ಪ್ರದೇಶದಲ್ಲಿ 316 ಮಿ.ಮೀ. ಮಳೆಯಾಗಿದೆ. ಮಂಗಳವಾರದಿಂದಲೇ ನಿರಂತರವಾಗಿ ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಗುರುವಾರ ಬೆಳಗ್ಗಿನವರೆಗೂ ಭೂಕುಸಿತ ನಡೆಯುತ್ತಲೇ ಇದೆ.

ಹಳಿಗಳ ಮೇಲೆ 25 ಸಾವಿರ ಕ್ಯೂಬಿಕ್‌ ಮೀಟರ್‌ನಷ್ಟುಮಣ್ಣು, ಕಲ್ಲು, ಮರಗಳು ಬಿದ್ದಿದ್ದು ರೈಲ್ವೆ ಸಿಬ್ಬಂದಿ, ಕಾರ್ಮಿಕರು ಅರ್ತ್ ಮೂವಿಂಗ್‌ ಯಂತ್ರೋಪಕರಣಗಳೊಂದಿಗೆ ಹಳಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗಾರ್ಗ್‌ ಸೇರಿದಂತೆ ಅಧಿಕಾರಿ ತಂಡ ಪರಿಶೀಲನೆ ನಡೆಸಿ ತ್ವರಿತ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದೆ.

ಈ ಪ್ರದೇಶದಲ್ಲಿ ಮಂಗಳವಾರ ಗುಡ್ಡ ಕುಸಿದು ಮಣ್ಣು ಹಳಿಗೆ ಬಿದ್ದು ರೈಲು ಸಂಚಾರವನ್ನು ಸ್ಥಗಿಗೊಳಿಸಲಾಗಿತ್ತು. ಬಳಿಕ ಘಾಟಿ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಗುಡ್ಡದಿಂದ ಮಣ್ಣು ಕುಸಿಯುತ್ತಲೇ ಇದೆ.

ಮಂಗಳೂರು: ಮಳೆಯಿಂದ ಮೆಸ್ಕಾಂಗೆ 1043.70 ಲಕ್ಷ ರು. ನಷ್ಟ

ಸಂಪೂರ್ಣ ಸಹಜಸ್ಥಿತಿಗೆ ರೈಲು ಹಳಿ ಬರುವುದಕ್ಕೆ ಇನ್ನಷ್ಟುಸಮಯ ಬೇಕಾಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳು ರದ್ದಾಗಿವೆ.

ರದ್ದಾಗಿರುವ ರೈಲುಗಳು: ನಂ.16511/16513 ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು/ ಕಾರವಾರ ಎಕ್ಸ್‌ಪ್ರೆಸ್‌ ಹಾಗೂ ನಂ.16518/16524 ಕಣ್ಣೂರು/ ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳು ಆ.8, 9, 10ರಂದು ಸಂಚರಿಸುವುದಿಲ್ಲ.

ಆ.8, 10ರ ನಂ.16516 ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌, 8, 11ರವರೆಗೆ ನಂ.16575 ಯಶವಂತಪುರ ಮಂಗಳೂರು ಎಕ್ಸ್‌ಪ್ರೆಸ್‌, 8ರಂದು ಹೊರಡಬೇಕಾದ ನಂ.16585 ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್‌, 9ರ 16586 ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌, 9ರ ನಂ.16576 ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌, 9ರ ನಂ.16515 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲುಗಳು ರದ್ದುಗೊಂಡಿವೆ.

ಮಂಗಳೂರು: ಗುಡ್ಡ ಕುಸಿತ, ಸತತ ಮೂರನೇ ದಿನವೂ ರೈಲು ಸಂಚಾರ ಸ್ಥಗಿತ

click me!