'ರಮೇಶ ತಪ್ಪಿತಸ್ಥರಲ್ಲ ಎಂದು ಸಾಬೀತಾಗ್ಬಹುದು, ಆದ್ರೆ ಹಾಳುಮಾಡಿದ ಗೌರವ ತಂದುಕೊಡಲು ಸಾಧ್ಯವೆ?'

By Suvarna NewsFirst Published Mar 6, 2021, 2:03 PM IST
Highlights

ರಾಜಕೀಯ ಜೀವನದ ಹೊರತಾಗಿ ನಮಗೂ ವೈಯಕ್ತಿಕ ಜೀವನವಿದ್ದು, ನಮಗೂ ಕುಟುಂಬ, ಮಕ್ಕಳಿದ್ದಾರೆ| ಯಾವ ವ್ಯಕ್ತಿಯ ವೈಯಕ್ತಿಕ ತೇಜೋವಧೆ, ಗೌರವ ಹಾಳುಮಾಡುವ ಕೆಲಸ ಒಳ್ಳೆಯ ಬೆಳವಣಿಗೆಯಲ್ಲ| ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ: ಹೆಬ್ಬಾರ್‌| 

ಕಾರವಾರ(ಮಾ.06): ಬೆಂಗಳೂರಿನಲ್ಲಿ ಸಿಡಿ ಮಾಡೋರು, ಬ್ಲಾಕ್ ಮೇಲ್ ಮಾಡೋರ ದಂಧೆ ಹೆಚ್ಚಾಗಿದೆ. ಅಂತವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಗುಡುಗಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಗಳಿದ್ದರೂ ವೈಯಕ್ತಿಕ ವಿಚಾರದಲ್ಲಿ ತೇಜೋವಧೆ ಮಾಡುವುದು ಸರಿಯಲ್ಲ. ಸಿಡಿ ಮಾಡಿ ಬ್ಲಾಕ್ ಮೇಲ್ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ನಾವು ಸೋಲನ್ನಾದರೂ ಸಹಿಸಿಕೊಳ್ಳುತ್ತೇವೆ ಆದರೆ, ವೈಯಕ್ತಿಕ ತೇಜೋವಧೆ ಎಂದಿಗೂ ಸಹಿಸಲಾಗದು ಎಂದು ಹೇಳಿದ್ದಾರೆ. 

'ನಾವು ರಾಜೀನಾಮೆ ಕೊಟ್ಟು ಬಂದವರು, ನಮ್ಮ ಮೇಲೆ ಬಹಳಷ್ಟು ಜನ ಹಗೆ ಸಾಧಿಸ್ತಿದ್ದಾರೆ'

ಬಿಜೆಪಿ ಸರ್ಕಾರ ರಚನೆಗೆ ಬಲ ನೀಡಿದ ಸಚಿವರನ್ನು ಗುರಿಯನ್ನಾಗಿಸಿ ಅವರನ್ನೇ ಬೆದರಿಸುವ ಪ್ರಯತ್ನ ನಡೆದಿದೆ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಯ್ತು, ರಾಜಕೀಯ ಜೀವನದ ಹೊರತಾಗಿ ನಮಗೂ ವೈಯಕ್ತಿಕ ಜೀವನವಿದ್ದು, ನಮಗೂ ಕುಟುಂಬ, ಮಕ್ಕಳಿದ್ದಾರೆ. ಯಾವ ವ್ಯಕ್ತಿಯ ವೈಯಕ್ತಿಕ ತೇಜೋವಧೆ, ಗೌರವ ಹಾಳುಮಾಡುವ ಕೆಲಸ ಒಳ್ಳೆಯ ಬೆಳವಣಿಗೆಯಲ್ಲ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ ಎಂದು ತಿಳಿಸಿದ್ದಾರೆ. 

ರಮೇಶ ಜಾರಕಿಹೋಳಿ ಇಂದಲ್ಲ ನಾಳೆ ತಪ್ಪಿತಸ್ಥರಲ್ಲ ಎಂದು ಸಾಬೀತಾಗಬಹುದು. ಆದರೆ, ಹಾಳುಮಾಡಿದ ಅವರ ಗೌರವ ತಂದುಕೊಡಲು ಸಾಧ್ಯವೆ?, ಇದೇ ಸ್ಥಿತಿ ಉಳಿದ ನಾಯಕರಿಗೂ ಎದುರಾಗಬಹುದು. ಹೀಗಾಗಿ, ಮುನ್ನೆಚ್ಚರಿಕೆಯ ಸಲುವಾಗಿ ನ್ಯಾಯಾಲಯಕ್ಕೆ ತೆರಳಿದ್ದೇವೆ ಎಂದಿದ್ದಾರೆ. 
 

click me!