
ಕನಕಗಿರಿ(ಮಾ.13): ಮುಂಬರುವ ಜೂನ್ ಅಥವಾ ಜುಲೈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ನವಲಿಯ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಾಸಕ ಬಸವರಾಜ ದಡೇಸೂಗುರು ಹೇಳಿದ್ದಾರೆ.
ಅವರು ಪಟ್ಟಣದ ಕನಕಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ನದಿಯಲ್ಲಿ ತಂಬಿದ ಹೂಳಿನ ಸಮಸ್ಯೆ ಪರ್ಯಾಯವಾಗಿ ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 1200 ಕೋಟಿ ರು. ಅನುದಾನ ನೀಡುವುದಾಗಿ ಬಜೆಟ್ನಲ್ಲಿ ಘೋಷಿಸಿದೆ. ಮುಂಬರುವ ಜೂನ್ ಅಥವಾ ಜುಲೈ ತಿಂಗಳಲ್ಲಿ ಸಮಾನಾಂತರ ಜಲಾಶಯ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು. ಈ ಕುರಿತು ಈಗಾಗಲೇ ಪಕ್ಷದ ಹಿರಿಯರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಮೋದಿ ಅವರನ್ನು ಆಹ್ವಾನಿಸಲು ಒಪ್ಪಿಗೆ ನೀಡಿದ್ದಾರೆ.
ಕೊಪ್ಪಳ: ಸಾಂಕ್ರಾಮಿಕ ರೋಗ, 100ಕ್ಕೂ ಅಧಿಕ ಜನ ಅಸ್ವಸ್ಥ
ಕನಕಗಿರಿ ತಾಲೂಕಿನ ಸಿರಿವಾರ ಗ್ರಾಮದ ಹೊರವಲಯದಲ್ಲಿ ತೋಟಗಾರಿಕೆ ಪಾರ್ಕ್ ನಿರ್ಮಾಣಕ್ಕೆ 123 ಕೋಟಿ ರು. ಅನುದಾನ ದೊರೆತಿದೆ. ಯಡಿಯೂರಪ್ಪ ಆಶೀರ್ವಾದದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು, ಸಾರ್ವಜನಿಕರು ಖುಷಿಯಲ್ಲಿದ್ದಾರೆ ಎಂದರು.