ರಾಮನಗರದಲ್ಲಿದೆ ವಾರಸುದಾರರಿಲ್ಲದ 48.69 ಕೋಟಿ ರು! ಹಣ ವಾಪಸ್ ಹಿಂದಿರುಗಿಸಲು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ

Published : Dec 18, 2025, 06:46 PM IST
Money

ಸಾರಾಂಶ

ರಾಮನಗರ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 48.69 ಕೋಟಿ ರೂಪಾಯಿ ವಾರಸುದಾರರಿಲ್ಲದೆ ಉಳಿದಿದೆ. ಈ ಹಣವನ್ನು ಅದರ ಹಕ್ಕುದಾರರಿಗೆ ತಲುಪಿಸಲು 'ನಿಮ್ಮ ಹಣ-ನಿಮ್ಮ ಹಕ್ಕು' ಅಭಿಯಾನವನ್ನು ಆರಂಭಿಸಿದ್ದು, ಗ್ರಾಹಕರು ಡಿಸೆಂಬರ್ ಅಂತ್ಯದೊಳಗೆ ಅಗತ್ಯ ದಾಖಲೆಗಳನ್ನು ನೀಡಿ ತಮ್ಮ ಹಣವನ್ನು ಮರಳಿ ಪಡೆಯಬಹುದು.

ವರದಿ: ಎಂ.ಅಫ್ರೋಜ್ ಖಾನ್

ರಾಮನಗರ: ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಠೇವಣಿ (ಅನ್‌ಕೇಮ್ಸ್‌ಡೆಪಾಸಿಟ್) ಹಣ ಬರೋಬ್ಬರಿ 48.69 ಕೋಟಿ ರುಪಾಯಿ ಇರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಗುರುತಿಸಿದೆ. ಈ ಹಣವನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಅವಕಾಶವನ್ನೂ ಕೊಟ್ಟಿದೆ. ಜಿಲ್ಲೆಯ ಪ್ರಮುಖ 7 ಬ್ಯಾಂಕುಗಳಲ್ಲಿನ ಉಳಿತಾಯ ಖಾತೆ, ನಿಶ್ಚಿತ ಠೇವಣಿ ಸೇರಿ ಒಟ್ಟು 1,66,779 ಖಾತೆಗಳು ಹಲವು ವರ್ಷಗಳಿಂದ ನಿಷ್ಕ್ರಿಯವಾಗಿದ್ದು, ಇವುಗಳಲ್ಲಿ ಬರೋಬ್ಬರಿ 48.69 ಕೋಟಿ ರೂಪಾಯಿ ಹಣ ವಾರಸುದಾರರಿಲ್ಲದೆ ಹಾಗೆಯೇ ಉಳಿದಿದೆ.

ಹಣ ವಾಪಸ್ ಪಡೆಯಲು ಗ್ರಾಹಕರಿಗೆ ಅವಕಾಶ

ವಾರಸುದಾರರಿಗೆ ಹಣ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ನಿರ್ದೇಶನದಂತೆ ಹಕ್ಕು ಪಡೆಯದ ನಿಷ್ಕ್ರಿಯ ಖಾತೆಗಳ ಮುಚ್ಚುವಿಕೆ ಮತ್ತು ಮರುಸಕ್ರಿಯಗೊಳಿಸಲು ಬ್ಯಾಂಕುಗಳು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನವನ್ನು ಪ್ರಾರಂಭಿಸಿವೆ. ಈ ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ ಡಿಸೆಂಬರ್ ಅಂತ್ಯದವರೆಗೆ ನಡೆಯಲಿದೆ. ಅಭಿಯಾನದಲ್ಲಿ ಎಲ್ಲಾ ಬ್ಯಾಂಕುಗಳು ಕನಿಷ್ಠ ಖಾತೆಗಳನ್ನಾದರೂ ಸಕ್ರಿಯಗೊಳಿಸಬೇಕು ಎಂಬ ಗುರಿಯನ್ನು ನೀಡಲಾಗಿದೆ. ಆದ್ದರಿಂದ ನಿಷ್ಕ್ರಿಯ ಖಾತೆದಾರರ ಪೋನ್ ನಂಬರ್, ವಿಳಾಸಕ್ಕೆ ಮಾಹಿತಿ ನೀಡುತ್ತಿರುವ ಬ್ಯಾಂಕುಗಳು ನಿಷ್ಕ್ರಿಯ ಖಾತೆಗಳನ್ನು ಇತ್ಯರ್ಥಗೊಳಿಸುವಂತೆ ಖಾತೆದಾರರು ಮತ್ತು ವಾರಸುದಾರರು ದುಂಬಾಲು ಬಿದ್ದಿವೆ.

ಜಿಲ್ಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅತೀ ಹೆಚ್ಚು ಅಂದರೆ 37,826 ಖಾತೆಗಳಲ್ಲಿ 18.11 ಕೋಟಿ ರುಪಾಯಿ ಅನಾಥವಾಗಿ ಬಿದ್ದಿದೆ. ಉಳಿದಂತೆ ಕೆನರಾ ಬ್ಯಾಂಕಿನ 59,624 ಖಾತೆಗಳಲ್ಲಿ 12.84 ಕೋಟಿ ರೂಪಾಯಿ ಅನಾಥವಾಗಿದ್ದರೆ, ಕರ್ನಾಟಕ ಗ್ರಾಮೀಣ ಬ್ಯಾಂಕಿನ 8,367 ಖಾತೆಗಳಲ್ಲಿ 4.88 ಕೋಟಿ, ಬ್ಯಾಂಕ್ ಆಫ್ ಬರೋಡಾದ 11,997 ಖಾತೆಗಳಲ್ಲಿ 4.73 ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 11858 ಖಾತೆಗಳಲ್ಲಿ 2.07 ಕೋಟಿ, ಕರ್ನಾಟಕ ಬ್ಯಾಂಕಿನ 10834 ಖಾತೆಗಳಲ್ಲಿ 1.49 ಕೋಟಿ ಹಾಗೂ ಯುಕೋ ಬ್ಯಾಂಕಿನ 4667 ಖಾತೆಗಳಲ್ಲಿ 1.31 ಕೋಟಿ ಹಣ ಅನಾಥವಾಗಿ ಬಿದ್ದಿದೆ.

ನಿಷ್ಕ್ರಿಯ ಖಾತೆಯ ವಾರಸುದಾರರು ಮೃತಪಟ್ಟು ಕಾನೂನುಬದ್ಧ ಉತ್ತರಾಕಾರಿ ಇರದೇ ಇದ್ದರೆ ಖಾತೆದಾರರ ಮರಣ ಪ್ರಮಾಣ ಪತ್ರ, ಪಾಸ್ ಬುಕ್, ಗುರುತಿನ ಚೀಟಿ, ವಾರಸುದಾರರ ಪತ್ರ ಹಾಗೂ ಇಂಡೆಮ್ಮಿಟಿ ಬಾಂಡ್ ಹಾಗೂ ಉತ್ತರಾಧಿಕಾರಿ ಒಬ್ಬರಿಗಿಂತ ಹೆಚ್ಚು ಜನರಿದ್ದರೆ ಯಾರಿಗೆ ಹಣ ಸಂದಾಯ ಮಾಡಬೇಕು ಎಂಬ ಕುರಿತು ಒಪ್ಪಿಗೆ ಪತ್ರ ನೀಡಬೇಕು. ಜೊತೆಗೆ ಕ್ಲೈಮ್ ಮಾಡುವ ವ್ಯಕ್ತಿಯ ವಿಳಾಸದ ಪುರಾವೆ ಮತ್ತು ಕೆವೈಸಿ ದಾಖಲೆ ಸಲ್ಲಿಸಬೇಕು. ಜತೆಗೆ ಕ್ಲೈಮ್ ಮಾಡುವ ವ್ಯಕ್ತಿಯ ವಿಳಾಸದ ಪುರಾವೆ ಮತ್ತು ಕೆವೈಸಿ ದಾಖಲೆ ಸಲ್ಲಿಸಬೇಕು.

ನಿಷ್ಕ್ರಿಯ ಖಾತೆಗಳಲ್ಲಿರುವ ಹಣವನ್ನು ವಾಪಾಸ್ ಪಡೆಯುವುದು ಸುಲಭವಲ್ಲ. ಹತ್ತಾರು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದನ್ನೆಲ್ಲಾ ಪರಿಶೀಲನೆ ನಡೆಸಿ ಬ್ಯಾಂಕಿನವರಿಗೆ ಮನವರಿಕೆಯಾದ ಬಳಿಕವಷ್ಟೇ ಹಣವನ್ನು ಹಿಂದಿರುಗಿಸುತ್ತಾರೆ. ಬ್ಯಾಂಕಿನವರು ಕೇಳುವ ಎಲ್ಲಾ ದಾಖಲೆಗಳನ್ನು ಹೊಂದಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಖಾತೆಯಲ್ಲಿ ಅಲ್ಪ ಸ್ವಲ್ಪ ಹಣವಿದ್ದಲ್ಲಿ ಈ ಗೋಜು ಬೇಡ ಎಂದು ಸುಮ್ಮನಾಗುತ್ತಿದ್ದಾರೆ. ಆದ್ದರಿಂದ ಅಭಿಯಾನ ನಡೆಸುತ್ತಿರುವ ಬ್ಯಾಂಕುಗಳುಕೆಲ ದಾಖಲೆಗಳಿಗೆ ವಿನಾಯಿತಿ ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಆರ್ ಬಿಐ ಸೂಚನೆಯಂತೆ ಎಲ್ಲಾ ಬ್ಯಾಂಕುಗಳು ಹಳೇ ಖಾತೆಗಳಲ್ಲಿಇರುವ ಹಣದ ಮಾಹಿತಿ ನೀಡಲು ವಿಶೇಷ ವೆಬ್ ಪೋರ್ಟಲ್ ರೂಪಿಸಲಾಗಿದೆ. ಆರ್ ಬಿಐನ https:\\udgarm.rbi.org.in ವೆಬ್ ಸೈಟ್ ಮೂಲಕ ನಿಷ್ಕ್ರಿಯಖಾತೆಗಳನ್ನು ಪರಿಶೀಲನೆಮಾಡಬಹುದಾಗಿದೆ. ಇದಲ್ಲದೇ ನಿಧನರಾದ ವ್ಯಕ್ತಿಗಳ ಖಾತೆಯ ಪಾಸ್ ಬುಕ್, ಖಾತೆಯ ಸಂಖ್ಯೆ, ಠೇವಣಿ ರಸೀದಿ ಸಿಕ್ಕರೆ ಅದನ್ನು ಸಂಬಂಧಪಟ್ಟ ಬ್ಯಾಂಕುಗಳಿಗೆ ನೀಡಬೇಕು. ಇದಾವುದು ಇಲ್ಲವಾದರೆ ಸಂಬಂಸಿದ ಶಾಖೆ ಸಂಪರ್ಕಿಸಿ ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸ ನೀಡಿ ಖಾತೆ ಪತ್ತೆ ಮಾಡುವಂತೆ ಮನವಿ ಮಾಡಬಹುದು.

ಆರ್ ಬಿಐ ನಿರ್ದೇಶನದಂತೆ ಹಕ್ಕು ಪಡೆಯದ ನಿಷ್ಕ್ರಿಯ ಖಾತೆಗಳ ಮುಚ್ಚುವಿಕೆ ಮತ್ತು ಮರುಸಕ್ರಿಯಗೊಳಿಸುವಿಕೆಗಾಗಿ ಎಲ್ಲಾ ಬ್ಯಾಂಕುಗಳು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನವನ್ನು ಆರಂಭಿಸಿವೆ. ಇದರ ಸದುಪಯೋಗ ಪಡೆದು ಗ್ರಾಹಕರು, ವಾರಸುದಾರರು ತಮ್ಮ ಹಣವನ್ನು ವಾಪಾಸ್ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಮೋಹನ್ ಕುಮಾರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಏನಿದು ವಾರಸುದಾರರಿಲ್ಲದ ಹಣ ?

ಯಾವುದೇ ಉಳಿತಾಯ ಖಾತೆ , ಚಾಲ್ತಿ ಖಾತೆ 10 ವರ್ಷ ಚಲಾವಣೆಯಲ್ಲಿ ಇಲ್ಲದಿದ್ದರೆ ಅಂತಹ ಖಾತೆಯನ್ನು ನಿಷ್ಕ್ರೀಯ ಎಂದು ಪರಿಗಣಿಸಲಾಗುತ್ತದೆ. ನಿರ್ದಿಷ್ಟ ಖಾತೆಯಲ್ಲಿರುವ ಹಣವನ್ನು ವಾರಸುದಾರರಿಲ್ಲದ ಹಣ (ಅನ್ ಕ್ಲೇಮ್ಡ್ ಡೆಪಾಸಿಟ್ ) ಎಂದು ವರ್ಗೀಕರಿಸಲಾಗುತ್ತದೆ. ಆ ಹಣವನ್ನು ಆರ್ ಬಿಐ ಠೇ‍ವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸುತ್ತದೆ.

ಯಾವ್ಯಾವ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ ಹಣ ಎಷ್ಟಿದೆ ?

ಬ್ಯಾಂಕು ಖಾತೆಗಳ ಸಂಖ್ಯೆ ಮೊತ್ತ(ಕೋಟಿ ರು.ನಲ್ಲಿ)

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 37826 18.11
  • ಕೆನರಾ ಬ್ಯಾಂಕ್ 59624 12.84
  • ಕರ್ನಾಟಕ ಗ್ರಾಮೀಣ ಬ್ಯಾಂಕ್ 367 4.88
  • ಬ್ಯಾಂಕ್ ಆಫ್ ಬರೋಡಾ 11997 4.73
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 11858 2.07
  • ಕರ್ನಾಟಕ ಬ್ಯಾಂಕ್ 10834 1.49
  • ಯುಕೋ ಬ್ಯಾಂಕ್ 4667 1.31

PREV
Read more Articles on
click me!

Recommended Stories

ನಮ್ಮಿಂದನೆ ಬೆಂಗಳೂರು ಉದ್ಧಾರ ಎಂದವರಿಗೆ ಖಡಕ್ ಉತ್ತರ, ಮೈಸೂರು ಮಹರಾಜರ ಕೊಡುಗೆ ಇಲ್ನೋಡಿ
ಚಿಕ್ಕಮಗಳೂರು: ನನ್ ಹೆಂಡ್ತಿಗೆ ಕಂಡ್ ಕಂಡೋನು ಮೆಸೇಜ್ ಮಾಡ್ತಾನೆಂದು ಆತ್ಮ*ಹತ್ಯೆ ಮಾಡಿಕೊಂಡ ಗಂಡ!