ಏಕಾಏಕಿ ಪಹಣಿಯಿಂದ ಮಾಯವಾದ ಜಮೀನು, ಸಣ್ಣ ನೀರಾವರಿ ಇಲಾಖೆ ವಿರುದ್ಧ ರೈತರ ಆಕ್ರೋಶ

Published : Aug 05, 2026, 05:18 PM IST
UttaraKannada Farmers

ಸಾರಾಂಶ

ಮುಂಡಗೋಡ ತಾಲೂಕಿನಲ್ಲಿ, ಬಾಚಣಕಿ ಜಲಾಶಯದ ಬಳಿ ತಲತಲಾಂತರದಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನನ್ನು, ಯಾವುದೇ ಮುನ್ಸೂಚನೆ ನೀಡದೆ ಸಣ್ಣ ನೀರಾವರಿ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ.

ಮುಂಡಗೋಡ (ಆ.5): ಯಾವುದೇ ಪೂರ್ವಭಾವಿ ನೋಟಿಸ್ ನೀಡುವುದಿಲ್ಲ, ಕನಿಷ್ಠ ಮಾಹಿತಿ ಸಹ ನೀಡುವುದಿಲ್ಲ... ಆದರೆ, ತಲತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನಿನ ಜಾಗ ಮಾತ್ರ ಏಕಾಏಕಿ ಪಹಣಿ (RTC) ಪತ್ರಿಕೆಯಿಂದ ಮಾಯವಾಗುತ್ತದೆ! ಇಂತಹದ್ದೊಂದು ವಿಚಿತ್ರ ಹಾಗೂ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು, ಸಂಕಷ್ಟಕ್ಕೊಳಗಾದ ರೈತರು ಅಧಿಕಾರಿಗಳ ಇಲಾಖೆಯ ಎಡವಟ್ಟಿಗೆ ರೊಚ್ಚಿಗೆದ್ದಿದ್ದಾರೆ. ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದ ಸುತ್ತಮುತ್ತಲಿನ ಭೂಮಿಯನ್ನು ಸಣ್ಣ ನೀರಾವರಿ ಇಲಾಖೆಯ ಹೆಸರಿಗೆ ಏಕಾಏಕಿ ವರ್ಗಾವಣೆ ಮಾಡಿರುವುದು ಈ ಸಾಲು ಸಾಲು ಆಕ್ರೋಶಕ್ಕೆ ಕಾರಣವಾಗಿದೆ.

ಏನಿದು ಪ್ರಕರಣ?

ಬಾಚಣಕಿ ಅಣೆಕಟ್ಟಿನ ನೀರನ್ನು ಬಳಸಿಕೊಂಡು ಕಳೆದ 70 ವರ್ಷಗಳಿಂದಲೂ ಇಲ್ಲಿನ ರೈತರು ಕೃಷಿ ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇವರ ಜಮೀನಿನ ಮಧ್ಯದಲ್ಲೇ ನೀರಾವರಿ ಕಾಲುವೆಯೂ ಹಾದುಹೋಗಿದ್ದು, ಕಾಲುವೆ ಪಕ್ಕದ ಭೂಮಿಯಲ್ಲಿ ರೈತರು ಬದುಕಿನ ಬಂಡಿ ಸಾಗಿಸುತ್ತಿದ್ದರು. ಆದರೆ, ಈಗ ಸಣ್ಣ ನೀರಾವರಿ ಇಲಾಖೆಯು ಯಾವುದೇ ಪರಿಹಾರವನ್ನೂ ನೀಡದೆ, ನೋಟಿಸ್ ಕೂಡ ನೀಡದೆ 25ಕ್ಕೂ ಹೆಚ್ಚು ರೈತರ ಪಹಣಿ ಪತ್ರಿಕೆಯಲ್ಲಿನ ಜಮೀನಿನ ವಿಸ್ತೀರ್ಣವನ್ನು ಕಡಿತಗೊಳಿಸಿ, ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ರೈತರು ಕೃಷಿ ಮಾಡಿಕೊಂಡಿರುವ ಜಾಗವನ್ನು ಏಕಾಏಕಿ ಖಾಲಿ ಮಾಡಿಸಲು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಸಾಲ ಮರುಪಾವತಿಗೆ ಸಹಕಾರಿ ಸಂಘಗಳ ಕಿರುಕುಳ!

ಅಧಿಕಾರಿಗಳ ಈ ಆತುರದ ನಿರ್ಧಾರದಿಂದಾಗಿ ರೈತರ ತಲೆ ಮೇಲೆ ಆಕಾಶವೇ ಬಿದ್ದಂತಾಗಿದೆ. ರೈತರು ತಮ್ಮ ಜಮೀನಿನ ಪಹಣಿ ಆಧಾರದ ಮೇಲೆಯೇ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದುಕೊಂಡಿದ್ದರು. ಈಗ ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ಕಡಿಮೆಯಾಗಿರುವುದರಿಂದ, "ನಿಮ್ಮ ಭೂಮಿಯ ಪ್ರಮಾಣ ಕಡಿಮೆಯಾಗಿದೆ, ಹೀಗಾಗಿ ಹೆಚ್ಚುವರಿಯಾಗಿ ನೀಡಿದ ಸಾಲದ ಹಣವನ್ನು ತಕ್ಷಣ ವಾಪಸ್ ಕಟ್ಟಿ" ಎಂದು ಸಹಕಾರಿ ಸಂಘಗಳು ರೈತರಿಗೆ ಕಿರುಕುಳ ನೀಡಲು ಪ್ರಾರಂಭಿಸಿವೆ.

ದಾಖಲೆ ತೋರಿಸದ ಅಧಿಕಾರಿಗಳು , ಉಗ್ರ ಹೋರಾಟದ ಎಚ್ಚರಿಕೆ

ಈ ಕುರಿತು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರೆ, "70 ವರ್ಷಗಳ ಹಿಂದೆಯೇ ಈ ಜಮೀನಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ" ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ, ಪರಿಹಾರ ನೀಡಿರುವುದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಅಥವಾ ಆರ್ಡರ್ ಕಾಪಿಗಳನ್ನು ರೈತರಿಗೆ ತೋರಿಸಲು ಅಧಿಕಾರಿಗಳ ಬಳಿ ಸಾಕ್ಷ್ಯಾಧಾರಗಳಿಲ್ಲ. ತಮ್ಮದಲ್ಲದ ತಪ್ಪಿಗೆ ಜಮೀನನ್ನೂ ಕಳೆದುಕೊಂಡು, ಬ್ಯಾಂಕ್ ಸಾಲ ತೀರಿಸಲಾಗದೆ ಕಂಗಾಲಾಗಿರುವ ಮುಂಡಗೋಡದ ರೈತರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ಪಹಣಿಯಲ್ಲಾದ ದೋಷವನ್ನು ಸರಿಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಆಟೋ ಡಿಕ್ಕಿಯಾಗಿ ವಿದ್ಯಾರ್ಥಿನಿ ಸಾವು; ಪಾಠ ಕೇಳುವುದು ಬಿಟ್ಟು ಪ್ರತಿಭಟನೆಗಿಳಿದ ಬೆಂಗಳೂರು ವಿವಿ ವಿದ್ಯಾರ್ಥಿಗಳು!
ರಾಜೀನಾಮೆ ವಾಪಸ್ ಪಡೆದ ಶಾಸಕ ಯಶವಂತರಾಯಗೌಡ ಪಾಟೀಲ್; ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ!