Mysuru : ಸುಗ್ಗನಹಳ್ಳಿ ಗ್ರಾಮದಲ್ಲಿ ಬಹಳ ವಿಶಿಷ್ಟವಾಗಿ ಗಣೇಶೋತ್ಸವ

By Kannadaprabha NewsFirst Published Oct 3, 2023, 6:56 AM IST
Highlights

ಇಲ್ಲಿಗೆ ಸಮೀಪದ ಸುಗ್ಗನಹಳ್ಳಿ ಗ್ರಾಮದಲ್ಲಿ ಬಹಳ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸಲಾಯಿತು.

  ಭೇರ್ಯ :  ಇಲ್ಲಿಗೆ ಸಮೀಪದ ಸುಗ್ಗನಹಳ್ಳಿ ಗ್ರಾಮದಲ್ಲಿ ಬಹಳ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸಲಾಯಿತು.

ಕುಂಬಾರ ಸಮಾಜದವರು ತಾವೇ ಮಣ್ಣು ತಂದು ಮೂರ್ತಿ ತಯಾರಿಸಿ ಅಲಂಕಾರ ಮಾಡಿ ಪ್ರತಿಷ್ಠಾಪಿಸಿ ಗ್ರಾಮಸ್ಥರೊಂದಿಗೆ ಸೇರಿ ವಿಸರ್ಜಿಸಿದ್ದಾರೆ. ಕಳೆದ 75 ವರ್ಷಗಳಿಂದ ಕುಂಬಾರ ಸಮಾಜ ಕುಂಬಾರಿಕೆ ಮಾಡುವುದರ ಜೊತೆಗೆ ಸುಗ್ಗನಹಳ್ಳಿ ಗ್ರಾಮದಲ್ಲಿ ಸಾಮರಸ್ಯದೊಂದಿಗೆ ತನ್ನೂರಿನ ಕೆರೆಯ ಮಣ್ಣನ್ನು ತಂದು 15 ದಿನಗಳು ಕೊಳೆಯಲು ಹಾಕಿ, ನಂತರ ಗಣಪತಿ ಮೂರ್ತಿ ತಯಾರಿಸಿ ಗಣೇಶ ಹಬ್ಬದಂದು ಕುಂಬಾರಿಕೆ ಸಮಾಜದ ಮುಖಂಡರು, ಯುವಕರು ಗ್ರಾಮಸ್ಥರೊಡಗೂಡು ವಿಗ್ರಹ ಪ್ರತಿಷ್ಠಾನೆ ಮಾಡುತ್ತಾರೆ.

ಇದು ಗ್ರಾಮದ ಕುಂಬಾರಿಕೆ ದ ಪ್ರತೀತಿ ಎಂದು ಗ್ರಾಮದ ದೊಡ್ಡ ಯಜಮಾನ ಬಂಡೆ ಕುಮಾರ್ ತಿಳಿಸಿದರು.

ಗಣೇಶ ಚತುರ್ಥಿ ದಿನದಂದು ಕುಂಬಾರ ಸಮಾಜದ ಯುವಕರ ಪಡೆ ಹಸಿರು ತೋರಣಗಳಿಂದ ಹಾಗೂ ತೆಂಗಿನ ಮರದ ಗರಿಯಿಂದ ಅಲಂಕಾರಿಕ ಚಪ್ಪರ, ಕಣ್ಣನ ಸೆಳೆಯುವ ಮಂಟಪ ಹಾಕಿ ಕೆರೆಯಿಂದ ದೇವರು ತಂದು ನಂತರ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಈ ಹಿಂದೆ ಒಂದು ತಿಂಗಳು ಗಣೇಶೋತ್ಸವ ಮಾಡಲಾಗುತ್ತಿತ್ತು. ಬದಲಾದಂತೆ ಸರ್ಕಾರದ ನಿಯಮಗಳು ಬದಲಾಗಿ 15 ದಿನಗಳಿಗೆ ವಿಸರ್ಜನೆ ಮಾಡಲಾಗುತ್ತಿದೆ.

ತಳಿರು, ತೋರಣ, ಹೂವಿನಿಂದ ಅಲಂಕೃತವಾದ ಟ್ರಾಕ್ಟರ್ ನಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ, ವೀರಗಾಸೆ, ಡೊಳ್ಳು ಕುಣಿತ, ನಗಾರಿ, ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಸುಗ್ಗನಹಳ್ಳಿ ಗ್ರಾಮದ ಕುಂಬಾರ ಕೆರೆಯಲ್ಲಿ ವಿಸರ್ಜಿಸಲಾಯಿತು.

ಕುಂಬಾರ ಸಮಾಜದ ಮುಖಂಡರಾದ ರಾಜಶೆಟ್ಟಿ, ವೀರಭದ್ರಶೆಟ್ಟಿ, ವೀರಭದ್ರ, ಕಿರಣ್, ರಾಜೇಶ್, ಆಕಾಶ್, ಮಂಜುನಾಥ್, ಪುಟ್ಟರಾಜು, ಕಾರ್ತಿಕ್, ಪೊಲೀಸ್ ಚಂದ್ರು, ಸತೀಶ್, ಅಭಿಷೇಕ್, ಚಂದ್ರ, ದಯಾನಂದ, ಮೋಹನ್ ಕುಮಾರ್, ಶಿಕ್ಷಕ ಕುಮಾರ್ ಶೆಟ್ಟಿ, ಶಿವಶೆಟ್ಟಿ, ಜವರಶೆಟ್ಟಿ, ಹೋಟಲ್ ರಾಘವೇಂದ್ರ, ರಂಗಸ್ವಾಮಿ, ಶಾಂತರಾಜ, ವೆಂಕಟೇಶ್ ಮೊದಲಾದವರು ಇದ್ದರು.

ನಮ್ಮ ಪೂರ್ವಿಕರು 75 ವರ್ಷಗಳಿಂದ ಕುಂಬಾರಿಕೆ ಮಾಡುವುದರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಮಣ್ಣಿನ ಗಣಪತಿ ಮೂರ್ತಿ ತಯಾರಿಸಿ ಕೊಡುತ್ತಿದ್ದರು. ಗ್ರಾಮದಲ್ಲಿ ಸರ್ವ ಜನಾಂಗದವರೊಡನೆ ಸಾಮರಸ್ಯ ಮನೋಭಾವದಿಂದ ಗಣೇಶೋತ್ಸವವನ್ನು ತಿಂಗಳ ಕಾಲ ಅದ್ದೂರಿಯಾಗಿ ಏರ್ಪಡಿಸಿ, ನಂತರ ವಿಸರ್ಜನೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸರ್ಕಾರದ ನಿಯಮದಿಂದಾಗಿ ಮಣ್ಣಿನ ಗಣಪತಿ ಮೂರ್ತಿಗೆ ಬೇಡಿಕೆ ಇಲ್ಲವಾಗಿದೆ. ಗಣೇಶೋತ್ಸವದ ಕಳೆ ಇಲ್ಲವಾಗಿದೆ.

- ಸುಗ್ಗನಹಳ್ಳಿ ರಾಜು, ಕುಂಬಾರ ಸಮಾಜದ ಮುಖಂಡ

ಗಣಪತಿ ಮೂರ್ತಿಯನ್ನು ಮಣ್ಣಿನಿಂದ ತಯಾರಿಸುವ ನಮ್ಮ ಕುಂಬಾರ ಸಮಾಜಕ್ಕ ಸರ್ಕಾರ ಸೂಕ್ತ ನೆರವು ನೀಡಬೇಕು. ಮಡಿಕೆ, ಕುಡಿಕೆ ಸೇರಿದಂತೆ ಹಲವಾರು ಮಣ್ಣಿನ ಮೂರ್ತಿ, ವಿಗ್ರಹ ತಯಾರಿಸಲು ಕೆ.ಆರ್. ನಗರ ಪಟ್ಟಣದ ಪ್ರತಿಷ್ಠಿತ ಸ್ಥಳದಲ್ಲಿ ವಿಶಾಲವಾದ ಸ್ಥಳವನ್ನು ಸರ್ಕಾರ ನಿಗದಿ ಮಾಡಲಿ, ನಮ್ಮ ಸಮಾಜದವರು ಕಸುಬು ಮಾಡಲು ಸಹಕಾರಿಯಾಗುತ್ತದೆ. ಅದಷ್ಟು ಸರ್ಕಾರ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆದೇಶಿಸಲಿ.

- ಆಕಾಶ್ ರಾಜ್, ಯುವ ಮುಖಂಡ, ಗಣೇಶೋತ್ಸವ ಸಮಿತಿ, ಸುಗ್ಗನಹಳ್ಳಿ ಗ್ರಾಮ

click me!