ಇವರೆಲ್ಲಾ ಹೊಸಕೋಟೆಗೆ ಬಂದು ತಂತ್ರ ಮಾಡಿ ನನ್ನ ಸೋಲಿಸಿದ್ರು : ಎಂಟಿಬಿ

By Kannadaprabha NewsFirst Published Sep 15, 2020, 3:45 PM IST
Highlights

ಇವರೆಲ್ಲರೂ ಸೇರಿ ಹೊಸಕೋಟೆಗೆ ಬಂದು ಕುತಂತ್ರ ಮಾಡಿ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದರು ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆ(ಸೆ.15):  ಬಿಜೆಪಿ ಪಕ್ಷ ದೇಶದ ಅತಿ ದೊಡ್ಡ ಪಕ್ಷವಾಗಿದ್ದು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಪರಿಕಲ್ಪನೆಯನ್ನು ಹೊಂದುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ತಿಳಿಸಿದರು.

ನಗರದ ಸಯ್ಯದ್‌ ಪ್ಯಾಲೇಸ್‌ನಲ್ಲಿ ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಪಕ್ಷ ಅಲ್ಪಸಂಖ್ಯಾತರ ವಿರೋಧಿ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಆದರೆ ಬಿಜೆಪಿ ಅಲ್ಪಸಂಖ್ಯಾತರನ್ನು ಗೌರವಿಸುವ ಕೆಲಸ ಮಾಡುತ್ತಿದೆ. ಪ್ರತ್ಯೇಕ ನಿಗಮ ಮಂಡಳಿ ನೇಮಕ ಮಾಡಿ ಮೂಲಭೂತ ಸೌಕರ‍್ಯಗಳ ಅಭಿವೃದ್ದಿಗೆ ಶ್ರಮಿಸಿದೆ. ಕಳೆದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರು ಬಿಜೆಪಿಯನ್ನು ವಿರೋಧಿಸಿದ ಪರಿಣಾಮ ನಾನು ಸೋಲನುಭವಿಸಬೇಕಾಯಿತು ಎಂದರು.

ಅಲ್ಪಸಂಖ್ಯಾತರು ಬೆಂಬಲ ನೀಡಲಿ

ಆದ್ದರಿಂದ ಇನ್ನು ಇನ್ನಾದರೂ ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಬಿಜೆಪಿ ಪಕ್ಷದ ಅಭಿವೃದ್ದಿಯನ್ನು ಮನಗಂಡು ಪಕ್ಷವನ್ನು ಬೆಂಬಲಿಸುವಂತಾಗಬೇಕು. ನನ್ನ ಅಧಿಕಾರಾವದಿಯಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಹೊಸಕೋಟೆ ನಗರ, ನಿಡಘಟ್ಟ, ಗಿಡ್ಡಪ್ಪನಹಳ್ಳಿ, ಸೂಲಿಬೆಲೆ, ಬೈಲನರಸಾಪುರ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡಿ, ಖಬರಸ್ಥಾನ್‌, ಈದ್ಗಾ ಮೈದಾನ ಸೇರಿದಂತೆ ಮೂಲಭೂತ ಸೌಕರ‍್ಯಗಳನ್ನು ಕಲ್ಪಿಸಿದ್ದೇನೆ ಎಂದರು.

ದೇಶದ ಅಭಿವೃದ್ಧಿ ಮೋದಿ ಗುರಿ

ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ಮುಕ್ತಾರ್‌ ಹುಸೇನ್‌ ಪಟಾನ್‌ ಮಾತನಾಡಿ, ದೇಶದ ಅಭಿವೃದ್ದಿ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಶ್ರಮಿಸುತ್ತಿದ್ದು, ಬೇಟಿ ಬಚಾವೋ, ಭೇಟಿ ಪಡಾವೋ, ತ್ರಿವಳಿ ತಲಾಖ್‌ ಸೇರಿದಂತೆ ಹಲವಾರು ಮಹತ್ತರ ಕಾಯ್ದೆಗಳನ್ನು ಅನುಷ್ಠಾನಗೊಳಿಸಿದ್ದಾರೆ. 6 ದಶಕಗಳಿಂದ ದೇಶವನ್ನು ಆಳಿದವರು ಅಲ್ಪಸಂಖ್ಯಾತರನ್ನು ವೋಟ್‌ ಬ್ಯಾಂಕ್‌ಗೆ ಬಳಕೆ ಮಾಡಿಕೊಂಡಿದ್ದರು. ಆದರೆ ಅಲ್ಪಸಂಖ್ಯಾತರ ಏಳಿಗೆಯನ್ನು ಬಿಜೆಪಿ ಮಾಡಿದ್ದು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಇದನ್ನು ಅರಿತು ಸಂಘಟಿತರಾಗಿ ಬಿಜೆಪಿಗೆ ಬೆಂಬಲ ನೀಡಬೇಕು ಎಂದರು.

ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಇದೇ ಕಾರಣ : ಎಂಟಿಬಿ ನಾಗರಾಜ್ ...

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಮುಜಮಿಲ್‌ ಬಾಬು, ವಕ್‌್ತ ಬೋರ್ಡ್‌ ಜಿಲ್ಲಾಧ್ಯಕ್ಷ ಖಿಜರ್‌ ಅಹಮದ್‌, ಹೊಸಕೋಟೆ ನಗರ ಅಧ್ಯಕ್ಷ ಅಪ್ಸರ್‌, ಬಿಜೆಪಿ ಟೌನ್‌ ಅಧ್ಯಕ್ಷ ಡಾ.ಸಿ.ಜಯರಾಜ್‌, ಬಿಎಂಆರ್‌ಡಿಎ ಅಧ್ಯಕ್ಷ ಸಿ.ನಾಗರಾಜ್‌, ನಗರಸಭೆ ಸದಸ್ಯರಾದ ಗುಲ್ಜಾರ್‌ ಅಹಮದ್‌, ಆನಂದ್‌ ಸಿಂಗ್‌, ಅರುಣ್‌(ಹರಿ), ವೆಂಕಟೇಶ್‌, ಶಾಜಿಯಾ ಕಲೀಂ, ಇನಾಯತ್‌ಉಲ್ಲಾ, ರೋಷನ್‌, ಯುವ ಮುಖಂಡ ಶೌರತ್‌ ಇದ್ದರು.

ಉಪಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷದ ಘಟಾನುಘಟಿ ರಾಜ್ಯ ನಾಯಕರು ಹೊಸಕೋಟೆಗೆ ಬಂದು ಕುತಂತ್ರದಿಂದ ಸೋಲಿಸಿದರು. ಆದರೆ ನಾನು ಸೋಲನುಭವಿಸಿದ ನಂತರ ನಡೆದ ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ 31 ವಾರ್ಡ್‌ಗಳ ಪೈಕಿ 23ರಲ್ಲಿ ಬಿಜೆಪಿ ಜಯಗಳಿಸಿದ್ದು, 7 ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಆಯ್ಕೆಯಾಗಿದ್ಧಾರೆ. ಇನ್ನು ಟೌನ್‌ ಬ್ಯಾಂಕ್‌ ಚುನಾವಣೆಯಲ್ಲಿ 13ಕ್ಕೆ 13 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದು, ಕಾಂಗ್ರೆಸ್‌ ಖಾತೆ ಕೂಡ ತೆರೆದಿಲ್ಲ. ಆದರೂ ಉಪಚುನಾವಣೆಯಲ್ಲಿ ಸೋತ ಬೇಜಾರು ನನಗಿದೆ. ಕೆಲವೇ ದಿನಗಳಲ್ಲಿ ನಾನು ಮಂತ್ರಿ ಆಗಲಿದ್ದು, ಇನ್ನಾದರೂ ನನ್ನ ಅಭಿವೃದ್ಧಿ ನೋಡಿ ಬಿಜೆಪಿಗೆ ಮತ ನೀಡಿ.

ಎಂಟಿಬಿ ನಾಗರಾಜ್‌ ವಿಧಾನ ಪರಿಷತ್‌ ಸದಸ್ಯ

click me!