ರಸ್ತೆಯಲ್ಲಿ ಹೋಗುವವರಿಗೆಲ್ಲ ನಾನು ಉತ್ತರ ಕೊಡುವುದಿಲ್ಲ: ಶಾಸಕ ಯತ್ನಾಳ

By Suvarna NewsFirst Published Jan 16, 2020, 2:40 PM IST
Highlights

ಬಾಯಿ ಹರಿಬಿಟ್ಟರೇ ಬಹುದೊಡ್ಡ ಜಾತಕ ಹರಿ ಬಿಡುತ್ತೇನೆ| ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಸರಿ| ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಪರಿಣಾಮ ನೆಟ್ಟರಿಗರಲ್ಲ| ಉದ್ಯಮಿ ಸಂಗಮೇಶ ನಿರಾಣಿಗೆ ತಿರುಗೇಟು ನೀಡಿದ ಯತ್ನಾಳ|

ವಿಜಯಪುರ(ಜ.16): ರಸ್ತೆಯಲ್ಲಿ ಹೋಗುವವರಿಗೆಲ್ಲ ನಾನು ಉತ್ತರ ಕೊಡುವುದಿಲ್ಲ. ಅವರಿವರ ಆಹ್ವಾನ ಸ್ವೀಕರಿಸಲು ನಾನೇನು ರೋಡ್ ಲೀಡರ್ ಅಲ್ಲ. ಬೀದಿ ನಾಯಿಗಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ ಅಂತ ಈ  ಹಿಂದೆಯೂ ಹೇಳಿದ್ದೆ, ರಸ್ತೆಯಲ್ಲಿ ಹೋಗುವವರಿಗೆಲ್ಲ ಯತ್ನಾಳ್ ಉತ್ತರ ಕೊಡುತ್ತ ಹೋಗಬೇಕಾ? ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಯಮಿ ಸಂಗಮೇಶ ನಿರಾಣಿಗೆ ತಿರುಗೇಟು ನೀಡಿದ್ದಾರೆ. 

ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರೋಡ್ ಚಾಪ್, ಬೀದಿನಾಯಿಗಳಿಗೆ ಉತ್ತರ ಕೊಡದಂತೆ ನಮ್ಮ ಹಿರಿಯರು ಹೇಳಿದ್ದಾರೆ. ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಉತ್ತರ ನೀಡುವುದಿಲ್ಲ ಎಂದು ಸಂಗಮೇಶ ನಿರಾಣಿ ನೀಡಿದ್ದ ಮಾತುಕತೆ ಆಹ್ವಾನಕ್ಕೆ ಯತ್ನಾಳ ಆಕ್ರೋಶ ಹೊರಹಾಕಿದ್ದಾರೆ. 

'ಯತ್ನಾಳ ಗೂಂಡಾಗಿರಿ ಮಾಡಿದ್ರೆ ಅದೇ ಭಾಷೆಯಲ್ಲೇ ಉತ್ತರ ಕೊಡ್ತೇವೆ'

ಬಾಯಿ ಹರಿಬಿಟ್ಟರೇ ಬಹುದೊಡ್ಡ ಜಾತಕ ಹರಿ ಬಿಡುತ್ತೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಸರಿ. ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಪರಿಣಾಮ ನೆಟ್ಟರಿಗರಲ್ಲ ಎಂದು ಸಂಗಮೇಶ ನಿರಾಣಿ ಎಚ್ಚರಿಕೆ ನೀಡಿದ್ದಾರೆ. 

ವಚನಾನಂದ ಶ್ರೀಗಳ ಕುರಿತು ಅನುಕಂಪದ ಮಾತನಾಡಿದ ಯತ್ನಾಳ್, ಸ್ವಾಮೀಜಿಗಳ ಅಸಹಾಯಕತೆ ದುರುಪಯೋಗವಾಗುತ್ತದೆ. ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆ ನಂತರ ಎಲ್ಲವೂ ಗೊತ್ತಾಗಲಿದೆ. ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕಿದ ಮೇಲೆ ಏನೇಲ್ಲ ಆಗುತ್ತೆ ಅನ್ನೋದು ಆವಾಗ ಗೊತ್ತಾಗಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿರಾಣಿಗೆ ಸಚಿವ ಸ್ಥಾನ ಸಿಗಲ್ಲ ಎನ್ನುವ ಮುನ್ಸೂಚನೆ ನೀಡಿದ್ದಾರೆ. 

ಜೀವನದಲ್ಲಿ ನಾನು ಯಾರ ಕಾಲು ಹಿಡಿದಿಲ್ಲ, ನಮ್ಮ ತಂದೆ-ತಾಯಿ, ಮಠಾಧೀಶರು, ವಾಜಪೇಯಿ, ಅಡ್ವಾನಿ ಬಿಟ್ಟು ಬೇರೆಯವರ ಕಾಲು ಹಿಡಿದಿಲ್ಲ. ರಾಜಕಾರಣದಲ್ಲಿ ಯಾರ ಕಾಲು ಹಿಡಿದಿಲ್ಲ. ಮೋದಿ ಕಾಲು ಬೀಳಬೇಡಿ ಅಂತಾ ಮೊದಲೇ ಹೇಳಿದ್ದೆ, ಕಾಲು ಹಿಡಿದು ರಾಜಕಾರಣ ಮಾಡೋದಿಲ್ಲ, ಅಂತಾ ಹಲಕಾ ರಾಜಕಾರಣಿ ನಾನಲ್ಲ, ನಾನು ಕಾಲು ಹಿಡಿದು ರಾಜಕಾರಣ ಮಾಡಿದ್ದರೇ ಇಷ್ಟೊತ್ತಿಗೆ ಮುಖ್ಯಮಂತ್ರಿಯಾಗಿರುತ್ತಿದ್ದೆ, ಸಚಿವ ಸಂಪುಟ ಮುಗಿಯಲಿ ನಾನು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. 

ವಚನಾನಂದ ಶ್ರೀ ವಿರುದ್ಧ ಟೀಕಾಪ್ರಹಾರ ನಡೆಸಿದ ಯತ್ನಾಳ, ಸ್ವಾಮಿಗಳು ಇನ್ನು ಸುಧಾರಣೆ ಆಗಬೇಕು. ಒಂದು ಕಾರ್ಯಕ್ರಮದಲ್ಲಿ ಸಿಎಂ ಕ್ಷಮೆ ಕೇಳಿ, ನಂತರ ಮಾತು ಬದಲಿಸಿದ್ದ ವಚನಾನಂದ ಶ್ರೀಗಳು ಯೋಗದಿಂದ ಚಿತ್ತವನ್ನ ಕಂಟ್ರೋಲ್ ಮಾಡಬೇಕು ಎಂಬ ಮಾತಿದೆ. ಯೋಗ ಮಾಡುವವರ ಬಳಿ ಒಂದು ತೇಜಸ್ಸು, ಗಾಂಭೀರ್ಯತೆ ಇರುತ್ತೆ, ಮುಂಜಾನೆ ಒಂದು, ಮಧ್ಯಾಹ್ನ ಒಂದು ಮಾತನಾಡೋರಿಗೆ ಇರಲ್ಲ ಎಂದು ಹೇಳಿದ್ದಾರೆ. 

ಸರಿಯಾಗಿ ಯೋಗ ಮಾಡಿದರೇ ಮಾತು ಒಂದೇಯಾಗಿರುತ್ತದೆ. ಬೆಳಿಗ್ಗೆ, ಸಂಜೆ ಮಾತು ಬದಲಾಗಲ್ಲ. ನಾನು ಯೋಗ ಮಾಡಲ್ಲ ಆದರೂ ಆಡಿದ ಮಾತಿಗೆ ಬದ್ಧನಾಗಿರುತ್ತೇನೆ. ಬೆಳಿಗ್ಗೆ ಒಂದು ಮಾತಾಡಿದರೆ, ರಾತ್ರಿಯು ಅದನ್ನೆ ಮಾತನಾಡುತ್ತೇನೆ. ಯೋಗಾ ಮಾಡ್ತೀನಿ ಅನ್ನೋರೆ ಹೀಗೆ ಮಾಡಿದ್ರೆ ಏನು ಮಾಡೋದು ಎಂದು ಹೇಳಿದ್ದಾರೆ. 
 

click me!