‘ಕನ್ನಡಪ್ರಭ, ಸುವರ್ಣ ನ್ಯೂಸ್ ಗೆ ಸಂಸದ ತೇಜಸ್ವಿ ಸೂರ‍್ಯ ಶ್ಲಾಘನೆ

By Kannadaprabha NewsFirst Published Feb 29, 2020, 8:59 AM IST
Highlights

ಜಯನಗರದ ಎಂಇಎಸ್‌ ಮೈದಾನದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಆಯೋಜಿಸಿರುವ ಮೂರು ದಿನಗಳ ‘ಜಯನಗರ ಸಂಭ್ರಮ’ಕ್ಕೆ ಶುಕ್ರವಾರ ಚಾಲನೆ ದೊರಕಿದ್ದು, ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಅತ್ಯಂತ ನಿಖರವಾಗಿ ಪ್ರಸಾರ ಮಾಡುತ್ತವೆ ಎಂದರು.

ಬೆಂಗಳೂರು [ಫೆ.29]:  ರಾಷ್ಟ್ರೀಯತೆ ವಿಷಯಗಳನ್ನು ಬೇರೆಲ್ಲಾ ವಾಹಿನಿಗಳು ಹಾಗೂ ಪತ್ರಿಕೆಗಳಿಗಿಂತ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಅತ್ಯಂತ ನಿಖರವಾಗಿ ಪ್ರಸಾರ ಮಾಡಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಬಣ್ಣಿಸಿದರು.

ಜಯನಗರದ ಎಂಇಎಸ್‌ ಮೈದಾನದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಆಯೋಜಿಸಿರುವ ಮೂರು ದಿನಗಳ ‘ಜಯನಗರ ಸಂಭ್ರಮ’ಕ್ಕೆ ಶುಕ್ರವಾರ ಚಾಲನೆ ನೀಡಿದ ಮಾತನಾಡಿದ ಅವರು, ಇತ್ತೀಚಿನ ರಾಷ್ಟ್ರೀಯ ವಿಷಯಗಳನ್ನು ತುಂಬಾ ಚೆನ್ನಾಗಿ ವರದಿ ಮಾಡುತ್ತಿವೆ ಎಂದು ಶ್ಲಾಘಿಸಿದರು.

ಜಯನಗರವು ಆಧುನಿಕತೆ ಮತ್ತು ಸಾಂಸ್ಕೃತಿಕವಾಗಿಯೂ ಮುಂಚೂಣಿಯಲ್ಲಿದೆ. ದಾವಣಗೆರೆ ಬೆಣ್ಣೆ ದೋಸೆ, ಪಾನಿಪೂರಿಯಿಂದ ಹಿಡಿದು ಫಿಜ್ಜಾ, ಬರ್ಗರ್‌, ಚೈನೀಸ್‌ ತಿಂಡಿ ತಿನಿಸುಗಳ ವರೆಗೆ ಎಲ್ಲಾ ರೀತಿಯ ಆಹಾರ ದೊರೆಯುತ್ತವೆ. ಒಂದು ರೀತಿಯಲ್ಲಿ ಹಳೇ ಬೇರು ಹೊಸ ಚಿಗುರು ರೀತಿಯಲ್ಲಿ ಜಯನಗರ ಎಲ್ಲಾ ವರ್ಗದ ಜನರ ಬಡಾವಣೆಯಾಗಿದೆ ಎಂದು ಹೇಳಿದರು.

ಹೊಸ ಅವತಾರದಲ್ಲಿ ಪ್ರಕಾಶಿಸಿದ ಸೂರ್ಯ..

ನಟ ಧನಂಜಯ ಮಾತನಾಡಿ, ಜಯನಗರ ನನ್ನೆಲ್ಲಾ ಕನಸುಗಳನ್ನು ಕಟ್ಟಿದ ಬಡಾವಣೆಯಾಗಿದೆ. ಹತ್ತು ವರ್ಷದ ಹಿಂದೆ ಜಯನಗರ 4ನೇ ಬ್ಲಾಕ್‌ ಎಂಬ ಕಿರುಚಿತ್ರದ ಮೂಲಕ ಸಿನಿಮಾ ಪಯಣ ಆರಂಭವಾಯಿತು. ಆದ್ದರಿಂದ ನನ್ನನ್ನು ನಾಯಕ ನಟ, ಖಳನಟ ಎನ್ನುವುದಕ್ಕಿಂತ ‘ಜಯ ನಗರದ ಹುಡುಗ’ ಎಂದು ಕರೆದರೆ ಹೆಚ್ಚು ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದು ಸಂತಸ ಹಂಚಿಕೊಂಡರು.

ಆರಂಭದಲ್ಲಿ ಇಲ್ಲಿನ ಉದ್ಯಾನಗಳಲ್ಲಿನ ಕಲ್ಲು ಬೆಂಚುಗಳ ಮೇಲೆ ಕುಳಿತು ಯೋಚಿಸುತ್ತಿದ್ದ ಸಂದರ್ಭದಲ್ಲಿ ಹತ್ತಾರು ಬಗೆಯ ಪಾಠಗಳನ್ನು ಕಲಿಸಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಉದ್ಯಾನದಲ್ಲಿ ಸಮಾಜದ ಎಲ್ಲ ವರ್ಗದ ಜನರ ಬದುಕನ್ನು ಪರಿಚಯಿಸಿದೆ ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಮಾತನಾಡಿ, ಮುಂದಿನ ದಿನಗಳಲ್ಲಿಯೂ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ಸಂಸ್ಥೆ ಕಾರ್ಯಕ್ರಮಗಳಿಗೆ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್ ಸಿಇಒ ಅಭಿನವ್‌ ಖರೆ, ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥರಾದ ಅಪ್ಪಚ್ಚು, ನಾಗರಾಜ್‌, ಪಾಲಿಕೆ ಸದಸ್ಯರಾದ ಲಕ್ಷ್ಮಿ ನಟರಾಜ್‌, ಬಿಜೆಪಿ ಮುಖಂಡರಾದ ಎಸ್‌.ಕೆ.ನಟರಾಜ್‌, ಗೋವಿಂದ ನಾಯ್ಡು, ಪ್ರಹ್ಲಾದ ಬಾಬು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

click me!