Belagavi: RTO ಅಧಿಕಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆ; ಏಕೆ ಗೊತ್ತಾ?

Published : Jul 26, 2022, 11:33 AM IST
Belagavi: RTO ಅಧಿಕಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆ; ಏಕೆ ಗೊತ್ತಾ?

ಸಾರಾಂಶ

ಆಟೋ, ಟೆಂಪೋ ಚಾಲಕರಿಂದ RTO ಅಧಿಕಾರಿಗಳು ಹೆಚ್ಚಿನ ದಂಡ ವಸೂಲಿ ಆರೋಪ ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್‌ಗೆ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆ  ಮೇಲಿನವರು ಟಾರ್ಗೆಟ್ ‌ಕೊಟ್ಟಿದ್ದಾರೆ ಅಂತ ಕೇಸ್ ಹಾಕಿದ್ರೆ ಹೆಂಗೆ? ಎಂದು ಪ್ರಶ್ನೆ  

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಜು.26): ಬೆಳಗಾವಿ ಗ್ರಾಮೀಣ ಕ್ಷೇತ್ರದ ಆಟೋ, ಟೆಂಪೋ ಚಾಲಕರು ಆರ್ ಟಿಒ ಅಧಿಕಾರಿಗಳು ವಿವಿಧ ಕಾರಣವೊಡ್ಡಿ ಹೆಚ್ಚಿನ ದಂಡ ವಸೂಲಿ ಮಾಡ್ತಿದ್ದಾರೆಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಬಳಿ ಅಳಲು ತೋಡಿಕೊಂಡಿದ್ದರು‌‌. ಇದರಿಂದ ಆಕ್ರೋಶಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇರವಾಗಿ ಬೆಳಗಾವಿಯ ಆರ್‌ಟಿಒ ಕಚೇರಿಗೆ ತೆರಳಿ RTO ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್‌ಗೆ ತರಾಟೆಗೆ ತಗೆದುಕೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, 'ಹೊಟ್ಟೆಪಾಡಿಗಾಗಿ ‌ಮಳೆಯಲ್ಲಿ, ಚಳಿಯಲ್ಲಿ, ಬಿಸಿಲಲ್ಲಿ ಆಟೋ, ಟೆಂಪೋ ಚಾಲಕರು ದುಡಿಯುತ್ತಿದ್ದಾರೆ. ಕಳ್ಳತನ, ಮೋಸ, ಸುಳ್ಳು ಹೇಳದೆ ಬೆವರು ಸುರಿಸಿ ದುಡಿಯವವರ ಮೇಲೆ‌ ಏಕೆ ಕೇಸ್ ಹಾಕ್ತಿದ್ದಿರಿ? ಮೇಲಿನವರು ಟಾರ್ಗೆಟ್ ‌ಕೊಟ್ಟಿದ್ದಾರೆ ಅಂತ ಕೇಸ್ ಹಾಕಿದ್ರೆ ಹೇಂಗೆ? ಅವರು ಎಲ್ಲಿ ಸಾಯಿಯಬೇಕು, 

ಅಕ್ರಮ ಮರಳು ದಂಧೆ; ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ!

ಅವರೇನು ದೊಡ್ಡವರಲ್ಲ.‌ ವಾಹನದ ಸಾಲ ಕಟ್ಟಿ, ಉಳಿದ ದುಡ್ಡಲ್ಲಿ ಹೊಟ್ಟೆ ತುಂಬಿಸಿಕೊಳ್ಳಾರೆ. ನಿಮಗೆ ಟಾರ್ಗೆಟ್ ‌ಕೊಟ್ಟಿರುವುದಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಿರಾ?‌ ನೀವು ಸರ್ಕಾರಿ ನೌಕರರು, ನಾನು ಸರ್ಕಾರದಲ್ಲಿ ಕೆಲಸ ಮಾಡ್ತಿನಿ. ಪ್ರತಿಯೊಂದು ಕಾನೂನು ‌ಚೌಕಟ್ಟು ಬಿಟ್ಟು ಏನು ಆಗಲ್ಲ. ಬಡವರ ತೊಂದರೆ ಆಗಬಾರದು ಎಂದು ನಿಮ್ಮ ಬಳಿ ಬಂದಿದ್ದೇನೆ. ಇವತ್ತು ನಿಮ್ಮ ಮುಂದೆ ಕುಂತಿದಿನಿ ನಾಳೆ, ನಿಮ್ಮ ಕಚೇರಿ ಮುಂದೆ ಬಂದು ಧರಣಿ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ‌. 

ಎಲ್ಲವನ್ನೂ ನೀವು ಕಾ‌ನೂನು ಪ್ರಕಾರ ಮಾಡ್ತಿರಾ? ನಿಮಗೆ ಒತ್ತಡ ಇದ್ರೆ ಅದನ್ನು ಬೇರೆ ರೀತಿ ಮನವೊಲಿಸಿ, ದುಡಿದು ತಿನ್ನುವ ವರ್ಗಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸಿ, ಮೊದಲೇ‌ ದೇಶದಲ್ಲಿ ಉದ್ಯೋಗ ಇಲ್ಲ ಎಂದು ಗರಂ ಆಗಿದ್ದಾರೆ. ನಾನು ಡಿಸಿಯವರ ಜೊತೆ ಮಾತನಾಡ್ತೇನೆ, ಮಿನಿಮಮ್ ಫೈನ್ ಏನಿದೆ ಅದನ್ನ ಕಟ್ಟುತ್ತಾರೆ. 17 ಸಾವಿರ ರೂಪಾಯಿಯಷ್ಟು ದಂಡ‌ ಕಟ್ಟಿ ಅಂದ್ರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಆಟೋ ಹಾಗೂ ಟೆಂಪೊ ಟ್ರಾವೆಲರ್ಸ್‌‌ ಚಾಲಕರಿಗಾಗುತ್ತಿರುವ ತೊಂದರೆಗಳ ಕುರಿತು ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ  ಸಾರಿಗೆ ಅಧಿಕಾರಿಗಳ ಜೊತೆ ಚರ್ಚಿಸಿದರು.

ಶುಲ್ಕ ಕಟ್ಟಲು ಅಮ್ಮನ ಮಂಗಳಸೂತ್ರ ಮಾರಿದ ಯುವಕ: ಮಾನವೀಯತೆ ಮೆರೆದ ಆರ್‌ಟಿಒ ಅಧಿಕಾರಿ

 'ಆಟೋ ಚಾಲಕರು ಹಾಗೂ ಟೆಂಪೋ ಚಾಲಕರು ಶ್ರಮ ಜೀವಿಗಳು. ಕಷ್ಟಪಟ್ಟು ದುಡಿದು ಕುಟುಂಬ ನಿರ್ವಹಣೆ ಜೊತೆಗೆ ವಾಹನದ ಸಾಲ ಮರುಪಾವತಿಸಬೇಕಾಗುತ್ತದೆ. ಹಾಗಾಗಿ ಅಧಿಕಾರಿಗಳು ಅವರಿಗೆ ಕಾನೂನು ತಿಳಿವಳಿಕೆ ನೀಡುವ ಜೊತೆಗೆ ಸೌಹಾರ್ಧಯುತವಾಗಿ ವರ್ತಿಸಬೇಕು. ಮನಸ್ಸಿಗೆ ಬಂದಂತೆ ದಂಡ ವಿಧಿಸುವ, ಪ್ರಕರಣ ದಾಖಲಿಸುವ ಕೆಲಸವನ್ನು ಮಾಡಬಾರದು. ಕಾನೂನು ಪಾಲಿಸುವ ಜೊತೆಗೆ ಮಾನವೀಯತೆಯಿಂದ ಸ್ಪಂದಿಸಬೇಕು' ಎಂದು ಸೂಚಿಸಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ಆಟೋ ಹಾಗೂ ಟೆಂಪೋ ಟ್ರಾವೆಲರ್ಸ್‌‌ ಚಾಲಕರ ಜೊತೆ ವರ್ತಿಸಿ ಯಾರಿಗೂ ತೊಂದರೆಯಾಗದಂತೆ ಕರ್ತವ್ಯ ಪಾಲಿಸುವಂತೆ ಸೂಚನೆ ನೀಡಿದ್ದು ಈ ಸಂಬಂಧ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಜೊತೆಯೂ ಚರ್ಚಿಸುವುದಾಗಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!