'ಮಾಜಿ ಸಚಿವ ರಾಯರಡ್ಡಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ಸ್ವಾರ್ಥ ರಾಜಕಾರಣಿ'

By Kannadaprabha NewsFirst Published Apr 20, 2020, 8:10 AM IST
Highlights

ಮಾಜಿ ಸಚಿವ ಬಸವರಾಜ ರಾಯರಡ್ಡಿ ಸ್ವಾರ್ಥ ರಾಜಕಾರಣಿ| ಶಾಸಕ ಹಾಲಪ್ಪ ಆಚಾರ ಟೀಕೆ|ಲಾಕ್‌​ಡೌನ್‌ ವೇಳೆ ಕ್ಷೇತ್ರದ ಜನ​ತೆಗೆ ರಾಯ​ರಡ್ಡಿ ಕೊಡುಗೆ ಏನು?| ಕೊಪ್ಪಳ ಜಿಲ್ಲಾಧಿಕಾರಿಗಳ ಬಗ್ಗೆ ರಾಜ್ಯದಲ್ಲಿಯೇ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ| ರಾಯರಡ್ಡಿ ಉಡಾಫೆಯಾಗಿ ಮಾತನಾಡಿರುವುದು ಕೂಡ ಶೋಭೆ ತರುವಂಥದ್ದಲ್ಲ|

ಯಲಬುರ್ಗಾ(ಏ.20): ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ರಾಜಕೀಯ ನೆಪದಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ಸ್ವಾರ್ಥ ರಾಜಕಾರಣಿಯಾಗಿದ್ದಾರೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿ ಮಾಡುವುದು ನನ್ನ ಉಸಿರು ಎಂದು ಸಭೆ, ಸಮಾರಂಭದಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದ ಬಸವರಾಜ ರಾಯರಡ್ಡಿಯವರು ಇದೀಗ ದೇಶದೆಲ್ಲೆಡೆ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿರುವ ಕ್ಷೇತ್ರದ ಜನತೆಗೆ ನಿಮ್ಮ ಸಹಾಯ, ಸಹಕಾರದ ಕೊಡುಗೆ ಏನು? ಅವರ ಯೋಗಕ್ಷೇಮ ವಿಚಾರಿಸುವ ಸಮಯವು ನಿಮಗಿಲ್ಲದವರು ಮೋದಿಯವರ ಬಗ್ಗೆ ಟೀಕೆ ಮಾಡುವುದು ಅದೆಷ್ಟು ಸರಿ? ಎಂದು ಆರೋಪಿಸಿದರು.

'ಯಲಬುರ್ಗಾಕ್ಕೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು, ಹಾಲಪ್ಪ ಈಸ್ ಮೈ ಪ್ರಾಡಕ್ಟ್ '

ಪ್ರಧಾನಿ ಮೋದಿಯವರು ಇಡೀ ದೇಶದ ಜನತೆ ಒಂದೇ ಬಾರಿಗೆ ಚಪ್ಪಾಳೆ ಬಾರಿಸುವುದು, ಏಕಕಾಲಕ್ಕೆ ದೀಪ ಹಚ್ಚುವುದು ಬೆಳಕನ್ನು ಆಸ್ವಾದಿಸುವುದು ಮೌಢ್ಯವಲ್ಲ, ನೊಂದವರ ಬದುಕಿನಲ್ಲಿ ಚೈತನ್ಯ ನೀಡುವ ಮೂಲಕ ಏಕತೆಯ ಸಂಕೇತದಿಂದ ದೇಶದ ಕೋಟ್ಯಂತರ ಜನರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿರುವುದನ್ನು ಇಡೀ ಎಲ್ಲ ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಮಾಡಿರುವುದನ್ನು ರಾಯರಡ್ಡಿಯವರು ಗಮನಿಸಿದ್ದಾರೋ ಇಲ್ವೋ ಗೊತ್ತಿಲ್ಲ. ಈಗಾಗಲೇ ರೈತರ ಬೆಳೆಹಾನಿಗೆ ಸಿಎಂ ಪರಿಹಾರವನ್ನು ಘೋಷಿಸಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿಗಳ ಬಗ್ಗೆ ರಾಜ್ಯದಲ್ಲಿಯೇ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗ ರಾಯರಡ್ಡಿಯವರು ಉಡಾಫೆಯಾಗಿ ಮಾತನಾಡಿರುವುದು ಕೂಡ ಶೋಭೆ ತರುವಂಥದ್ದಲ್ಲ ಎಂದು ವಾಗ್ದಾಳಿ ನಡೆಸಿದರು.

ಕ್ಷೇತ್ರದ ಜನತೆಗೆ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇನೆ. ಸದಾ ಜನತೆಯ ಸಂಪರ್ಕಕ್ಕೆ ಸಿಗುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಜನರ ಕಷ್ಟಗಳಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್‌. ಪಾಟೀಲ, ವೀರಣ್ಣ ಹುಬ್ಬಳ್ಳಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಗಡಾದ, ಸಂಗಪ್ಪ ಬಂಡಿ, ಶರಣಪ್ಪ ಇಳಗೇರ, ಮಾರುತಿ ಗಾವರಾಳ ಇದ್ದರು.
 

click me!