ವಿಜಯಪುರ: ಕಾಂಗ್ರೆಸ್‌ ಸದಸ್ಯರಿದ್ದ ಬಸ್‌ ಮೇಲೆ ಕಲ್ಲು ತೂರಾಟ

By Kannadaprabha NewsFirst Published Jul 1, 2020, 11:30 AM IST
Highlights

ಜಿಪಂ ಚುನಾವಣೆ: ಬಸ್‌ ಮೇಲೆ ಕಲ್ಲು ತೂರಾಟ| ಪೊಲೀಸರಿಂದ ಲಘು ಲಾಠಿ ಪ್ರಹಾರ| ಪೊಲೀಸ್‌ ಪೇದೆ, ಮುದ್ರಣ ಮಾಧ್ಯಮ ಛಾಯಾಗ್ರಾಹಕರಿಗೆ ಸಣ್ಣಪುಟ್ಟ ಗಾಯ|

ವಿಜಯಪುರ(ಜು. 01): ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ಈ ಘಟನೆಯಲ್ಲಿ ಒಬ್ಬ ಪೊಲೀಸ್‌ ಪೇದೆ ಗಾಯಗೊಂಡಿದ್ದಾನೆ. ಗುಂಪು ಸೇರಿದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕಲ್ಲು ತೂರಾಟ ವೇಳೆ ಐಆರ್‌ಬಿ ಪೊಲೀಸ್‌ ಪೇದೆ, ಮುದ್ರಣ ಮಾಧ್ಯಮ ಛಾಯಾಗ್ರಾಹಕ ಹಾಗೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಫಲಿಸದ ಬಿಜೆಪಿ ರಣತಂತ್ರ: ಕಾಂಗ್ರೆಸ್‌ಗೆ ಒಲಿದ ಅದೃಷ್ಟ

ಜಿಲ್ಲಾ ಪಂಚಾಯತಿ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಕಚೇರಿಗೆ ತೆರಳುವ ಮಾರ್ಗದ ಮುಖ್ಯ ರಸ್ತೆಯಲ್ಲಿಯೇ ಪೊಲೀಸ್‌ ಚೆಕ್‌ ಪೋಸ್ಟ್‌ ಮಾಡಲಾಗಿತ್ತು. ಜಿಲ್ಲಾ ಪಂಚಾಯತಿಗೆ ತೆರಳುವ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿತ್ತು. ಅದೇ ರೀತಿ ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯರನ್ನು ಒಳಗೊಂಡ ಬಸ್‌ ಜಿಲ್ಲಾ ಪಂಚಾಯತಿ ಕಚೇರಿಗೆ ತೆರಳು ಆಗಮಿಸಿತು. ಆಗ ಪೊಲೀಸರು ಆ ಬಸ್‌ನ್ನು ತಪಾಸಣೆ ನಡೆಸಿದರು. ಇದಾದ ಬಳಿಕ ಜಿಲ್ಲಾ ಪಂಚಾಯತಿ ಕಾಂಗ್ರೆಸ್‌ ಸದಸ್ಯರನ್ನು ಒಳಗೊಂಡ ಬಸ್‌ ಕೂಡಾ ಬಂತು. ಆಗ ಪೊಲೀಸರು ಆ ಬಸ್‌ ತಪಾಸಣೆ ನಡೆಸದೇ ಹಾಗೇ ತೆರಳಲು ಅನುಮತಿ ನೀಡಿದರು. ಕಾಂಗ್ರೆಸ್‌ ಸದಸ್ಯರ ವಾಹನದಲ್ಲಿ ಜಿ.ಪಂ. ಸದಸ್ಯರು ಹೊರತುಪಡಿಸಿ ಉಳಿದ ಮುಖಂಡರು ಇದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಒಳಗೆ ಬಿಡಲಿಲ್ಲ, ಆದರೆ ಕಾಂಗ್ರೆಸ್‌ ಸದಸ್ಯರ ವಾಹನದಲ್ಲಿ ಸಾಕಷ್ಟು ಜನ ಮುಖಂಡರಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಗ ಕೆಲ ಕಿಡಿಗೇಡಿಗಳು ಕಾಂಗ್ರೆಸ್‌ ಸದಸ್ಯರನ್ನು ಕರೆದುಕೊಂಡು ಹೋಗುತ್ತಿದ್‌ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಯಿತು. ಈ ಸಂದರ್ಭದಲ್ಲಿ ಕೆಲ ಹೊತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿರುವ ಬಿಜೆಪಿ ಜಿಪಂ ಸದಸ್ಯರ ಕ್ರಮವನ್ನು ಖಂಡಿಸಿ ಜಿಲ್ಲಾ ಪಂಚಾಯತಿ ಪ್ರವೇಶ ದ್ವಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸದಸ್ಯರ ಭಾವಚಿತ್ರ ಪ್ರದರ್ಶಿಸಿ ‘ಪಕ್ಷ ದ್ರೋಹಿಗಳು...ಪಕ್ಷ ದ್ರೋಹಿಗಳು’ ಎಂಬ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡರಾದ ವಿಜಯಕುಮಾರ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಮುಂತಾದವರು ಪ್ರತಿಭಟನೆಗೆ ಮುಂದಾದರು.
 

click me!