‘BSY ಜೊತೆ ಗೌಡ ಒಳ ಒಪ್ಪಂದ’ : 30 ವರ್ಷದ ಬೇಡಿಕೆ ಈಡೇರಿಸಲು ಮನವಿ

By Kannadaprabha NewsFirst Published Dec 2, 2019, 12:37 PM IST
Highlights

ರಾಜ್ಯದಲ್ಲಿ 15 ಕ್ಷೇತ್ರಗಳ ಉಪ ಚುನಾವಣೆಗೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಇದೇ ವೇಳೇ ನಾಯಕರ ನಡುವಿನ ವಾಕ್ಸಮರಗಳು ಜೋರಾಗಿದೆ. 

ಕೆ.ಆರ್‌ .ಪೇಟೆ [ಡಿ.02]:  ನಾರಾಯಣಗೌಡ ನಮಗೆ ಟೋಪಿ ಹಾಕಲಿಲ್ಲ. ನಾವು ಅವನನ್ನು ಗೆಲ್ಲಿಸಿ ಟೋಪಿ ಹಾಕಿಕೊಂಡಿದ್ದೇವೆ ಎಂದು ಶ್ರವಣಬೆಳಗೋಳದ ಶಾಸಕ ಬಾಲಕೃಷ್ಣ ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಕುಪ್ಪಹಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್. ದೇವರಾಜು ಅವರ ಪರವಾಗಿ ಬಿರುಸಿನ ಮತಪ್ರಚಾರ ನಡೆಸಿ ಮಾತನಾಡಿದರು.

ಒಬ್ಬ ಜಿಲ್ಲಾ ಪಂಚಾಯಿತಿ ಸದಸ್ಯನಾಗಲು ಅರ್ಹತೆ ಹಾಗೂ ಯೋಗ್ಯತೆಯಿಲ್ಲದ ವ್ಯಕ್ತಿಯನ್ನು ಮುಂಬೈನಿಂದ ಕರೆತಂದು ಜೆಡಿಎಸ್‌ ಪಕ್ಷದ ಬಿ ಫಾರಂ ನೀಡಿ ಎರಡು ಅವಧಿಗೆ ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿಕೊಟ್ಟಿದ್ದೆ ತಪ್ಪಾಯಿತು ಎಂದರು.

ಕುಮಾರಣ್ಣನ ಸರ್ಕಾರ ಕೆಡುಗುವ ಪಾಪದ ಕೆಲಸ ಮಾಡಿದ್ದಾನೆ. ನಮ್ಮ ಜೀವನದಲ್ಲಿ ಅಂತಹ ಮನಷ್ಯನನ್ನು ನೋಡಿಲ್ಲ. ಪಕ್ಷಕ್ಕೆ ದ್ರೋಹ ಮಾಡಿ ಹಣದಾಸೆಗೆ ಬಿಜೆಪಿ ಪಕ್ಷಕ್ಕೆ ಸೇಲ್ ಆಗಿ ಯಡಿಯೂರಪ್ಪ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದ ನಾರಾಯಣಗೌಡನಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೋಲಿನ ಕಹಿಯನ್ನು ಉಣಿಸಿ ತಕ್ಕಪಾಠವನ್ನು ಕಲಿಸಬೇಕು ಎಂದು ಏಕವಚನದಲ್ಲಿ ಕಿಡಿಕಾರಿದರು. ದಿನದ 24ಗಂಟೆಗಳ ಕಾಲವೂ ಜನರ ಮಧ್ಯದಲ್ಲಿಯೇ ಇರುವ, ಸರಳ ಸಜ್ಜನ ರಾಜಕಾರಣಿ ಬಿ.ಎಲ್.ದೇವರಾಜು ಅವರನ್ನು ಗೆಲ್ಲಿಸಿ ಶಾಸಕರನ್ನಾಗಿ ಆಯ್ಕೆ ಮಾಡಿ 30ವರ್ಷಗಳ ಬಯಕೆಯನ್ನು ಈಡೇರಿಸಿ ಎಂದು ಕೈಮುಗಿದು ಮನವಿ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದ ಬಜೆಚ್‌ ಮಂಡಿಸಲು ಕುಮಾರಣ್ಣ ತಯಾರಿ ನಡೆಸುತ್ತಿದ್ದಾಗ ಅನಾರೋಗ್ಯದ ನೆಪವೊಡ್ಡಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಮಲಗಿಕೊಂಡು ನಾಟಕವಾಡುತ್ತಿದ್ದ ನಾರಾಯಣಗೌಡ ತಾಲೂಕಿನ ಅಭಿವೃದ್ಧಿಗೆ ಹಾಗೂ ಕ್ಷೇತ್ರದ ಜನತೆಗಾಗಿ ಏನನ್ನೂ ಕೇಳಲಿಲ್ಲ ಎಂದು ಟೀಕಿಸಿದರು. ದೇವೇಗೌಡರ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಿದ್ದಾನೆ. ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡು, ಸ್ಪೀಕರ್‌ ಅವರಿಂದ ಹಾಗೂ ಸುಪ್ರೀಂಕೋರ್ಟಿನಿಂದ ಅನರ್ಹತೆಯ ಶಿಕ್ಷೆಗೆ ಒಳಗಾಗಿ ಜನತಾ ನ್ಯಾಯಾಲಯದ ಮುಂದೆ ಬಂದು ನಿಂತಿದ್ದಾರೆ. ಪಕ್ಷದ್ರೋಹಿಗಳಿಗೆ ತಕ್ಕಶಿಕ್ಷೆಯಾಗಲೇಬೇಕು ಎಂದರು.

ಕ್ಷೇತ್ರದ ಪ್ರಬುದ್ಧ ಮತದಾರರು ಹಾಗೂ ಕಾರ್ಯಕರ್ತರು ಉಪಚುನಾವಣೆಯಲ್ಲಿ ಈತನ ವಿರುದ್ಧ ಮತನೀಡಿ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್. ದೇವರಾಜು ಅವರ ಪರವಾಗಿ ಮತನೀಡಿ ಭರ್ಜರಿ ಗೆಲುವು ತಂದುಕೊಟ್ಟು ತಾಲೂಕಿನಲ್ಲಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು. ಈ ವೇಳೆ ತಾಪಂ ಸದಸ್ಯ ರಾಜಾಹುಲಿ ದಿನೇಶ್‌, ಕಸಬಾ ಹೋಬಳಿ ಅಧ್ಯಕ್ಷ ವಸಂತಕುಮಾರ್‌ , ಹೆಗ್ಗಡಹಳ್ಳಿ ಅಶೋಕ್‌ ಸೇರಿದಂತೆ ಹಲವರಿದ್ದರು.

click me!