ಕೊರೋನಾ ಸೋಂಕಿಗಿಂತ ಭಯದಿಂದ ಸತ್ತವರೇ ಹೆಚ್ಚು!

By Kannadaprabha NewsFirst Published May 27, 2021, 7:27 AM IST
Highlights

* ವೆಂಟಿಲೇಟರ್‌ನಲ್ಲಿ ಇದ್ದವರನ್ನು ನೋಡಿ/ ಬೇರೆಯವರ ಸತ್ತ ಸುದ್ದಿ ಕೇಳಿ ಹೆದರಿ ಸತ್ತರು
* ಇದುವರಿಗೂ ಕಲಘಟಗಿ ತಾಲೂಕಿನಲ್ಲಿ 32 ಜನ ಕೊರೋನಾದಿಂದ ಸಾವು
* ರೋಗಿಗಳಿಗೆ ಹೆದರಿಸುತ್ತಾ ಸುಲಿಗೆ ಮಾಡುತ್ತಿರುವ ಕೆಲವು ನಕಲಿ ವೈದ್ಯರು
 

ರಮೇಶ ಸೋಲಾರಗೊಪ್ಪ

ಕಲಘಟಗಿ(ಮೇ.27): ತಾಲೂಕಿನ ಗ್ರಾಮಗಳಲ್ಲಿ ಕೊರೋನಾ ವೈರಸ್‌ ಹೆಚ್ಚಾಗಿ ಕಂಡುಬಂದಿದ್ದು, ಮರಣ ಮೃದಂಗ ಮುಂದುವರೆದಿದೆ. ಇದರಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರಿಗಿಂತ, ಕೊರೋನಾ ಭಯಕ್ಕೆ ಸತ್ತವರೇ ಹೆಚ್ಚು ಎನ್ನುವ ಮಾತುಗಳು ಕೇಳಿ ಬರುತ್ತಿದೆ!

ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದವರು, ವಯಸ್ಸಾದವರು, ಪುಕ್ಕಲು ಸ್ವಭಾವದವರು ತಮಗೆ ಕೊರೋನಾ ಸೋಂಕು ತಗಲುವ ಮುನ್ನವೇ ಹೆದರಿ ಅಸುನೀಗಿದ್ದಾರೆ. ಕೊರೋನಾ ಭಯದಿಂದ ಗ್ರಾಮಗಳು ಅಕ್ಷರಶಃ ನಲುಗಿವೆ. ಮಹಾಮಾರಿ ಕೊರೋನಾ ಎಡಬಿಡದೆ ಕಾಡುತ್ತಿದೆ. ಅದಕ್ಕಿಂದ ಹೆಚ್ಚಾಗಿ ಕರೋನಾ ಭಯ ಜನತೆಯನ್ನು ಅತಿಯಾಗಿ ಕಾಡುತ್ತಿದೆ. ಆ ಭಯ ಎಷ್ಟರಮಟ್ಟಿಗೆ ಆವರಿಸಿದೆಯೆಂದರೆ, ಗ್ರಾಮಗಳಲ್ಲಿ ಬಾಂಧವ್ಯದಿಂದ ಜೀಸುತ್ತಿದ್ದ ಜನರು ಪಟ್ಟಣದವರಂತೆ ಕಾಟಾಚಾರದ ಸಂಬಂಧಿಗಳಂತೆ ವರ್ತಿಸುತ್ತಿದ್ದಾರೆ. ಹಗಲು -ರಾತ್ರಿ ಹಳ್ಳಿ ಕಟ್ಟೆನಡೆಸುತ್ತಿದ್ದವರು ತಮ್ಮ ಮನೆಯ ಮೂಲೆ ಸೇರಿದ್ದಾರೆ. ಯಾರ ಮನೆಗೂ ಯಾರು ಹೋಗದಂತ ಪರಿಸ್ಥತಿ ನಿರ್ಮಾಣವಾಗಿದೆ.

"

ಮುಂದುವರೆದ ಜನಜಂಗುಳಿ:

ಹಳ್ಳಿಜನ ಸರಿಯಾಗಿ ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಮಾಡುವುದಿಲ್ಲ ಮತ್ತು ಅಂತರ ಕಾಯುತ್ತಿಲ್ಲ. ಎಷ್ಟೇ ಕಟ್ಟಳೆ ಇದ್ದರೂ ಜನಜಂಗುಳಿಯ ಮದುವೆಗಳು ನಡೆಯುತ್ತಿವೆ. ಯಾರಾದರೂ ಸತ್ತರೆ ಅಪಾರ ಜನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕೊರೋನಾ ಸಮುದಾಯಕ್ಕೆ ಹಬ್ಬುತ್ತಿದೆ.

ಕೊರೋನಾ ಕಾಟ: ಸಿಸಿಸಿ, ಐಸೋಲೇಶನ್‌ ಕೇಂದ್ರಕ್ಕೆ ಕರೆತರೋದೇ ಹರಸಾಹಸ

ಸೋಂಕಿನ ಲಕ್ಷಣವಿದ್ದವರು ಆಸ್ಪತ್ರೆಗೆ ಹೋಗಲು, ತಪಾಸಣೆಗೆ ಒಳಪಡಲು ಹಿಂದೇಟು ಹಾಕುತ್ತಾರೆ. ಕಾರಣ ತಮ್ಮ ಕೆಮ್ಮು, ನೆಗಡಿಗೆ ಕರೋನಾ ಹೆಸರಿಸುತ್ತಾರೆ ಎನ್ನುವ ಭಯ. ಪಾಜಿಟಿವ್‌ ಬಂದರೆ ಆಸ್ಪತ್ರೆಯಲ್ಲಿ ಇರಬೇಕು. ಸುತ್ತು ಮುತ್ತಲಿನ ಜನರು ತಮ್ಮನ್ನು ಬೇರೆಯೇ ದೃಷ್ಟಿಯಿಂದ ನೋಡುತ್ತಾರೆ ಎಂದು ಸಂಕುಚಿತ ಮನೋಭಾವನೆ. ಹಾಗಾಗಿ ಕೊರೋನಾ ಪರೀಕ್ಷೆ ಕೂಡ ಮಾಡುಸುತ್ತಿಲ್ಲ. ತಮಗೆ ಗೂತ್ತಿದ್ದ ಹಳ್ಳಿ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಯಲ್ಲಿ ಮಾತ್ರೆ ನುಂಗುತ್ತ ನರಳಾಡುತ್ತಾರೆ. ಇದನ್ನೆ ಬಂಡವಾಳ ಮಾಡಿಕೂಂಡ ಕೆಲವು ನಕಲಿ ವೈದ್ಯರು ರೋಗಿಗಳಿಗೆ ಹೆದರಿಸುತ್ತಾ ಸುಲಿಗೆ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಇಂಥ ನಕಲಿ ವೈದ್ಯರ ಸಂಖ್ಯೆ ಹೆಚ್ಚಿದೆ. ಇವರೇ ಜನರ ದಾರಿ ತಪ್ಪಿಸುತ್ತಿದ್ದಾರೆ.

32 ಜನ ಸಾವು:

ಇದುವರಿಗೂ ತಾಲೂಕಿನಲ್ಲಿ 1306 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, ಅದರಲ್ಲಿ 223 ಜನ ಹೋಮ ಐಸೋಲೇಶನ್‌ ಆಗಿದ್ದಾರೆ. 22 ಜನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 32 ಜನ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಾಗಿದ್ದಾರೆ. 26 ಜನ ಕಲಘಟಗಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರಿಗೂ ತಾಲೂಕಿನಲ್ಲಿ 32 ಜನ ಕರೋನಾದಿಂದ ಮೃತಪಟ್ಟಿದ್ದಾರೆ.

ತಾಲೂಕಿನ ಮುಕ್ಕಲ, ಹಿರೇಹೊನ್ನಳ್ಳಿ , ತಾವರಗೇರಿ, ಜೋಡಳ್ಳಿ, ಬಮ್ಮಿಗಟ್ಟಿಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್‌ ಕಾಳಜಿ ಕೇಂದ್ರಗಳನ್ನು ತೆರಯಲಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ರೋಗಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ.

ತಾಲೂಕಿನ 20 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಪ್ರತ್ಯೇಕವಾಗಿ 50 ಆಕ್ಸಿಜನ್‌ ಬೆಡಗಳಿದ್ದು, 3 ವೆಂಟಿಲೇಟರ್‌ ಇವೆ. ಮತ್ತು 11 ಆಕ್ಸಿಜನ್‌ ಕಾನ್ಸಂಟ್ರೇಟರ್‌ ಸೌಲಭ್ಯವಿದ್ದು ಜನರು ಭಯಪಡುವ ಅಗತ್ಯವಿಲ್ಲ ಎಂದು ಕಲಘಟಗಿ ತಾಲೂಕ ವೈದ್ಯಾಧಿಕಾರಿ ಡಾ.ಬಸವರಾಜ ಬಾಸೂರ ತಿಳಿಸಿದ್ದಾರೆ. 

ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಮಾಸ್ಕ್‌ ಧರಿಸಬೇಕು. ಸ್ಯಾನಿಟೈಸರ್‌ ಬಳಸಿ ಮತ್ತು ಅಂತರ ಕಾಪಾಡಿಕೊಳ್ಳಿ. ಕೊರೋನಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ತಪಾಸಣೆ ಮಾಡಿಸಿಕೂಳ್ಳಿ. ಅವಶ್ಯವಿದ್ದರೆ ಕಾಳಜಿ ಕೇಂದ್ರದಲ್ಲಿ ದಾಖಲಾಗಿ. ತಕ್ಷಣಕ್ಕೆ ಸಹಾಯವಾಣಿ: 08370-284535, 9448006853 ಸಂಪರ್ಕಿಸಿ ಎಂದು ಕಲಘಟಗಿ ತಹಶೀಲ್ದಾರ ಅಶೋಕ ಶಿಗ್ಗಾಂವಿ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!