ಉಡುಪಿಯಲ್ಲಿ ನಿರ್ಮಾಣವಾಗುವುದು ಸಾವರ್ಕರ್ ಪುತ್ಥಳಿಯೋ ವೃತ್ತವೋ? ನಿಲ್ಲದ ಚರ್ಚೆ

By Gowthami KFirst Published Aug 23, 2022, 10:17 PM IST
Highlights

 ಉಡುಪಿಯಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಿಸಲೇಬೇಕು ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದರೆ, ಶಾಸಕ ರಘುಪತಿ ಭಟ್ ಪುತ್ಥಳಿ ಬೇಡ ಸರ್ಕಲ್ ನಿರ್ಮಿಸೋಣ ಎಂದು ಹೇಳುತ್ತಿದ್ದಾರೆ.

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.23): ಉಡುಪಿಯಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಿಸಲೇಬೇಕು ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದರೆ, ಶಾಸಕ ರಘುಪತಿ ಭಟ್ ಪುತ್ಥಳಿ ಬೇಡ ಸರ್ಕಲ್ ನಿರ್ಮಿಸೋಣ ಎಂದು ಹೇಳುತ್ತಿದ್ದಾರೆ. ಬಿಜೆಪಿ ಆಡಳಿತ ಇರುವ ಉಡುಪಿ ನಗರಸಭೆ ಮುಂದೆ ಎರಡು ಅಭಿಪ್ರಾಯಗಳನ್ನು ಮಂಡಿಸಲಾಗಿದೆ. ನಗರಸಭೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋ ಕುತೂಹಲ ಎಲ್ಲೆಡೆ ಮೂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ, ಹಿಂದೂ ಮಹಾಸಭಾ ಕಾರ್ಯಕರ್ತರು ನಗರದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಅವರ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಿದ್ದರು. ಜೈ ಹಿಂದೂ ರಾಷ್ಟ್ರ ಎಂದು ಬರೆಯಲಾಗಿದ್ದ ಬ್ಯಾನರ್ ಬಗ್ಗೆ ಪಿ ಎಫ್ ಐ ವಿರೋಧ ವ್ಯಕ್ತಪಡಿಸಿತ್ತು. ಐದು ದಿನಗಳ ಕಾಲ ಬ್ಯಾನರ್ ಗೆ ವಿಶೇಷ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ನಡೆಯುವ ಸಂದರ್ಭದಲ್ಲಿ ಪೊಲೀಸರ ಜವಾಬ್ದಾರಿಯನ್ನು ಹಗುರಗೊಳಿಸುವ ದೃಷ್ಟಿಯಿಂದ ಹಿಂದೂ ಸಂಘಟನೆಗಳು ಬ್ಯಾನರ್ ತೆರವುಗೊಳಿಸಲು ಒಪ್ಪಿದ್ದವು. 

ಮೆರವಣಿಗೆ ಮೂಲಕ ಬ್ಯಾನರ್ ತೆರವು ಮಾಡಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಪುತ್ಥಳಿ ಸ್ಥಾಪಿಸುವಂತೆ ಹಿಂದೂ ಕಾರ್ಯಕರ್ತರು ಒತ್ತಾಯಿಸಿದ್ದರು. ಹಿಂದೂ ಮುಖಂಡ ಯಶಪಾಲ್ ಸುವರ್ಣ, ಹಿಂದು ಜಾಗರಣ ವೇದಿಕೆ, ಹಿಂದು ಮಹಾಸಭಾ ಇದೇ ಸ್ಥಳದಲ್ಲಿ ಸಾವರ್ಕರ್ ಪುತ್ಥಳಿ ಸ್ಥಾಪಿಸುವುದಾಗಿ ಹೇಳಿತ್ತು. ಈ ಬಗ್ಗೆ ನಗರ ಸಭೆಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಗಿತ್ತು.

ಪುತ್ಥಳಿ ನಿರ್ಮಾಣ ಸಮಂಜಸವಲ್ಲ ಸರ್ಕಲ್ ಮಾಡೋಣ
ಆದರೆ ಉಡುಪಿ ಶಾಸಕ ರಘುಪತಿ ಭಟ್ ಪುತ್ಥಳಿ ನಿರ್ಮಾಣ ಸಮಂಜಸವಲ್ಲ, ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಾಣ ಮಾಡೋಣ ಎಂದು ಹೇಳಿದ್ದಾರೆ. ವೀರ ಸಾವರ್ಕರ್ ಅವರ ಪುತ್ಥಳಿ ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ಪ್ರತಿಮೆಗೆ ಅವಮಾನ ಇತ್ಯಾದಿ ಚಟುವಟಿಕೆಗಳು ನಡೆಯಬಹುದು.

ಬ್ರಹ್ಮಗಿರಿ ಸರ್ಕಲ್‌ನಲ್ಲಿ ಅಳವಡಿಸಿದ್ದ ಸಾವರ್ಕರ್ ಬ್ಯಾನರ್ ತೆರವು; ಮೆರವಣಿಗೆ ಮೂಲಕ ತೆರವು

ಹಾಗಾಗಿ ಬ್ರಹ್ಮಗಿರಿ ಸರ್ಕಲ್ ಗೆ ಬದಲಾಗಿ ಹೆಚ್ಚು ಜನನಿಬಿಡ ಪ್ರದೇಶವಾದ ಹಳೇ ತಾಲೂಕ್ ಆಫೀಸ್ ಆವರಣದಲ್ಲಿ, ಸಾವರ್ಕರ್ ಹೆಸರಿನ ಸರ್ಕಲ್ ನಿರ್ಮಿಸೋಣ ಎಂದು ಸಲಹೆ ಮಾಡಿದ್ದಾರೆ. ಈ ಬಗ್ಗೆ ಮುಂದಿನ ನಗರಸಭಾ ಅಧಿವೇಶನದಲ್ಲಿ ಠರಾವು  ಮಂಡಿಸುವುದಾಗಿಯೂ ಹೇಳಿದ್ದಾರೆ.

ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ:ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

ಹಿಂದೂ ಸಂಘಟನೆಗಳು ಸಾವರ್ಕರ್ ಅವರ ಪುತ್ಥಳಿ ಬೇಕು ಎನ್ನುತ್ತಿವೆ. ಬಿಜೆಪಿ ಶಾಸಕರು ಪುತ್ಥಳಿ ಬೇಡ ಸರ್ಕಲ್ ನಿರ್ಮಿಸೋಣ ಎನ್ನುತ್ತಿದ್ದಾರೆ. ಬಿಜೆಪಿಯೇ ಆಡಳಿತ ನಡೆಸುವ ಉಡುಪಿ ನಗರಸಭೆ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡಬೇಕು.

click me!