ಕಾಫಿನಾಡಲ್ಲಿ ಮತ್ತೊಂದು ವಿವಾದದ ಕಿಚ್ಚು: ಕರ್ನಾಟಕದ ಅಯೋಧ್ಯೆ ದತ್ತಪೀಠದಲ್ಲೂ ಡ್ರೆಸ್ ಕೋಡ್ ತರುವಂತೆ ಮುಸ್ಲಿಮರಿಂದ ಒತ್ತಾಯ

By Govindaraj SFirst Published Aug 11, 2024, 6:43 PM IST
Highlights

ಕಾಫಿನಾಡ ದತ್ತಪೀಠದ ಹೆಸ್ರೇ ವಿವಾದ. ಮುಸ್ಲಿಂ ನಮ್ದು ಅಂದ್ರೆ ಹಿಂದೂಗಳು ನಮ್ದು ಅಂತಾರೆ. ಅದರ, ಉಮೇದುವಾರಿಕೆಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.11): ಕಾಫಿನಾಡ ದತ್ತಪೀಠದ ಹೆಸ್ರೇ ವಿವಾದ. ಮುಸ್ಲಿಂ ನಮ್ದು ಅಂದ್ರೆ ಹಿಂದೂಗಳು ನಮ್ದು ಅಂತಾರೆ. ಅದರ, ಉಮೇದುವಾರಿಕೆಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಆ ಹೋರಾಟದ ಮಧ್ಯೆಯೂ ಮುಸ್ಲಿಂ ಸಂಘಟನೆಗಳು ದತ್ತಪೀಠದಲ್ಲಿ ಮತ್ತೆರಡು ಹೊಸ ಸಂಪ್ರಾದಯವನ್ನ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದು ದತ್ತಪೀಠದಲ್ಲಿ ಡ್ರೆಸ್ ಕೋಡ್ ಜಾರಿಗೆ ತರೋದ್ರ ಜೊತೆ ರಸ್ತೆಯುದ್ಧಕ್ಕೂ ಇರುವ ದತ್ತಪೀಠ ನಾಮಫಲಕಗಳ ಬದಲಾಗಿ ಗೆಜೆಟೆಡ್ ದಾಖಲೆಯಂತೆ ಇನಾಂ ದತ್ರಾತ್ರೇಯ ಬಾಡಾಬುಡನ್ ಸ್ವಾಮಿ ದರ್ಗಾ ಎಂದು ಬದಲಿಸಬೇಕು. ಅಲ್ಲಿ ದರ್ಗಾವೇ ಮಾಯವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

Latest Videos

ಡ್ರೆಸ್ ಕೋಡ್ ತರುವಂತೆ ಮುಸ್ಲಿಮರಿಂದ ಮನವಿ: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತೆಯ ಕೇಂದ್ರ ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ವರ್ಷಪೂರ್ತಿ ಪ್ರವಾಸಿಗರು ಬರ್ತಾರೆ. ನಿರ್ಬಂಧ ಹೊರತುಪಡಿಸಿ ದತ್ತಪೀಠಕ್ಕೆ ಪ್ರವಾಸಿಗರಿಲ್ಲದ ದಿನವೇ ಇಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯೋಕೆ ಬರೋರು-ಭಕ್ತಿ-ಭಾವದಿಂದ ಬರೋರು ಇಬ್ಬರು ಸಮನಾಗಿದ್ದಾರೆ. ಆದರೆ, ದತ್ತಪೀಠದಲ್ಲಿ ಡ್ರೆಸ್ ಕೋಡ್ ಜಾರಿಗೆ ತನ್ನಿ ಎಂದು ಸಯೈದ್ ಬುಡೇನ್ ಶಾ ಖಾದ್ರಿ ವಂಶಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. 

ಭ್ರಷ್ಟಾಚಾರದಲ್ಲಿ ಮುಳುಗಿದ ಕಾಗೆ ನೀವು ಸಿದ್ದರಾಮಯ್ಯನವರೇ: ಛಲವಾದಿ ನಾರಾಯಣಸ್ವಾಮಿ

ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಪವಿತ್ರವಾದ ಸ್ಥಳ. ಅಲ್ಲಿ ಆರಂಭದಲ್ಲಿ ಹೇಗೆ ಭಾರತೀಯ ಸಾಂಪ್ರಾದಾಯಿಕ ಉಡುಗೆ-ತೊಡುಗೆ ಹಾಕಿಕೊಂಡು ಹೋಗ್ತಿದ್ರೋ ಈಗಲೂ ಅದೇ ರೀತಿ ಡ್ರೆಸ್ ಕೋಡ್ ಜಾರಿಗೆ ತರುವಂತೆ ಶಾಖಾದ್ರಿ ವಂಶಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅವರ ಉಡುಗೆ ಅವರ ಸ್ವಾತಂತ್ರ್ಯ. ಆದ್ರೆ, ಇಲ್ಲಿಗೆ ಬರುವಾಗ ಸೀರೆ-ಚೂಡಿ-ಬುರ್ಖಾ-ಕುರ್ತಾ ಇರಲೆಂದು ಮನವಿ ಮಾಡಿದ್ದಾರೆ. ಅಲ್ಲಿ ದರ್ಗಾ, ಗೋರಿ, ಮಸೀದಿ, ದೇವರು ಎಲ್ಲಾ ಇದ್ದಾರೆ. ಅಲ್ಲಿ ಆಧುನಿಕ ಡ್ರೆಸ್ ಹಾಕ್ಕೊಂಡ್ ಬರೋದು ಎಷ್ಟು ಸರಿ ಎಂದು ಸರ್ಕಾರಕ್ಕೆ ಡ್ರೆಸ್ಕೋಡ್ ಜಾರಿ ಮಾಡುವಂತೆ ಬುಡೇನ್ ಶಾ ಖಾದ್ರಿ ವಂಶಸ್ಥರಾದ ಅಜ್ಮತ್ ಪಾಷಾ  ಮನವಿ ಮಾಡಿದ್ದಾರೆ. 

ನಾಮಫಲಕಗಳಲ್ಲಿನ ಹೆಸರು ಬದಲಾವಣೆಗೂ ಆಗ್ರಹ: ಇನ್ನು ಶಾಖಾದ್ರಿ ವಂಶಸ್ಥರು ದತ್ತಪೀಠದ ಹೆಸರನ್ನೂ ಬದಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಗೆಜೆಟೆಡ್ ದಾಖಲೆಗಳಲ್ಲಿ ದತ್ತಪೀಠದ ಹೆಸರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಇದೆ. ಆದರೆ, ಪ್ರವಾಸೋಧ್ಯಮ ಇಲಾಖೆಯ ನಾಮಫಲಕಗಳಲ್ಲಿ ದತ್ತಪೀಠ ಎಂದು ಇದೆ. ಆದರೆ, ಇನಾಂ ದತ್ತಾತ್ರೇಯ ಪೀಠ ಗ್ರಾಮದ ಹೆಸರು. 1991ರ ಕೋರ್ಟ್ ತೀರ್ಪೀನಲ್ಲಿ ದತ್ತಾತ್ರೇಯ 1, ದತ್ತಾತ್ರೇಯ 2 ಎಂದು ಹಳ್ಳಿಗಳಿದೆ. ಆ ಹಳ್ಳಿಗಳಿಗೆ ದತ್ತಾತ್ರೇಯ ಪೀಠ ಎಂದು ಹೆಸರು ಕೊಟ್ಟಿದ್ದಾರೆ. ಆದರೆ, ಇತ್ತೀಚೆಗೆ ಅಲ್ಲಿ ದರ್ಗಾ ಅನ್ನೋ ಹೆಸರೇ ಇಲ್ಲ. 

ಹಾಗಾಗಿ, ದರ್ಗಾದ ಹೆಸರನ್ನೂ ಅಲ್ಲಿ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಗೆಜೆಟೆಡ್ ದಾಖಲೆಗಳಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಎಂದು ಇದೆ. ಅದೇ ಹೆಸರು ಇರಬೇಕು ಎಂದು ಹೇಳಿದ್ದಾರೆ. ಅದು ಗ್ರಾಮವಾಗಬೇಕು. ಇಲ್ಲ ದರ್ಗಾ ಅಂತ ಇರಬೇಕು. ಗ್ರಾಮ ಬೇಕಾದವರು ಗ್ರಾಮಕ್ಕೆ ಹೋಗುತ್ತಾರೆ. ದರ್ಗಾ ಬೇಕಾದವರು ದರ್ಗಾಕ್ಕೆ ಹೋಗುತ್ತಾರೆ. ಅದು ಬಾಬಾಬುಡನ್ ಗಿರಿ ದರ್ಗಾ ಅಂತ ಇತ್ತು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಅದರ ಹೆಸರನ್ನ ಬದಲಿಸಿದೆ ಎಂದು ಹಿಂದಿನ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದೇವೇಗೌಡರ ವಯಸ್ಸಿಗೆ ಮರ್ಯಾದೆ ಕೊಡುವುದು ಕಲಿಯಬೇಕು: ಡಿಕೆಶಿಗೆ ನಿಖಿಲ್‌ ಕುಮಾರಸ್ವಾಮಿ ಟಾಂಗ್

ಒಟ್ಟಾರೆ, ದತ್ತಪೀಠ ಅನ್ನೋದೇ ವಿವಾದ ಹೆಸರು. ಅದು ಹಿಂದೂಗಳ ಬಾಯಲ್ಲಿ ದತ್ತಪೀಠವಾದ್ರೆ, ಮುಸ್ಲಿಮರ ಬಾಯಲ್ಲಿ ದರ್ಗಾವಾಗಿತ್ತು. ಆದರೆ, ಇಂದಿಗೂ ಅದು ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತೆಯ ಕ್ಷೇತ್ರವಾಗೇ ಉಳಿದಿದೆ. ಆದರೆ, ಈಗ ಶಾಖಾದ್ರಿ ವಂಶಸ್ಥರು ಇಂದಿನ ಸರ್ಕಾರ ನಾವು ಎಲ್ಲರ ಸರ್ಕಾರ ಎಂದು ಹೇಳಿದೆ. ಹಾಗಾಗಿ, ಇಲ್ಲಿ ಸರ್ಕಾರವೇ ಮಾಡಿರುವ ತಪ್ಪನ್ನ ಸರಿಪಡಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅದರ ಜೊತೆಗೆ, ಅದೇ ದತ್ತಪೀಠ ಧಾರ್ಮಿಕ ಭಾವೈಕ್ಯತಾ ಕ್ಷೇತ್ರವಾಗಿರೋದ್ರಿಂದ ಅಲ್ಲಿ ಡ್ರೆಸ್ ಕೋಡ್ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಈ ವಿವಾದದ ಸ್ಥಳದಲ್ಲಿ ಸರ್ಕಾರ ಯಾವ ರೀತಿ ಹೇಗೆ ಕ್ರಮ ಕೈಗೊಳ್ಳುತ್ತೆ ಅನ್ನೋದು ಯಕ್ಷಪ್ರಶ್ನೆ.

click me!