ಕಾರ್ಮಿಕರನ್ನ ವಾಪಸ್‌ ಕರೆತನ್ನಿ: ಕಾಂಗ್ರೆಸ್‌ ಭರಿಸಲಿದೆ ಸಾರಿಗೆ ವೆಚ್ಚ

By Kannadaprabha NewsFirst Published May 10, 2020, 12:43 PM IST
Highlights

ಸಂಕಟದಲ್ಲಿರುವ ಕಾರ್ಮಿಕರ ವಾಪಸ್ ಕರೆತರಲು ಸಾರಿಗೆ ವೆಚ್ಚ ನಿಗದಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ| ಲಾಕ್‌ಡೌನ್‌ನಿಂದಾಗಿ ಹೊರರಾಜ್ಯಗಳಲ್ಲಿ ಸಿಲುಕಿರುವ ಕಲಬುರಗಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರನ್ನು ಕರೆತರಲು ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸಿ|  ಸಾರಿಗೆ ಶುಲ್ಕವನ್ನು ಕೆಪಿಸಿಸಿ ಕಡೆಯಿಂದ ಭರಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ NEKRTC ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರ ಬರೆದ ಖರ್ಗೆ|

ಕಲಬುರಗಿ(ಮೇ.10): ಹೊರ ರಾಜ್ಯದಲ್ಲಿ ಸಿಲುಕಿರುವ ಕಲಬುರಗಿ ಜಿಲ್ಲೆಯ ಕೂಲಿ ಕಾರ್ಮಿಕರನ್ನು ಕರೆತನ್ನಿ, ಸಾರಿಗೆ ವ್ಯವಸ್ಥೆಗೆ ತಗುಲುವ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ  ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.  

ಸಂಕಟದಲ್ಲಿರುವ ಕಾರ್ಮಿಕರ ವಾಪಸ್ ಕರೆತರಲು ಸಾರಿಗೆ ವೆಚ್ಚ ನಿಗದಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಲಾಕ್‌ಡೌನ್‌ನಿಂದಾಗಿ ಹೊರರಾಜ್ಯಗಳಲ್ಲಿ ಸಿಲುಕಿರುವ ಕಲಬುರಗಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರನ್ನು ಕರೆತರಲು ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ ಅವರು ಸಾರಿಗೆ ಶುಲ್ಕವನ್ನು ಕೆಪಿಸಿಸಿ ಕಡೆಯಿಂದ ಭರಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ NEKRTC ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ರಾಜ್ಯದ ವಿವಿಧ ನಗರಗಳಿಗೆ ವಲಸೆ ಹೋಗಿರುವ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಕೊರೋನಾ‌ ವೈರಸ್ ತಡೆಯಲು ವಿಧಿಸಲಾದ ಲಾಕ್‌ ಡೌನ್ ನಿಂದಾಗಿ ಅಲ್ಲಿಯೇ ಸಿಲುಕಿ ಪರದಾಡುತ್ತಿದ್ದು ಒಂದೊತ್ತಿನ ಊಟಕ್ಕೂ ಸಂಕಟಪಡುತ್ತಿದ್ದಾರೆ. ಈ ಕುರಿತು ಅವರಲ್ಲಿ ಕೆಲವರು ದೂರವಾಣಿ‌ ಮೂಲಕ ಕರೆ ಮಾಡಿ ತಮ್ಮ ಅತಂತ್ರ‌ ಸ್ಥಿತಿಯನ್ನು ವಿವರಿಸಿದ್ದಾರೆ.

ಅಂತವರನ್ನು ವಾಪಸ್ ಕರೆತರಲು ರಾಜ್ಯ ಸರಕಾರ ಹಾಗೂ ಸಾರಿಗೆ ಇಲಾಖೆ‌ ರೂ 50,000 ರವರೆಗೆ ಶುಲ್ಕ‌ ನಿಗದಿ ಮಾಡಿರುವುದಾಗಿ ತಿಳಿದು ಬಂದಿದೆ. ಕಳೆದ ಹಲವಾರು ದಿನಗಳಿಂದ ಕೆಲಸವಿಲ್ಲದೇ ಊಟಕ್ಕೂ ಪರದಾಡುವ ಸ್ಥಿತಿ ತಲುಪಿರುವ ಬಡ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ‌ಶುಲ್ಕ ಭರಿಸುವುದು ಅಸಾಧ್ಯದ ಮಾತು. ಇದನ್ನು ರಾಜ್ಯ ಸರಕಾರ ಮನಗಾಣಬೇಕಿತ್ತು. ಇಂತಹ ಸಂದರ್ಭದಲ್ಲಿ ‌ಕಾಂಗ್ರೆಸ್ ಪಕ್ಷ‌ ನೊಂದವರ ಪರವಾಗಿದ್ದು‌ ಕಾರ್ಮಿಕರ ವಾಪಸ್ ಕರೆತರಲು  ನಿಗದಿಪಡಿಸಿದ ಸಾರಿಗೆ ವೆಚ್ಚವನ್ನು ಕೆಪಿಸಿಸಿ ಕಡೆಯಿಂದ ಭರಿಸಲು ಸಿದ್ದವಿದ್ದು ಈ‌ ಕೂಡಲೇ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ (ತಲಾ 50) ಒಂದು‌ ನೂರು ಬಸ್ ಹಾಗೂ ಗೋವಾ ಮತ್ತು ತೆಲಂಗಾಣಕ್ಕೆ (ತಲಾ 25 ) ಐವತ್ತು ಬಸ್ ಗಳನ್ನು ಕಳಿಸಿ ಅಲ್ಲಿಂದ ಕಾರ್ಮಿಕರನ್ನು ಕಲಬುರಗಿ ಗೆ ವಾಪಸ್ ಕರೆತರುವಂತೆ ಅವರು ತಮ್ಮ‌ ಪತ್ರದಲ್ಲಿ ಆಗ್ರಹಿಸಿದ್ದಾರೆ.

ವೈದ್ಯಕೀಯ ತಂಡದಿಂದ ಕಾರ್ಮಿಕರರಿಗೆ ಅಗತ್ಯ ಆರೋಗ್ಯ ಪರೀಕ್ಷೆ ನಡೆಸಿ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆಯೂ ಕೂಡಾ ಪ್ರಿಯಾಂಕ್ ಖರ್ಗೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
 

click me!