ತೊಗರಿ ಬೆಳೆಗೆ ನೆಟೆ ರೋಗ, ಟೈಕೋಡರ್ಮಾ ಸಿಂಪಡಿಸಲು ಸಲಹೆ

By Gowthami KFirst Published Dec 1, 2022, 9:48 PM IST
Highlights

ಈ ವರ್ಷ ಸುರಿದ ಭಾರಿ ಮಳೆಯಿಂದ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ನೆಟೆ ರೋಗ ಕಂಡುಬಂದಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಲೀ. ನೀರಿಗೆ 5 ಗ್ರಾಂ ಟ್ರೈಕೋಡರ್ಮಾ ಪುಡಿ ಬೆರಿಸಿ ಸಿಂಪರಣೆಯನ್ನು ಕಾಂಡದ ಬುಡಕ್ಕೆ ಹಸಿಯಾಗುವವರೆಗೆ ಸುರಿಯಬೇಕೆಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ರೈತರಿಗೆ ಸಲಹೆ ನೀಡಿದ್ದಾರೆ.

ಕಲಬುರಗಿ (ಡಿ.1): ಈ ವರ್ಷ ಸುರಿದ ಭಾರಿ ಮಳೆಯಿಂದ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ನೆಟೆ ರೋಗ ಕಂಡುಬಂದಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಲೀ. ನೀರಿಗೆ 5 ಗ್ರಾಂ ಟ್ರೈಕೋಡರ್ಮಾ ಪುಡಿ ಬೆರಿಸಿ ಸಿಂಪರಣೆಯನ್ನು ಕಾಂಡದ ಬುಡಕ್ಕೆ ಹಸಿಯಾಗುವವರೆಗೆ ಸುರಿಯಬೇಕೆಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ರೈತರಿಗೆ ಸಲಹೆ ನೀಡಿದ್ದಾರೆ. ಕೃಷಿ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳ ತಂಡದೊಂದಿಗೆ ಜಿಲ್ಲೆಯ ಕೆರೆ ಭೋಸಗಾ, ಭೀಮಳ್ಳಿ, ಲಾಡ ಚಿಂಚೋಳಿ, ಆಳಂದ, ಸಾತನೂರ ಗ್ರಾಮಗಳಲ್ಲಿನ ತೊಗರೆ ಬೆಳೆ‌ಗೆ ಪ್ರದೇಶಕ್ಕೆ ವೈಜ್ಞಾನಿಕ ಸಮೀಕ್ಷೆ ಮಾಡಿರುವ ಅವರು, ಈ ರೋಗವನ್ನು ಸಿಡಿ ರೋಗ ಅಥವಾ ಸೊರಗು ರೋಗ ಎಂತಲು ಕರೆಯಲಾಗುತ್ತಿದೆ ಎಂದಿದ್ದಾರೆ. 

ಟೈಕೋಡರ್ಮಾ‌ ಅಲ್ಲದೆ ಪ್ರತಿ ಲೀ. ನೀರಿಗೆ 5 ಗ್ರಾಂ. ಸಾಫ್ ಬೆರಿಸಿ ಸಿಂಪರಣೆಯನ್ನು ಕಾಂಡದ ಬುಡಕ್ಕೆ ಹಸಿಯಾಗುವವರೆಗೆ ಸುರಿಯುವುದು. ಸಾಧ್ಯವಾದರೆ ನೀರಾವರಿ ಸೌಲಭ್ಯವಿರುವ ಕಡೆ ಬೆಳೆಗಳಿಗೆ ನೀರು ಹರಿಸುವುದು, ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ಜೋಳ ಅಥವಾ ಮುಸುಕಿನ ಜೋಳ ಮತ್ತು ತೊಗರಿ ಮಿಶ್ರ/ ಅಂತರ ಬೆಳೆಯಲ್ಲಿ ಸೊರಗು ರೋಗದ ಬಾಧೆ ಕಡಿಮೆ ಇರುತ್ತದೆ ಎಂದಿದ್ದಾರೆ.

ರೋಗಕ್ಕೆ ತುತ್ತಾದ ತಾಕುಗಳಲ್ಲಿ ಗಿಡದ ಎಲೆಗಳು ಹಳದಿಯಾಗಿ, ಬಾಡಿ ಜೋತುಬಿದ್ದು, ಒಣಗಿ ಕೆಳಗೆ ಉದರದೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ಗಿಡದ ಬೇರುಗಳು ಪೂರ್ತಿಯಾಗಿ ಬಾಡಿರುತ್ತವೆ. ಕಾಂಡವನ್ನು ಸೀಳಿ ನೋಡಿದಾಗ ನೀರು ಸಾಗಾಣಿಕೆಯ ಅಂಗಾಂಶವು ಕಪ್ಪಾಗಿರುವುದು ಕಂಡು ಬರುತ್ತದೆ. ತಂಪಾದ ವಾತಾವರಣದಲ್ಲಿ ಒಣಗಿದ ಗಿಡದ ಕಾಂಡದ ಮೇಲೆ ಗುಲಾಬಿ ಬಣ್ಣದ ಶೀಲಿಂದ್ರದ ಬೆಳವಣಿಗೆ ಕಾಣಿಸುವುದು. ಅರ್ಧ ಸಿಡಿಯಾದ ಗಿಡದ ಕಾಂಡದ ಮೇಲೆ ಕಂದು ಅಥವಾ ಕಡು ನೇರಳೆ ಬಣ್ಣದ ಪಟ್ಟಿಗಳು ಭೂಮಿಯ ಮಟ್ಟನಿಂದ ಮೇಲಕ್ಕೆ ಹಬ್ಬಿರುವುದು ಕಂಡುಬರುತ್ತಿವೆ ಎಂದಿದ್ದಾರೆ.

ಚರ್ಮಗಂಟು ರೋಗ ತಡೆಯಲು ತ್ವರಿತ ಕ್ರಮ ಕೈಗೊಳ್ಳಿ
ಹುಕ್ಕೇರಿ: ಜಾನುವಾರುಗಳಿಗೆ ಹರಡುತ್ತಿರುವ ಚರ್ಮಗಂಟು ರೋಗ ತಡೆಯುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಸೂಚಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚರ್ಮಗಂಟು ರೋಗದಿಂದ ರೈತರ ಉಪಕಸುಬು, ಆರ್ಥಿಕತೆಯ ಆಧಾರಸ್ಥಂಭ ಆಗಿರುವ ಹೈನುಗಾರಿಕೆಗೆ ಹಿನ್ನಡೆಯಾಗಲಿದೆ. ಕೃಷಿ ಮತ್ತು ಕುಟುಂಬದ ನೊಗ ಹೊರುವ ಜಾನುವಾರುಗಳಿಗೆ ಬರುತ್ತಿರುವ ಈ ಕಾಯಿಲೆಯನ್ನು ನಿವಾರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ವಿವಿಧ ಗ್ರಾಮಗಳಲ್ಲಿ ಚರ್ಮಗಂಟು ರೋಗ ವ್ಯಾಪಿಸಿದ್ದು, ಪಶು ವೈದ್ಯರ ಮತ್ತು ಸಿಬ್ಬಂದಿ ಕೊರತೆಯ ನೆಪ ಹೇಳದೇ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ತಾಕೀತು ಮಾಡಿದರು.

ದುರಸ್ತಿ ಹಂತದಲ್ಲಿರುವ ಶಾಲೆ ಮತ್ತು ಅಂಗನವಾಡಿಗಳನ್ನು ಕೂಡಲೇ ರಿಪೇರಿ ಮಾಡಬೇಕು. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಿವೇಕ ಯೋಜನೆಯಡಿ ಮಂಜೂರಾದ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು. ಎಸ್ಸಿ, ಎಸ್ಟಿರೈತರಿಗೆ ಸಾವಯವ ಬೆಲ್ಲ ತಯಾರಿಕೆಗೆ ಶೇ. 50 ರಷ್ಟು ಸಹಾಯಧನವಿದ್ದು, ಅರ್ಹ ರೈತರನ್ನು ಗುರುತಿಸಬೇಕು ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಉತ್ತರಕನ್ನಡದಲ್ಲಿ ಕೃಷಿಕರಿಗೆ ಎದುರಾದ ಕೊಳೆರೋಗ ಸಮಸ್ಯೆ

ಉದ್ಯೋಗ ಖಾತರಿಯಡಿ ಕಂಪೌಂಡ್‌, ಪೇವ​ರ್‍ಸ್ ಅಳವಡಿಕೆ, ಶೌಚಾಲಯ, ಭೋಜನಾಲಯ, ಆಟದ ಮೈದಾನ ಸೇರಿದಂತೆ ಶಾಲಾ ಸಂಬಂಧಿತ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಬಳಿಕ ಚರಂಡಿ, ಸಿಸಿ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಜೆಜೆಎಂ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವೈಯಕ್ತಿಕ ನಳ ಸಂಪರ್ಕ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಸತೀಶ ಜಾರಕಿಹೊಳಿ ಸೂಚಿಸಿದರು.

ರಾಜ್ಯದ ಈರುಳ್ಳಿಗೆ ಬೆಲೆ ಇಲ್ಲ, ಪೂನಾ ಈರುಳ್ಳಿಗೆ ಹೆಚ್ಚು ಬೆಲೆ; ರೈತ ಕಂಗಾಲು

ತಹಸಿಲ್ದಾರ ಡಾ.ಡಿ.ಎಚ್‌.ಹೂಗಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಮುಖಂಡ ಕಿರಣ ರಜಪೂತ, ಯಲ್ಲಪ್ಪಾ ಹಂಚಿನಮನಿ, ಮಂಜುನಾಥ ಪಾಟೀಲ, ದಯಾನಂದ ಪಾಟೀಲ, ಮಹೇಶ ಗುಮಚಿ ಮತ್ತಿತರರು ಉಪಸ್ಥಿತರಿದ್ದರು.

click me!