'ಆಲಮಟ್ಟಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಿ'

By Kannadaprabha NewsFirst Published Jan 27, 2021, 1:18 PM IST
Highlights

ಭೀಮಾನದಿ ಪ್ರವಾಹದಿಂದ ಸಾಕಷ್ಟು ರೈತರು ತೊಂದರೆಗೆ ಸಿಲುಕಿದ್ದಾರೆ| ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರದ ಸಮನ್ವಯತೆಯಿಂದ ಮುಂದೆ ಇಂತಹ ಪ್ರವಾಹ ಬರದಂತೆ ನೋಡಿಕೊಳ್ಳಬೇಕು| ಈ ಭಾಗದ ಲಿಂಬೆಗೆ ಜಿಐ (ಭೌಗೋಳಿಕ ಮಾನ್ಯತೆ) ದೊರಕಿಸಿಕೊಡುವಲ್ಲಿ ಪ್ರಯತ್ನ ನಡೆದಿದೆ: ಶಾಸಕ ಯಶವಂತರಾಯಗೌಡ|  

ಇಂಡಿ(ಜ.27): ಆಲಮಟ್ಟಿ ಅಣೆಕಟ್ಟು 524 ಅಡಿ ಎತ್ತರಿಸಿ ಬ್ರಿಜೆಷ್‌ಕುಮಾರ ವರದಿಯಂತೆ ವಿಜಯಪುರ ಜಿಲ್ಲೆಗೆ 130 ಟಿಎಂಸಿ ನೀರು ನೀರಾವರಿಗೆ ಬಳಕೆಯಾಗಬೇಕು. ನೀರಾವರಿ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಅವರು ಮಂಗಳವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹೆರಲು ಸರ್ಕಾರ ಮುಂದೆ ಹೆಜ್ಜೆ ಇಟ್ಟಿದ್ದಾರೆ. ಅದು ತ್ವರಿತವಾಗಿ ಆಗಬೇಕು. ಭೀಮಾನದಿ ಪ್ರವಾಹದಿಂದ ಸಾಕಷ್ಟು ರೈತರು ತೊಂದರೆಗೆ ಸಿಲುಕಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರದ ಸಮನ್ವಯತೆಯಿಂದ ಮುಂದೆ ಇಂತಹ ಪ್ರವಾಹ ಬರದಂತೆ ನೋಡಿಕೊಳ್ಳಬೇಕು. ಈ ಭಾಗದ ಲಿಂಬೆಗೆ ಜಿಐ (ಭೌಗೋಳಿಕ ಮಾನ್ಯತೆ) ದೊರಕಿಸಿಕೊಡುವಲ್ಲಿ ಪ್ರಯತ್ನ ನಡೆದಿದೆ. ಈ ಕೆಲಸ ಕೆಲವೇ ದಿನದಲ್ಲಿ ಆಗಲಿದೆ ಎಂದರು.

'ಬಿಜೆಪಿ ಸರ್ಕಾರ ಜನವಿರೋಧಿ ನೀತಿ ಕೈಬಿಡಲಿ'

ತಮಿಳುನಾಡು ಮಾದರಿಯಲ್ಲಿ ಮತಕ್ಷೇತ್ರದ ಎಲ್ಲ ಗ್ರಾಮೀಣ ರಸ್ತೆಗಳನ್ನು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣಕ್ಕೆ ರಿಂಗ್‌ ರಸ್ತೆ ನಿರ್ಮಾಣದ ಕುರಿತು ಡಿಪಿಆರ್‌ ಕರೆಯಲಾಗಿದೆ. ಪಟ್ಟಣದಲ್ಲಿ ಮೆಗಾ ಮಾರುಕಟ್ಟೆಗೆ ಸರ್ಕಾರದಿಂದ 8 ಕೋಟಿ ಅನುದಾನ ಮಾರ್ಚ್‌ ತಿಂಗಳ ನಂತರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಒಟ್ಟು 30 ಕೋಟಿ ವೆಚ್ಚದಲ್ಲಿ 400 ಮಳಿಗೆಗಳನ್ನು ನಿರ್ಮಿಸಲಾಗುತ್ತದೆ ಎಂದರು.
2021ಕ್ಕೆ ಜನಸಂಖ್ಯೆ ಗಣತಿ ನಡೆಯಲಿದ್ದು, 2021ರ ಜನಗಣತಿಯಂತೆ ಪಟ್ಟಣದ ಜನಸಂಖ್ಯೆ 50 ಸಾವಿರ ದಾಟುತ್ತದೆ. ಹೀಗಾಗಿ ಮುಂಬರುವ ದಿನದಲ್ಲಿ ಪುರಸಭೆ ಮೇಲ್ದರ್ಜೆಗೇರಿ ನಗರಸಭೆಯಾಗುತ್ತದೆ ಎಂದರು.

ಎಸಿ ರಾಹುಲ ಶಿಂಧೆ, ಡಿವೈಎಸ್ಪಿ ಶ್ರೀಧರ ದೊಡ್ಡಿ, ತಹಸೀಲ್ದಾರ್‌ ಚಿದಂಬರ ಕುಲಕರ್ಣಿ, ತಾಪಂ ಇಒ ಸಂಜಯ ಖಡಗೇಕರ, ತಾಪಂ ಅಧ್ಯಕ್ಷ ಅಣ್ಣರಾಯ ಬಿದರಕೋಟಿ, ಶ್ರೀಶೈಲ ಪೂಜಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
 

click me!