ಅರ್ಜಿ ಹಾಕದಿದ್ದರೂ ಸಿಗಲಿದೆ ವೃದ್ಧಾಪ್ಯ ವೇತನ

By Kannadaprabha NewsFirst Published Sep 11, 2020, 1:10 PM IST
Highlights

ವೃದ್ಧಾಪ್ಯ ವೇತನಕ್ಕೆ ತಾಲೂಕು ಕಚೇರಿಗೆ ಅಲೆಯುವಂತಿಲ್ಲ. ಅಷ್ಟೇಕೆ ಅರ್ಜಿ ಹಾಕದಿದ್ದರೂ ವೃದ್ದಾಪ್ಯ ವೇತನ ನೀಡುವ ಯೋಜನೆ ಶೀಘ್ರವೇ ಜಾರಿಯಾಗಲಿದೆ.

ತುಮಕೂರು (ಸೆ.11):  ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ತಾಲೂಕು ಕಚೇರಿಗೆ ಅಲಿಯುವಂತಿಲ್ಲ. ಅಷ್ಟೇಕೆ ಅರ್ಜಿ ಹಾಕದಿದ್ದರೂ ವೃದ್ದಾಪ್ಯ ವೇತನ ನೀಡುವ ಯೋಜನೆ ತುಮಕೂರಿನಲ್ಲಿ ಜಾರಿಯಾಗಲಿದೆ.

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ. ಈಗಾಗಲೇ ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಇದನ್ನು ಜಿಲ್ಲೆಯಲ್ಲೂ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಶಾಲಾ-ಕಾಲೇಜು, ಆಸ್ಪತ್ರೆ, ವಸತಿ ನಿಲಯ ಸೇರಿದಂತೆ ಸರ್ಕಾರಿ ಉಪಯೋಗಗಳಿಗೆ ಸರ್ಕಾರಿ ಜಮೀನುಗಳನ್ನು ಮೀಸಲಿಡಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಜಮೀನುಗಳು ಉಳಿಯುವುದು ಕಷ್ಟಎಂದರು. ಈಗಾಗಲೇ 1ಲಕ್ಷಕ್ಕೂ ಹೆಚ್ಚು ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಆದುದರಿಂದ ಸರ್ಕಾರಿ ಜಮೀನನ್ನು ವಿವಿಧ ಉಪಯೋಗಗಳಿಗೆ ಮೀಸಲಿಟ್ಟರೆ ಸಂಬಂಧಿಸಿದ ಇಲಾಖೆಗಳು ಅವುಗಳನ್ನು ಸಂರಕ್ಷಿಸುತ್ತೇವೆ ಎಂದು ತಿಳಿಸಿದರು.

ವೃದ್ಧಾಪ್ಯ ವೇತನಕ್ಕೆ 7000 ಕೋಟಿ ರು. ..

ಪ್ರತಿಯೊಂದು ಹಳ್ಳಿಯಲ್ಲಿಯೂ ಸಾರ್ವಜನಿಕ ಸ್ಮಶಾನವಿರಬೇಕು. ಗ್ರಾಮಗಳಲ್ಲಿ ಸಮುದಾಯಕ್ಕೊಂದು ರುದ್ರಭೂಮಿಬೇಕು ಎಂದು ಕೇಳಿದರೆ ಅವರ ಸ್ವಂತ ಜಮೀನುಗಳಿದ್ದರೆ, ಅಂತಹವರು ರುದ್ರಭೂಮಿಗೆ ಸಮುದಾಯದ ಹೆಸರನ್ನು ಇಟ್ಟುಕೊಳ್ಳಬಹುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 333 ಗ್ರಾಮಗಳಲ್ಲಿ ರುದ್ರಭೂಮಿಗೆ ಅವಶ್ಯಕತೆಯಿದ್ದು, ಅವುಗಳನ್ನು ಮುಂದಿನ 2 ತಿಂಗಳೊಳಗಾಗಿ ವ್ಯವಸ್ಥೆ ಕಲ್ಪಿಸಬೇಕು. ಜಾತಿಗಳಿಗೆ ಪ್ರತ್ಯೇಕವಾಗಿ ಸ್ಮಶಾನ ನೀಡಲು ನಿಯಮದಲ್ಲಿ ಅವಕಾಶವಿಲ್ಲ ಎಂದರು.

ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್‌ ಅವರು ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತ್ಯುತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲಿದ್ದೇವೆ. ಈ ಬಾರಿ 163 ಮನೆಗಳು ಹಾನಿಯಾಗಿದ್ದು, ಹಾನಿಯಾದ ಕುಟುಂಬಗಳಿಗೆ ಆಯಾ ತಾಲೂಕು ತಹಶೀಲ್ದಾರ್‌ ಕಡೆಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಈ ತಿಂಗಳಲ್ಲಿ 4 ಸಾವಿರ ಟನ್‌ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯಿದೆ. ನಮ್ಮಲ್ಲಿ 5ಸಾವಿರ ಟನ್‌ ಗೊಬ್ಬರವನ್ನು ಸಂಗ್ರಹಣೆ ಮಾಡಲಾಗಿದೆ. ರೈತರಿಗೆ ಇದರಿಂದ ಯಾವುದೇ ರೀತಿಯ ಗೊಬ್ಬರದ ಕೊರತೆಯಾಗುವುದಿಲ್ಲ. ಅಗತ್ಯವಿರುವ ಕಡೆ ಸಹಕಾರ ಸಂಘಗಳ ಮೂಲಕ ಗೊಬ್ಬರವನ್ನು ರೈತರಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ಲಾ ಪಿಂಚಣಿ ಯೋಜನೆಗಳಿಗೆ ಆಧಾರ್‌ ಲಿಂಕ್‌ ಕಡ್ಡಾಯವಾಗಿ ಮಾಡಿಸಬೇಕು. ಪೋಸ್ಟ್‌ ಆಫೀಸ್‌ ಬದಲಾಗಿ ಬ್ಯಾಂಕುಗಳಿಗೆ ಹಣ ಜಮೆಯಾಗುವಂತೆ ಮಾಡಬೇಕು ಎಂದು ಸಚಿವರು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ತಹಶೀಲ್ದಾರ್‌ ಕಛೇರಿಗಳಲ್ಲಿ ಮದ್ಯವರ್ತಿಗಳ ಹಾವಳಿಯಿರುವ ಬಗ್ಗೆ ಶಾಸಕ ಜಯರಾಂ ಸಚಿವರ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಸ್ಕ್ಯಾ‌ಡ್‌ ರಚಿಸಿ ಅವರ ಮೂಲಕ ಮಾಹಿತಿ ಸಂಗ್ರಹಿಸಿ ತಹಶೀಲ್ದಾರ್‌ ಕಛೇರಿಗಳಿಗೆ ದಿಡೀರ್‌ ಭೇಟಿ ನೀಡಿ ಪರಿಶೀಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರ ಸೇರಿದಂತೆ ವಿವಿದೆಡೆಯಿಂದ ತುಮಕೂರು ಜಿಲ್ಲೆಗೆ ಆಗಮಿಸಿ ಬಗರಹುಕುಂ ಸಾಗುವಳಿಯ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಪಡೆದಿದ್ದು, ಈ ಬಗ್ಗೆ ತನಿಖೆ ಮಾಡಿಸಲಾಗುವುದು ಎಂದು ಸಚಿವರು ತಿಳಿಸಿದರು.

click me!