Chitradurga: ರಾಯರ ಕೃಪೆಯಿಂದ ಪುನೀತವಾದ ಪುಣ್ಯಭೂಮಿ: ಮಂತ್ರಾಲಯ ಶ್ರೀ ಅಭಿಮತ

By Govindaraj SFirst Published Dec 1, 2022, 10:54 PM IST
Highlights

ಕಲಿಯುಗ ಕಾಮದೇನು ಕಲ್ಪವೃಕ್ಷ ಸದೃಶ್ಯರಾದ ಎಲ್ಲರ ಆರಾಧ್ಯದೈವ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶ ಮಾಡುವುದಕ್ಕೆ ಮುನ್ನ ತಮ್ಮ ಪರಮ ಪವಿತ್ರವಾದ ಪಾದಧೂಳಿನಿಂದ ಪುನೀತವನ್ನಾಗಿ ಮಾಡಿದ ಸ್ಥಳ ಚಿತ್ರದುರ್ಗ. 

ಚಿತ್ರದುರ್ಗ (ಡಿ.01): ಕಲಿಯುಗ ಕಾಮದೇನು ಕಲ್ಪವೃಕ್ಷ ಸದೃಶ್ಯರಾದ ಎಲ್ಲರ ಆರಾಧ್ಯದೈವ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶ ಮಾಡುವುದಕ್ಕೆ ಮುನ್ನ ತಮ್ಮ ಪರಮ ಪವಿತ್ರವಾದ ಪಾದಧೂಳಿನಿಂದ ಪುನೀತವನ್ನಾಗಿ ಮಾಡಿದ ಸ್ಥಳ ಚಿತ್ರದುರ್ಗ. ಅಷ್ಟೇ ಅಲ್ಲದೆ ಈ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಬೃಂದಾವನಗಳನ್ನು ನಿರ್ಮಿಸಿ ಜಿಲ್ಲೆಯನ್ನು ಧಾರ್ಮಿಕ ನೆಲೆಯನ್ನಾಗಿಸಿದವರು ಶ್ರೀ ರಾಯರು ಎಂದು ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರಿಪಾದಂಗಳವರು ಹೇಳಿದ್ದಾರೆ.

ಚಿತ್ರದುರ್ಗದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಸಂಜೆ ಶ್ರೀ ಗುರುರಾಜ ಸೇವಾ ಸಂಘದ ಸುವರ್ಣ ಮಹೋತ್ಸವದ ಎರಡು ದಿನಗಳ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಈ ಸ್ಥಳ ರಾಯರ ನಂತರ ಪೀಠವನ್ನಲಂಕರಿಸಿದ ಎಲ್ಲಾ ಸ್ವಾಮೀಜಿಯವರ ಪೂರ್ವಾಶ್ರಮದ ನಂಟನ್ನು ಬೆಸೆದಿದೆ. ನಮಗೂ ಸಹ ನಮ್ಮ ಪೂರ್ವಾಶ್ರಮದ ಮುತ್ತಜ್ಜಿಯ ಸ್ಥಳ ಚಿತ್ರದುರ್ಗವಾಗಿದೆ. ಪೀಠವನ್ನು ಅಲಂಕರಿಸುವುದಕ್ಕೆ ಮುನ್ನ ನಾವು ಇಲ್ಲಿ ಹಲವು ದಿನಗಳು ರಾಯರ ಆರಾಧನೆ, ಪೂಜೆ, ಪ್ರವಚನಗಳನ್ನು ಕೈಗೊಂಡಿದ್ದೆವು. ಇತ್ತೀಚೆಗೆ ಗದಗ ಜಿಲ್ಲೆಯ ಕಿರಿಟ ಗಿರಿಯಲ್ಲಿ ಅಪಮೃತ್ಯುಕ್ಕೀಡಾಗಿದ್ದ ಮಾವಿನ ರಸದಲ್ಲಿ ಬಿದ್ದ ಮಗುವಿನ ರಕ್ಷಿಸಿದ ಕ್ಷೇತ್ರಕ್ಕೆ ಹೋಗಿ ಬಂದೆವು ಈಗ ಮೋಕ್ಷವನ್ನು ಕೊಟ್ಟಕ್ಷೇತ್ರಕ್ಕೆ ಬಂದಿದ್ದೇವೆ ಎಂದು ನೆನಪು ಮಾಡಿಕೊಂಡರು.

Chitradurga: ಕಬ್ಬಳ ಮಕ್ಕಳು, ಗ್ರಾಮಸ್ಥರೊಂದಿಗೆ ಡಿಸಿ ಸಂವಾದ

ಗುರುರಾಜ ಸೇವಾ ಸಂಘದಿಂದ ಶ್ರೀಗಳಿಗೆ ಕಾಣಿಕೆಯಾಗಿ ಒಪ್ಪಿಸಿದ ಐವತ್ತು ಸಾವಿರ ರೂಗಳನ್ನು ಸಂಘಕ್ಕೆ ಆಶೀರ್ವದಿಸಿ ನೀಡಿ ಇದನ್ನು ಸಂಘದ ವಿವಿದ ಚಟುವಟಿಕೆಗೆ ವಿನಿಯೋಗಿಸಲು ತಿಳಿಸಿದರು. ರಾಯರ ಕಾರುಣ್ಯ ಮಾತೃಸ್ವರೂಪವಾಗಿದೆ. ಏನೇ ಕಷ್ಟಗಳಿದ್ದರೂ ಅವರ ಮೊರೆಹೊಕ್ಕರೆ ಎಲ್ಲಾ ದೋಷಗಳನ್ನು ಕಳೆದು ಇಷ್ಟಾರ್ಥಗಳನ್ನು ಕೊಡುವವರಾಗಿದ್ದಾರೆ. ಎಲ್ಲರಿಗೂ ಹರಸುವವರಾಗಿದ್ದಾರೆ ಎಂದು ಮಂತ್ರಾಲಯ ಡಾ.ವಾದಿರಾಜಾರ್ಯ ಪ್ರವಚಿಸಿದರು.

ಚಿತ್ರದುರ್ಗ ಒಂದು ಪವಿತ್ರ ಸ್ಥಳ ಇಲ್ಲಿ ರಾಯರು ನಡೆದಾಡಿದ ಪುಣ್ಯದ ಮಣ್ಣು, ವೆಂಕಣ್ಣನಿಗೆ ಮೋಕ್ಷಕೊಟ್ಟಸಾಕ್ಷಿ ಇಲ್ಲಿದೆ, ಹಿಂದೂ ಧರ್ಮದ ಮೇಲೆ ಅತಿಕ್ರಮಣ ನಡೆದರೆ ಮಹಿಳೆಯೂ ಧೈರ್ಯವಂತಳಾಗಿ ಸೆಟೆದು ನಿಲ್ಲುತ್ತಾಳೆ ಎಂಬುದಕ್ಕೆ ಒನಕೆ ಓಬವ್ವನ ನಾಡು ಸಾಕ್ಷಿ. ಇಲ್ಲಿ ಗುರುರಾಜ ಸೇವಾ ಸಂಘದಿಂದ ಜ್ಞಾನ ಕಾರ್ಯ 50 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ರಾಯರದ್ದೇ ಶಕ್ತಿಯಾಗಿದೆ ಎಂದು ಬೆ.ನಾ.ವಿಜಯೇಂದ್ರಾರ್ಯ ಪ್ರವಚನ ಮಾಡಿದರು.

ಈ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಪಿ.ಎಸ್‌.ಮಂಜುನಾಥ್‌ ವಿಪ್ರಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ರಾಯರು ನಡೆದಾಡಿದ ಈ ನೆಲದಲ್ಲಿ ಗುರುರಾಜ ಸೇವಾ ಸಂಘ ಸುವರ್ಣಮಹೋತ್ಸವ ಆಚರಿಸುತ್ತಿದೆ. ಅದರಂತೆ ಬ್ರಾಹ್ಮಣ ಸಂಘವೂ ಶತಮಾನೋತ್ಸವ ಆಚರಿಸುತ್ತಿದೆ. ಈ ಸಂಧರ್ಭದಲ್ಲಿ ನವೀಕೃತಗೊಂಡ ಗಾಯಿತ್ರಿ ಕಲ್ಯಾಣ ಮಂಟಪಕ್ಕೆ ಶ್ರೀಗಳ ಪಾದ ಸ್ಪರ್ಶವಾಗಿದೆ ಇದು ಎಲ್ಲರ ಪುಣ್ಯವಿಶೇಷ ಇಲ್ಲಿ ಜ್ಞಾನ ದಾಸೋಹಕ್ಕೆ ಕೊರತೆ ಇಲ್ಲ ಆದರೆ ಮದ್ಯಕರ್ನಾಟಕದಲ್ಲಿ ಇರುವುದರಿಂದ ಇಲ್ಲಿಯ ಮಠಕ್ಕೆ ಅಲ್ಪ ಆರ್ಥಿಕ ಸಹಾಯ ಒದಗಿದರೆ ಮಠದ ಕಟ್ಟಡ ಇನ್ನೂ ಸುಸಜ್ಜಿತವಾಗುತ್ತದೆ. ತತ್ವಜ್ಞಾನ ಪ್ರಚಾರಕ್ಕಾಗಿ ಕ್ಕೆ ಇನ್ನೂ ಹೆಚ್ಚು ಒತ್ತುನೀಡಬಹುದು ಎಂದರು.

Chitradurga: ಮೀಸಲಾತಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಸಾಮೂಹಿಕ ಬಾಡೂಟ ಆಯೋಜನೆ

ಸಮಾರಂಭದಲ್ಲಿ ಪ್ರಖ್ಯಾತ ವೈದ್ಯ ಡಾ.ಕೆ.ಎಸ್‌.ಮುಕುಂದರಾವ್‌, ಉತ್ತರಾಧಿಮಠದ ಮುಖ್ಯಸ್ಥ ಪ್ರಭಂಜನಾಚಾರ್ಯ, ವಕೀಲರೂ ಬ್ರಾಹ್ಮಣ ಸಂಘದ ಅಧ್ಯಕ್ಷರೂ ಆದ ಪಿ.ಎಸ್‌.ಮಂಜುನಾಥ್‌, ಹೋಟೆಲ್‌ ಉದ್ಯಮಿ ಜಿ.ಎ.ದೀಪಾನಂದ, ಅಂಜನಾ ನೃತ್ಯ ಕೇಂದ್ರದ ಡಾ.ನಂದಿನಿ ಶಿವಪ್ರಕಾಶ್‌ ರವರಿಗೆ ವಿಪ್ರಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪಾರ್ಥಸಾರತಿ, ಸಿ.ಗೋವಿಂದ ಮೂರ್ತಿ, ಎಂ.ಭೀಮರಾವ್‌, ಕೆ.ವೆಂಕಟೇಶ್‌ ಭಟ್‌, ಎಸ್‌.ವೇದವ್ಯಾಸಾಚಾರ್ಯ, ಎಸ್‌.ಎನ್‌.ಪ್ರಾಣೇಶ್‌, ಬ್ರಾಹ್ಮಣ ಸಂಘ, ಶ್ರೀವೈಷ್ಣವ ಸಭಾ, ಮಾದ್ವ ಪರಿಷತ್‌, ಗುರುರಾಜ ಸೇವಾ ಸಮಿತಿ , ವಿಪ್ರ ಮಹಿಳಾಮಂಡಳಿ, ಸದಸ್ಯರು ಉಪಸ್ಥಿತರಿದ್ದರು.

click me!