ಮದುವೆಯಾದ ಒಂದೂವರೆ ತಿಂಗಳಿಗೆ ಸೊಸೆ ನಾಪತ್ತೆ, ಮರ್ಯಾದೆ ಹೋಯ್ತೆಂದು ಮಾವ ಸಾವು, ಗಂಡ ಬೇಡ ರವಿನೇ ಬೇಕು ಅಂದ್ಲಾ ನವವಧು!

Published : Mar 26, 2026, 12:43 PM IST
Koppal missing woman case

ಸಾರಾಂಶ

ಕೊಪ್ಪಳದಲ್ಲಿ ಮದುವೆಯಾದ ಒಂದೂವರೆ ತಿಂಗಳಲ್ಲೇ ಸಂಜನಾ ಎಂಬ ನವವಧು ನಾಪತ್ತೆಯಾಗಿದ್ದಾಳೆ. ಈ ಆಘಾತದಿಂದ ಆಕೆಯ ಮಾವ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬಕ್ಕೆ ದೊಡ್ಡ ದುರಂತ ಎದುರಾಗಿದೆ. ಪತಿ ನಾಗರಾಜ್ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಪ್ಪಳ: ಮದುವೆಯಾಗಿ ಕೇವಲ ಒಂದೂವರೆ ತಿಂಗಳೊಳಗೆ ಪತ್ನಿ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲೇ ಮನಕಲಕುವ ಘಟನೆಗೆ ಕಾರಣವಾಗಿದೆ. ಪತ್ನಿ ಕಾಣೆಯಾಗಿದ್ದ ಆಘಾತದಿಂದ ಗಂಡನ ತಂದೆ ಅಂದರೆ ಮಾವ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವುದು. ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಫೆಬ್ರವರಿ 8ರಂದು ಹಿರಿಯರ ಒಪ್ಪಿಗೆಯ ಮೇರೆಗೆ ಕೊಪ್ಪಳದ ಗೌರಿ ಅಂಗಲ ನಿವಾಸಿ ನಾಗರಾಜ್ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನ ಸಂಜನಾ ವಿವಾಹವಾಗಿದ್ದರು. ಮದುವೆಯಾಗಿ ಕೆಲವೇ ದಿನಗಳು ಕಳೆದಿದ್ದರೂ, ಮಾರ್ಚ್ 21ರಂದು ಅಚ್ಚರಿ ಎಂಬಂತೆ ಗಂಡ ನಾಗರಾಜ್ ನನ್ನು ಮೆಡಿಕಲ್ ಅಂಗಡಿಗೆ ಕಳುಹಿಸಿ, ಸಂಜನಾ ಮನೆಯಿಂದ ಹೊರಟು ಹೋಗಿದ್ದು, ನಂತರದಿಂದ ಕಾಣೆಯಾಗಿದ್ದಾಳೆ.

ತವರು ಮನೆಗೂ ತೆರಳಿಲ್ಲ ಸಂಜನಾ

ಪತ್ನಿ ನಾಪತ್ತೆಯಾದ ವಿಚಾರ ತಿಳಿದ ಕೂಡಲೇ ನಾಗರಾಜ್ ಆತಂಕಗೊಂಡು ಹುಡುಕಾಟ ಆರಂಭಿಸಿದ್ದಾರೆ. ಸಂಜನಾ ಸಹೋದರ ರವಿ ಜೊತೆಗೂಡಿ ಕೊಪ್ಪಳ, ರಾಯಚೂರು, ಹೊಸಪೇಟೆ, ಹುಲಗಿ ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇತ್ತ ಸಂಜನಾ ತನ್ನ ತವರು ಮನೆಗೂ ತೆರಳಿಲ್ಲ ಎಂಬುದು ಕುಟುಂಬದವರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಘಟನೆ ನಾಗರಾಜ್ ಕುಟುಂಬದ ಮೇಲೆ ಭಾರೀ ಮಾನಸಿಕ ಆಘಾತ ತಂದಿದೆ. ವಿಶೇಷವಾಗಿ, ಸೊಸೆ ಮನೆ ಬಿಟ್ಟು ಹೋಗಿದ್ದ ವಿಷಯ ತಿಳಿದು ನಾಗರಾಜ್ ಅವರ ತಂದೆ ಖಂಡೆಪ್ಪ  ಮನೆ ಮರ್ಯಾದೆ ಬೀತಿ ಪಾಲಾಯ್ತು ಎಂದು ತೀವ್ರವಾಗಿ ಮಾನಸಿಕವಾಗಿ ನೊಂದು ಆ ಚಿಂತೆಯಿಂದ ಅದೇ ದಿನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಕೈಯಲ್ಲಿ ‘ರವಿ’ ಎಂಬ ಟ್ಯಾಟೂ

ಪತ್ನಿಗಾಗಿ ತೀವ್ರ ಹುಡುಕಾಟ ನಡೆಸಿದ ಬಳಿಕ, ನಾಗರಾಜ್ ಇದೀಗ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ನನಗೆ ನನ್ನ ಪತ್ನಿ ಬೇಕು, ದಯವಿಟ್ಟು ಹುಡುಕಿ ಕೊಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. ದೂರಿನಲ್ಲಿ ಸಂಜನಾ ಗುರುತು ಲಕ್ಷಣಗಳನ್ನೂ ನೀಡಲಾಗಿದ್ದು, ಆಕೆಯ ಕೈಯಲ್ಲಿ ‘ರವಿ’ ಎಂಬ ಟ್ಯಾಟೂ ಇದೆ ಎಂದು ಗಂಡ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  ಈ ಟ್ಯಾಟೂ ಸಹೋದರನ ಹೆಸರೇ ಅಥವಾ ಇನ್ನು ಬೇರೆ ಯಾರದ್ದೋ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ

ಈ ನಡುವೆ, ಸಂಜನಾ ಸಹೋದರ ರವಿ ಕೂಡ ತನ್ನ ಸಹೋದರಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದು, ಕುಟುಂಬದವರು ಎಲ್ಲೆಡೆ ಮಾಹಿತಿ ಕಲೆಹಾಕುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸಂಜನಾ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

PREV
Read more Articles on
click me!

Recommended Stories

ಮರ್ಯಾದಾ ಹತ್ಯೆ ವಿಧೇಯಕ: ಸಮಸಮಾಜಕ್ಕೆ ಬಲ
ಶಿವಮೊಗ್ಗ: ಬೆಂಕಿಯ ಕೆನ್ನಾಲಗೆಗೆ ಹೊತ್ತಿ ಉರಿದ ಗೂಡ್ಸ್ ಲಾರಿ