Belagavi : 2024ರೊಳಗೆ ನೂತನ ಅರಮನೆ ನಿರ್ಮಾಣ ಹಂಬಲ

Published : Oct 26, 2022, 05:22 AM IST
Belagavi :  2024ರೊಳಗೆ ನೂತನ ಅರಮನೆ ನಿರ್ಮಾಣ ಹಂಬಲ

ಸಾರಾಂಶ

ವೀರಮಾತೆ ಕಿತ್ತೂರು ರಾಣಿ ಚನ್ನಮ್ಮಾಜಿಯ ರಾಜ್ಯಮಟ್ಟದ ಉತ್ಸವವಕ್ಕೆ ಮಂಗಳವಾರ ಅದ್ಧೂರಿಯಾಗಿ ತೆರೆ ಬಿದ್ದಿತು.

 ಚನ್ನಮ್ಮನ ಕಿತ್ತೂರು (ಅ.26):  ವೀರಮಾತೆ ಕಿತ್ತೂರು ರಾಣಿ ಚನ್ನಮ್ಮಾಜಿಯ ರಾಜ್ಯಮಟ್ಟದ ಉತ್ಸವವಕ್ಕೆ ಮಂಗಳವಾರ ಅದ್ಧೂರಿಯಾಗಿ ತೆರೆ ಬಿದ್ದಿತು.

ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ, ಕಿತ್ತೂರು ಮತಕ್ಷೇತ್ರದಿಂದಾಗಲಿ ಅಥವಾ ಕಿತ್ತೂರು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಎಲ್ಲ ಮನವಿಗಳು ಪುರಸ್ಕೃತಗೊಂಡು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.

26 ವರ್ಷಗಳ ಹಿಂದೆ ಕಿತ್ತೂರು ಉತ್ಸವವನ್ನು ಹುಟ್ಟುಹಾಕಿದ ಪ್ರೊ.ವಿ.ಜಿ.ಮಾರಿಹಾಳ ಅವರ ಕಾರ್ಯ ಈಗ ರಾಜ್ಯಮಟ್ಟದ ಉತ್ಸವವಾಗಿ ಆಚರಣೆಗೊಂಡಿರುವುದು ಸಂತಸದ ಸಂಗತಿ. ಕಳೆದ ಬಾರಿ ಸಿಎಂ ಬೊಮ್ಮಾಯಿ ಅವರು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ. ಮುಂಬೈ ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಿದ್ದಾರೆ. ತಾಯಿ ಚನ್ನಮ್ಮಾಜಿಯ ಅರಮನೆ ಕಟ್ಟಲು ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ಆದರೆ, ಅರಮನೆ ಕಟ್ಟುವ ಜಾಗೆ ಮೌಲ್ಯಯುತವಾದ ಪರಿಣಾಮ ಇನ್ನಷ್ಟುಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು ಸಿಎಂ ಬೊಮ್ಮಾಯಿ ಅವರು ರೈತರ ಮನವೊಲಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ. ಅಲ್ಲದೇ ಇನ್ನೂ .115 ಕೋಟಿ ಬಿಡುಗಡೆ ಮಾಡುವ ಭರವಸೆಗಳನ್ನು ಸಿಎಂ ನೀಡಿದ್ದಾರೆಂದು ಹೇಳಿದ್ದಾರೆ.

ತಾಲೂಕು ಮಟ್ಟಕ್ಕೆ ಅವಶ್ಯವಿರುವ ಆಸ್ಪತ್ರೆ ಕಟ್ಟಡ, ಕೃಷಿ ಕಟ್ಟಡಗಳು, ವಸ್ತು ಸಂಗ್ರಹಾಲಯ ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳಿಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಆಸ್ಪತ್ರೆ ಕಟ್ಟುವ ವಿಚಾರದಲ್ಲಿ ಕೆಲ ತಪ್ಪು ತಿಳಿವಳಿಕೆಗಳಿವೆ. ಕಿತ್ತೂರು ಪಟ್ಟಣದಲ್ಲಿ ಈಗಿರುವ ಆಸ್ಪತ್ರೆ ಹೀಗೆ ಮುಂದುವರೆಯಲಿದ್ದು 100 ಬೆಡ್‌ಗಳಿರುವ ಆಸ್ಪತ್ರೆ ಕಿತ್ತೂರು ಹೊರವಲಯದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಧಾರವಾಡ ಕಿತ್ತೂರು ನಡುವೆ ಇರುವ 1000 ಎಕರೆಯಲ್ಲಿ ಕೈಗಾರಿಕೆ ಭೂಮಿ ನಿರ್ಮಿಸಿ ಕೈಗಾರಿಕೆ ಹೆಚ್ಚು ಒತ್ತು ಕೊಡಲಾಗುವುದು ಇದರಿಂದ ಅನೇಕ ಉದ್ಯೋಗಗಳು ಸೃಷ್ಟಿಗೊಳ್ಳಲಿವೆ ಎಂದು ಸಿಎಂ ಹೇಳಿದ್ದಾರೆ ಎಂದು ಹೇಳಿದರು. ವೀರಜ್ಯೋತಿ ಹೊರಡುವ ಸಂದರ್ಭದಿಂದಲೂ ಇಂದಿನವರೆಗೆ ಮಾಧ್ಯಮ ಕಿತ್ತೂರು ಉತ್ಸವದ ಬಗ್ಗೆ ಸಾಕಷ್ಟುಪ್ರಚಾರ ಪಡೆಸಿದೆ, 2024ರಲ್ಲಿ ಕಿತ್ತೂರು ವಿಜಯೋತ್ಸವಕ್ಕೆ 2 ಶತಕ ತುಂಬಲಿವೆ. ಈ 2ನೇ ಶತಕದ ವಿಜಯೋತ್ಸವವನ್ನು ನೂತನ ಅರಮನೆ ನಿರ್ಮಾಣ ಮಾಡಿಯೇ ಆಚರಿಸಬೇಕೆಂಬ ಹಂಬಲ ನನ್ನದಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿ, ರಾಜ್ಯ ಮಟ್ಟದ ಕಿತ್ತೂರು ಉತ್ಸವವೂ ಯಶಸ್ವಿಯಾಗಿ ಆಚರಣೆಗೊಂಡಿದೆ. ವೀರಜ್ಯೋತಿ ಮೆರವಣಿಗೆಯಲ್ಲಿ ಸುಮಾರು 10 ಸಾವಿರ ಜನ ಸೇರಿ ಭವ್ಯ ಸ್ವಾಗತ ಕೋರಿದ್ದಾರೆ. ಅಲ್ಲದೇ ಉತ್ಸವದಲ್ಲಿ ವಸ್ತು ಪ್ರದರ್ಶನ, ಶ್ವಾನ ಪ್ರದರ್ಶನ, ದೋಣಿ ವಿಹಾರ, ಫಲಪುಷ್ಪಗಳು ಯಶಸ್ಸು ಕಂಡಿವೆ. ವೇದಿಕೆಯ ಮೇಲೆ ಮಹಿಳಾ ಸಬಲೀಕರಣಕ್ಕೆ ನಡೆದ ಎಲ್ಲ ಚರ್ಚೆಗಳು ಅರ್ಥಪೂರ್ಣವಾಗಿದೆ. ಕಿತ್ತೂರಿನಲ್ಲಿ ನಡೆಯುವ ಕಾರ್ಯಕ್ರಮಗಳು ಬೈಲಹೊಂಗಲ, ಕಾಕತಿ, ಬೆಳಗಾವಿಯಲ್ಲಿ ನೇರ ಪ್ರಸಾರಗೊಂಡಿವೆ. ಕ್ರೀಡಾಸಕ್ತರು ಕುಸ್ತಿ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿಯೂ ಆಸಕ್ತಿ ತೋರಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿ ಬಂದಿದ್ದು ಈ ಮಣ್ಣಿನಲ್ಲಿ ಶೌರ್ಯ ಹಾಗೂ ದಿಟ್ಟತನ ಇನ್ನೂ ಇದೆ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

ಎಲ್ಲ ನಿವೃತ್ತ ಸೈನಿಕರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಸೀಮಿಮಠದ ಪಾಲಾಕ್ಷ ಸ್ವಾಮೀಜಿ ಆರ್ಶೀವಚನ ನೀಡಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಪ್ರಾಧಿಕಾರದ ಸದಸ್ಯರಾದ ಉಳವಪ್ಪ ಉಳ್ಳೆಗಡ್ಡಿ, ಚಿನ್ನಪ್ಪ ಮುತ್ನಾಳ, ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ, ಹಿರಿಯರಾದ ಅಪ್ಪಣ್ಣ ಪಾಗಾದ, ಚನ್ನಬಸಪ್ಪ ಮೊಕಾಶಿ, ಶ್ರೀಕರ ಕುಲಕರ್ಣಿ, ಪಪಂ ಸದಸ್ಯರು ವೇದಿಕೆಯ ಮೇಲಿದ್ದರು. ಶಿಕ್ಷಕ ಮಹೇಶ ಚನ್ನಂಗಿ ನಿರೂಪಿಸಿದರು. ಕಿತ್ತೂರು ತಹಸೀಲ್ದಾರ್‌ ಸೋಮಲಿಂಗಪ್ಪ ಹಾಲಗಿ ವಂದಿಸಿದರು.

PREV
Read more Articles on
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!