ಭೂ ಕುಸಿತ ಭವಿಷ್ಯದ ಅಪಾಯದ ಎಚ್ಚರಿಕೆ ಗಂಟೆ

By Kannadaprabha NewsFirst Published Aug 14, 2021, 2:53 PM IST
Highlights
  • ಭೂಕುಸಿತ ಜಿಲ್ಲೆಗೆ ಭವಿಷ್ಯದ ಅಪಾಯ ಹೇಳುತ್ತಿದೆ. ಅರಣ್ಯ ನಾಶ ಮಾಡಿಕೊಂಡು ಅಭಿವೃದ್ಧಿ ಮಾಡುವುದಕ್ಕಿಂತ ಅರಣ್ಯ ಉಳಿಸಿ
  • ಕಡಿಮೆ ಹಾನಿಯಾಗುವಂತೆ ಮುಂಜಾಗ್ರತೆ ವಹಿಸಿ ಜಿಲ್ಲೆಯ ಅಭಿವೃದ್ಧಿ ನಡೆಯಬೇಕು
  •  ವಿಧಾನಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಎಚ್ಚರಿಕೆ

 ಶಿರಸಿ (ಆ.14):  ಭೂಕುಸಿತ ಜಿಲ್ಲೆಗೆ ಭವಿಷ್ಯದ ಅಪಾಯ ಹೇಳುತ್ತಿದೆ. ಅರಣ್ಯ ನಾಶ ಮಾಡಿಕೊಂಡು ಅಭಿವೃದ್ಧಿ ಮಾಡುವುದಕ್ಕಿಂತ ಅರಣ್ಯಕ್ಕೆ ಆದಷ್ಟು ಕಡಿಮೆ ಹಾನಿಯಾಗುವಂತೆ ಮುಂಜಾಗ್ರತೆ ವಹಿಸಿ ಜಿಲ್ಲೆಯ ಅಭಿವೃದ್ಧಿ ನಡೆಯಬೇಕು ಎಂದು ವಿಧಾನಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಅರಣ್ಯ ಇಲಾಖೆ ಶಿರಸಿ ವಿಭಾಗ ಹಾಗೂ ಕಳವೆ ಗ್ರಾಮ ಅರಣ್ಯ ಸಮಿತಿ ಆಶ್ರಯದಲ್ಲಿ ಕಳವೆಯ ಕಾನ್ಮನೆ ಆವರಣದಲ್ಲಿ ಶುಕ್ರವಾರ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದೊಡ್ಡ ಅಣೆಕಟ್ಟೆ, ಅರಣ್ಯ ನಾಶದ ಅಪಾಯಗಳು ಉತ್ತರ ಕನ್ನಡದ ವಿವಿಧ ಪ್ರದೇಶಗಳಲ್ಲಿ ಅನುಭವಕ್ಕೆ ಬರುತ್ತಿದೆ. ಜಿಲ್ಲೆಯ ಜನ ಯಲ್ಲಾಪುರದ ಕಳಚೆ ಭೂಕುಸಿತದ ಪ್ರದೇಶಕ್ಕೆ ಭೇಟಿ ನೀಡಿದರೆ ಪ್ರಕೃತಿಯ ಅಪಾಯ ಅರಿಯಬಹುದು. ಜಿಲ್ಲೆಯ ಭವಿಷ್ಯದ ಬಗ್ಗೆ ಎಚ್ಚರ ಮೂಡಬಹುದು. ಅರಣ್ಯದ ಮೇಲಿನ ಒತ್ತಡ ಕಡಿಮೆಗೊಳಿಸಿಕೊಂಡು ಜಿಲ್ಲೆಯ ಪರಿಸರ ಸಂರಕ್ಷಿಸುವ ಕರ್ತವ್ಯ ಎಲ್ಲರದಾಗಿದೆ. ಕಳವೆಯ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಪರಿಸರ ಜಾಗೃತಿಯ ಅತ್ಯುತ್ತಮ ಕೆಲಸ ಮಾಡುತ್ತಿದೆ. ಇಲ್ಲಿನ ಭವಿಷ್ಯದ ಯೋಜನೆಗಳಿಗಾಗಿ ಅಗತ್ಯ ನೆರವು ನೀಡುವುದಾಗಿ ಘೋಷಿಸಿದರು.

ಕೊಡಗಿನಲ್ಲಿ ಮಳೆಯಬ್ಬರ : ಧರೆ ಕುಸಿತ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶ್‌ ಕುಮಾರ ಮಾತನಾಡಿ, ಪ್ರಾಕೃತಿಕ ವಿಕೋಪಗಳನ್ನು ಬಹಳ ಹಿಂದಿನಿಂದಲೂ ಭೂಮಿ ಆಗಾಗ ನೋಡುತ್ತಲೇ ಬಂದಿದೆ. ಈಗ ಬದುಕಿರುವ ನಮಗೆ ಇದು ಹೊಸದಾಗಿದೆ. ಮಾನವ ಸಂಕುಲಕ್ಕೆ ಹಾನಿಯಾದಾಗ ಅದರ ತೀವ್ರತೆಯ ಬಗ್ಗೆ ಹಲವು ವಿಶ್ಲೇಷಣೆಗಳು ಬರುತ್ತಿವೆ. ನಮಗೆ ಇನ್ನೂ ನಿಸರ್ಗದ ನಡೆ ಸಂಪೂರ್ಣ ಅರ್ಥವಾಗಿಲ್ಲ. ಕಾಡು ಹಾಗೂ ಮುನುಷ್ಯನ ಬದುಕಿನ ಅನ್ಯೋನ್ಯತೆ ಅರ್ಥ ಮಾಡಿಕೊಂಡು ಸಂರಕ್ಷಣೆಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.

ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ಹೆಗಡೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಅಲಗೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಳವೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಶಿವಾನಂದ ಕಳವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿರಸಿ ವಲಯ ಅರಣ್ಯಾಧಿಕಾರಿ ಬಸವರಾಜ್‌ ಬೂಚಳ್ಳಿ, ಗ್ರಾಮ ಅರಣ್ಯ ಸಮಿತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಉಪವಲಯ ಅರಣ್ಯಾಧಿಕಾರಿ ಸುರೇಶ್‌ ರಾಥೋಡ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ವನಪಾಲಕ ಹನುಮಂತ ಯರಗೇರಿ ವಂದಿಸಿದರು.

click me!