ಮಂಗಳೂರು ದಸರಾಕ್ಕೆ ವೈಭವದ ಚಾಲನೆ

By Kannadaprabha NewsFirst Published Sep 30, 2019, 8:46 AM IST
Highlights

ಸಂಭ್ರಮದ ಮಂಗಳೂರು ದಸರಾ ಆಚರಣೆಗೆ ಭಾನುವಾರ ಚಾಲನೆ ಸಿಕ್ಕಿದೆ. ದೇಶ- ವಿದೇಶಗಳ ಲಕ್ಷಾಂತರ ಮಂದಿ ಪ್ರವಾಸಿಗರನ್ನು ಆಕರ್ಷಿಸುವ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಶ್ರೀ ಮಹಾಗಣಪತಿ, ನವದುರ್ಗೆಯರ ಸಹಿತ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಭಾನುವಾರ ವೈಭವದಿಂದ ನಡೆಯಿತು. ಬೆಳಗ್ಗಿನಿಂದ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸಿದ್ದು, ಸಹಸ್ರಾರು ಮಂದಿ ಈ ಸಂಭ್ರಮದ ಗಳಿಗೆಯಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದರು.

ಮಂಗಳೂರು(ಸೆ.30): ದೇಶ- ವಿದೇಶಗಳ ಲಕ್ಷಾಂತರ ಮಂದಿ ಪ್ರವಾಸಿಗರನ್ನು ಆಕರ್ಷಿಸುವ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಶ್ರೀ ಮಹಾಗಣಪತಿ, ನವದುರ್ಗೆಯರ ಸಹಿತ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಭಾನುವಾರ ವೈಭವದಿಂದ ನಡೆಯಿತು. ಬೆಳಗ್ಗಿನಿಂದ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸಿದ್ದು, ಸಹಸ್ರಾರು ಮಂದಿ ಈ ಸಂಭ್ರಮದ ಗಳಿಗೆಯಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದರು.

ಚಂಡೆ, ಕೊಂಬು, ಹುಲಿವೇಷ, ಬ್ಯಾಂಡ್‌ ಮೆರುಗಿನಲ್ಲಿ ಸರ್ವಾಲಂಕೃತ ಶಾರದಾ ಮಾತೆಯ ವಿಗ್ರಹವನ್ನು ಬೆಳಗ್ಗೆ 10.45ರ ವೇಳೆಗೆ ದೇವಾಲಯಕ್ಕೆ ಪ್ರದಕ್ಷಿಣೆ ನಡೆಸಿ ಮಂಟಪಕ್ಕೆ ತರಲಾಯಿತು. ಜತೆಗೆ ಶ್ರೀ ಮಹಾಗಣಪತಿ ಪ್ರತಿಷ್ಠೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿ, ಶ್ರೀಶಾರದಾ ಮಾತೆಯ ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಲಾಯಿತು.

ಸಂಭ್ರಮದ ದಸರಾಗೆ ಸಾಹಿತಿ ಭೈರಪ್ಪ ಚಾಲನೆ

11.20ರ ಸುಮುಹೂರ್ತದಲ್ಲಿ ಶಾರದಾ ಮಾತೆಯ ಪ್ರತಿಷ್ಠಾಪನೆ ನೆರವೇರಿತು. 12.30ಕ್ಕೆ ಪುಷ್ಪಾಲಂಕಾರ ನಡೆದು ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಗೋಳ ಮಾದರಿ ಮಂಟಪ:

ಈ ಬಾರಿ ದರ್ಬಾರ್‌ ಮಂಟಪದ ವಿನ್ಯಾಸ ಬದಲಾವಣೆ ಮಾಡಿ ಗೋಳ ಆಕಾರದಲ್ಲಿ ಮಾಡಿದ್ದು ಆಕರ್ಷಣೀಯವಾಗಿತ್ತು. ದೇವಿಯರ ಮಂಟಪಗಳು ಸರ್ವಾಲಂಕಾರದೊಂದಿಗೆ ವಿದ್ಯುತ್‌ ದೀಪಾಲಂಕಾರಗಳೂ ಸೇರಿ ಹೊಸ ಲೋಕವೊಂದು ಕುದ್ರೋಳಿ ದೇವಾಲಯದಲ್ಲಿ ಸೃಷ್ಟಿಯಾಗಿದೆ. ನವದುರ್ಗೆಯರ ಪ್ರತಿಷ್ಠಾಪನೆ ವೇಳೆ ದರ್ಬಾರು ಮಂಟಪ ಜನಸಾಗರದಿಂದ ತುಂಬಿತ್ತು. ದೇವಿಯರ ದರ್ಶನ ಪಡೆದ ಭಕ್ತರು ಭಕ್ತಿ ಭಾವದಿಂದ ಪುನೀತರಾದರು. ಸುಮಾರು 8 ಸಾವಿರಕ್ಕೂ ಹೆಚ್ಚು ಮಂದಿ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗಿದ್ದರು.

ಪೊಲೀಸ್‌ ಸಹಕಾರ: ಈ ಸಂದರ್ಭ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌. ಹರ್ಷ, ಮಂಗಳೂರು ದಸರಾ ಮಹೋತ್ಸವಕ್ಕೆ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಉತ್ಸವ ಯಶಸ್ವಿಯಾಗಿ ನಡೆಯಲು ಪೊಲೀಸ್‌ ಇಲಾಖೆ ಸರ್ವರೀತಿಯ ಸಹಕಾರ ನೀಡಲಿದೆ. ಈಗಾಗಲೇ ಸಭೆ ನಡೆಸಲಾಗಿದ್ದು, ಭದ್ರತೆ ವಿಷಯದಲ್ಲೂ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಹೇಳಿದರು.

ಮೈಸೂರು ದಸರಾದಲ್ಲಿ ಖಾಸಗಿ ದರ್ಬಾರ್ ಹೇಗೆ ನಡೆಯುತ್ತೆ? ಸುವರ್ಣ ನ್ಯೂಸ್‌ನಲ್ಲಿ ಕಣ್ತುಂಬಿಕೊಳ್ಳಿ

ಧಾರ್ಮಿಕ, ಸಾಂಸ್ಕೃತಿಕ, ಕಲಾ ವೈಭವ ಕುದ್ರೋಳಿ ಕ್ಷೇತ್ರದಲ್ಲಿ ಸಾಕಾರಗೊಂಡಿದೆ. ದಸರಾ ವೈಭವ ಇಲ್ಲಿ ವಿಶಿಷ್ಟವಾಗಿ ಅನಾವರಣಗೊಂಡಿದೆ. ಈ ಮೂಲಕ ಮಂಗಳೂರಿನ ಸಮೃದ್ಧ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವಾಗಿದೆ ಎಂದವರು ಶ್ಲಾಘಿಸಿದರು.

 

ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ರವೀಶ್‌ ಶಂಕರ್‌ ಮಿಜಾರು, ಕೆ. ಮಹೇಶ್ಚಂದ್ರ, ಮಾಲತಿ ಜನಾರ್ದನ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್‌ ಕುಮಾರ್‌, ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್‌, ಬಿ.ಜಿ.ಸುವರ್ಣ, ಶೇಖರ್‌ ಪೂಜಾರಿ, ಜತಿನ್‌ ಅತ್ತಾವರ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್‌, ಅನಸೂಯ ಬಿ.ಟಿ. ಸಾಲಿಯಾನ್‌, ಲೀಲಾಕ್ಷ ಬಿ. ಕರ್ಕೇರಾ, ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಜಯಂತ್‌ ನಡುಬೈಲ್‌ ಮತ್ತಿತರರು ಇದ್ದರು. ಕುದ್ರೋಳಿ ದೇವಾಲಯದ ನವೀಕರಣ- ಮಂಗಳೂರು ದಸರಾದ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ

ನಿತ್ಯ ವಿವಿಧ ಪೂಜೆ, 9ರಂದು ಮೆರವಣಿಗೆ

ಕುದ್ರೋಳಿ ದೇವಾಲಯದಲ್ಲಿ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾಕ್ಕೆ ಚಾಲನೆ ದೊರೆತಿದೆ. ಇನ್ನು ಅ.9ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮವೇ ಶ್ರೀಕ್ಷೇತ್ರದಲ್ಲಿ ನಡೆಯಲಿದೆ. ನಿತ್ಯವೂ ದೇವಿಯರಿಗೆ ವಿವಿಧ ಪೂಜೆ, ಅಲಂಕಾರಗಳು ನಡೆಯಲಿವೆ. ಅ.8ರಂದು ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ ನಡೆದು ಸಂಜೆ 4 ಗಂಟೆಗೆ ಶಾರದಾ ಮಾತೆ ಸಹಿತ ನವದುರ್ಗೆಯರ ವೈಭವೋಪೇತ ಮೆರವಣಿಗೆ ನಗರದಲ್ಲಿ ನಡೆಯಲಿದೆ.

ನೇತ್ರಾವತಿ ಸೇತುವೆಯಲ್ಲಿ ಮತ್ತೊಂದು ಆತ್ಮಹತ್ಯೆ: ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ

ಈ ಬಾರಿ ನವದುರ್ಗೆಯರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿರುವುದು ವಿಶೇಷ. ದೇವಿಯರನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಸೇರುತ್ತದೆ. ಮರುದಿನ ಅ.9ರಂದು ಮುಂಜಾನೆ 4 ಗಂಟೆಗೆ ಕುದ್ರೋಳಿ ಕ್ಷೇತ್ರಕ್ಕೆ ಮೆರವಣಿಗೆ ಸಂಪನ್ನಗೊಂಡು ಪೂಜೆ ಬಲಿ, ಮಂಟಪ ಬಲಿ ಬಳಿಕ ಶ್ರೀ ಶಾರದಾ ವಿಸರ್ಜನೆ ನಡೆಯಲಿದೆ.

click me!