ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ: ಯತೀಂದ್ರ ಸಿದ್ದರಾಮಯ್ಯ

Published : Apr 17, 2026, 08:00 PM IST
Yathindra Siddaramaiah

ಸಾರಾಂಶ

ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದು ನಮ್ಮ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಬೈಲಹೊಂಗಲ (ಏ.17): ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ, ಮಳೆ-ಬೆಳೆ ಸಮೃದ್ಧಿಯಾಗಿ ರೈತರ ಬದುಕು ಉನ್ನತಿಗೇರಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದು ನಮ್ಮ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಸಿದ್ದ ಸುಕ್ಷೇತ್ರ ನಯಾನಗರ ಗ್ರಾಮದ ಸುಖದೇವಾನಂದ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಠ-ಮಾನ್ಯಗಳ ಪಾತ್ರ ಅಪಾರವಾಗಿದೆ. ಸಮಾಜದಲ್ಲಿ ಏಕತೆ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಧರ್ಮಪೀಠಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸುಖದೇವಾನಂದ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಹಲವು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಿಂದ ಮಠಾಧೀಶರು, ಸಾಧು-ಸಂತರನ್ನು ಆಹ್ವಾನಿಸಿ ಧರ್ಮಸಭೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಮತ್ತು ಸತ್ಸಂಸ್ಕಾರಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

ಸಾಮಾಜಿಕ ಕಳಕಳಿ ಇಟ್ಟು ಸಾಮೂಹಿಕ ವಿವಾಹ ಆಯೋಜಿಸಿರುವುದು ಅತ್ಯಂತ ಮಹತ್ವದ ಕೆಲಸ. ಇಂತಹ ಕಾರ್ಯಕ್ರಮಗಳಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಭಾರ ಕಡಿಮೆಯಾಗುತ್ತದೆ. ಜೊತೆಗೆ ಸರಳ ವಿವಾಹದ ಸಂದೇಶ ಸಮಾಜಕ್ಕೆ ತಲುಪುತ್ತದೆ. ಅತಿರೇಕದ ಖರ್ಚುಗಳನ್ನು ತೊರೆದು ಸೌಹಾರ್ದತೆಯ ಬದುಕು ನಡೆಸುವ ಅಗತ್ಯವನ್ನು ಇಂತಹ ಕಾರ್ಯಕ್ರಮಗಳು ಒತ್ತಿ ಹೇಳುತ್ತವೆ ಎಂದು ಅಭಿಪ್ರಾಯಪಟ್ಟರು.

ಸಂತೋಷ ತಂದಿದೆ

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉದ್ಘಾಟನೆ ನೆರವೇರಿಸುವ ಅವಕಾಶ ದೊರೆತಿರುವುದು ಸಂತೋಷ ತಂದಿದೆ. ಮಠದ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತರಿಸಿ ಸಮಾಜಕ್ಕೆ ಹೆಚ್ಚಿನ ಸೇವೆ ನೀಡಲಿ ಎಂದು ಹಾರೈಸಿದರು. ಸುಖದೇವಾನಂದ ಪುಣ್ಯಾಶ್ರಮದ ಗುರು ಅಭಿನವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಮತ್ತು ಸರಳತೆಯನ್ನು ಉತ್ತೇಜಿಸಲು ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ.

ಧರ್ಮ, ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಠಗಳು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ನಿರಂತರ ಪ್ರಯತ್ನಿಸುತ್ತಿವೆ ಎಂದು ಹೇಳಿದರು, ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ಪುನಸ್ಕಾರಗಳು ಹಾಗೂ ಸಾಮೂಹಿಕ ವಿವಾಹಗಳು ಭಕ್ತಿಭಾವದಿಂದ ನೆರವೇರಿದವು. ಕಾರ್ಯಕ್ರಮದಲ್ಲಿ ಒಟ್ಟು 20 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.

PREV
Read more Articles on
click me!

Recommended Stories

ಮೈಸೂರಲ್ಲಿ ಮನೆಯೊಳಗೆ ನುಗ್ಗಿದ ಚಿರತೆಯೊಂದಿಗೆ 2 ಗಂಟೆ ಕಳೆದ 90ರ ಅಜ್ಜಿ; ಸಾವಿನ ಮನೆ ಕದ ತಟ್ಟಿಬಂದ ತಾಯಿ-ಮಗಳು!
ವಿನಯ್ ಕುಲಕರ್ಣಿ ಶಿಕ್ಷೆ ಹಿಂದಿದೆ ಬಿಜೆಪಿ 'ಒಳಸಂಚು': ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ