ಅನ್ನದಾತ ಸುಖಿಯಾದರೆ ದೇಶದ ಪ್ರಗತಿ: ಸಚಿವ ಹೆಬ್ಬಾರ

By Kannadaprabha NewsFirst Published Aug 18, 2021, 11:06 AM IST
Highlights

*  ಮತ್ತೊಮ್ಮೆ ಸಚಿವನಾಗಿ ಬರಲು ಕ್ಷೇತ್ರದ ಜನತೆಯ ಆಶೀರ್ವಾದವೇ ಕಾರಣ
*  ಕಟ್ಟ ಕಡೆಯ ವರ್ಗದ ಜನರಿಗೂ ಸೂರು ಕಲ್ಪಿಸಬೇಕೆಂಬ ಉದ್ದೇಶ
*  ಕೃಷಿಕನಿಗೆ ಒಳಿತಾದರೆ ಕಾರ್ಮಿಕನ ಏಳ್ಗೆ
 

ಮುಂಡಗೋಡ(ಆ.18): ಕೃಷಿಕ ಹಾಗೂ ಕಾರ್ಮಿಕರಿಬ್ಬರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅನ್ನದಾತ ಸುಖಿಯಾಗದೆ ಹೋದರೆ ದೇಶದ ಪ್ರಗತಿ ಅಸಾಧ್ಯ. ಕೃಷಿಕನಿಗೆ ಒಳಿತಾದರೆ ಕಾರ್ಮಿಕನ ಏಳ್ಗೆಯಾಗುತ್ತದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೇಳಿದ್ದಾರೆ.

ಮಂಗಳವಾರ ಪಟ್ಟಣದ ನಗರಸಭಾ ಭವನದಲ್ಲಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮತ್ತೊಮ್ಮೆ ಸಚಿವನಾಗಿ ಬರಲು ಕ್ಷೇತ್ರದ ಜನತೆಯ ಆಶೀರ್ವಾದವೇ ಕಾರಣ. ಸಿಕ್ಕ ಅವಕಾಶದಿಂದ ಜನರ ಋುಣ ತೀರಿಸುವುದಾಗಿ ಹೇಳಿದ ಅವರು, ಆರ್ಥಿಕ ಬೆಳೆ ಬೆಳೆಯಲು ಪೂರಕ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿಯ ಜನ ಬೇರೆಡೆ ಕೆಲಸಕ್ಕೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸುವ ದೃಷ್ಟಿಯಿಂದ ಸುಮಾರು 300 ಕೋಟಿ ವೆಚ್ಚದಲ್ಲಿ ತಾಲೂಕಿನ ಜಲಾಶಯ ಹಾಗೂ ಕೆರೆಗಳನ್ನು ತುಂಬುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.

ಕಾರವಾರಕ್ಕೆ ಬಂತು ವಿಸ್ಟಾಡೋಮ್‌ ರೈಲು..!

900 ಮನೆ ನಿರ್ಮಾಣ:

ಕಟ್ಟ ಕಡೆಯ ವರ್ಗದ ಜನರಿಗೂ ಸೂರು ಕಲ್ಪಿಸಬೇಕೆಂಬ ಉದ್ದೇಶದಿಂದ ಒಂದು ಮನೆಗೆ ಸುಮಾರು 7.20 ಲಕ್ಷ ವೆಚ್ಚದಂತೆ ಪಟ್ಟಣದಲ್ಲಿ 900 ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಅಲ್ಲದೇ ವಸತಿ ಕಾಲನಿ ಅಂಚಿನಲ್ಲಿಯೇ ಕಾರ್ಮಿಕ ಇಲಾಖೆಯಿಂದ ಸುಮಾರು 7.5 ಕೋಟಿ ವೆಚ್ಚದಲ್ಲಿ 2 ಎಕರೆ ಭೂಮಿಯಲ್ಲಿ ಕಾರ್ಮಿಕರ ಕಲ್ಯಾಣಮಂಟಪ ನಿರ್ಮಿಸಲಾಗುತ್ತಿದೆ 

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ, ಬಿಜೆಪಿ ಧುರೀಣ ಸಂತೋಷ ರಾಯ್ಕರ, ಪಪಂ ಅಧ್ಯಕ್ಷೆ ರೇಣುಕಾ ಹಾವೇರಿ, ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಲ್‌.ಟಿ. ಪಾಟೀಲ, ಮಾರ್ಕೆಟಿಂಗ್‌ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ, ಪಪಂ ಉಪಾಧ್ಯಕ್ಷ ಮಂಜುನಾಥ ಹರ್ಮಲಕರ, ರೇಖಾ ಅಂಡಗಿ, ಅಶೋಕ ಚಲವಾದಿ, ಶ್ರೀಕಾಂತ ಸಾನು, ಮುಂತಾದವರು ಉಪಸ್ಥಿತರಿದ್ದರು.
 

click me!