ಗಡಿ ವಿವಾದ ಕಿಚ್ಚಿನ ಮಧ್ಯೆ ಬೆಳಗಾವಿಗೆ ಮಹಾರಾಷ್ಟ್ರ ಎನ್‌ಸಿಪಿ ಶಾಸಕ ರೋಹಿತ ಪವಾರ ಭೇಟಿ

By Gowthami KFirst Published Dec 13, 2022, 5:10 PM IST
Highlights

 ಬೆಳಗಾವಿ ಗಡಿ ವಿವಾದದ ಕಿಚ್ಚು ಹೊತ್ತಿರುವಾಗಲೇ ಮಂಗಳವಾರ ಬೆಳಗಾವಿಗೆ ಮಹಾರಾಷ್ಟ್ರ ಎನ್ ಸಿಪಿ ಶಾಸಕ ರೋಹಿತ ಪವಾರ ಭೇಟಿ ನೀಡಿದ್ದಾರೆ. ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಮರಾಠಿ ಸಮಾಜದ ಸಮಸ್ಯೆ ಆಲಿಸಿದ್ದಾರೆ. 

ಬೆಳಗಾವಿ(ಡಿ.13): ಬೆಳಗಾವಿ ಗಡಿ ವಿವಾದದ ಕಿಚ್ಚು ಹೊತ್ತಿರುವಾಗಲೇ ಮಂಗಳವಾರ ಬೆಳಗಾವಿಗೆ ಮಹಾರಾಷ್ಟ್ರ ಎನ್ ಸಿಪಿ ಶಾಸಕ ರೋಹಿತ ಪವಾರ ಭೇಟಿ ನೀಡಿದ್ದಾರೆ. ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಮರಾಠಿ ಸಮಾಜದ ಸಮಸ್ಯೆ ಆಲಿಸಿದ್ದಾರೆ. ಎಂಇಎಸ್ ಮುಖಂಡ ದೀಪಕ ದಳವಿ ಮನೆಗೆ ತೆರಳಿ ಮಾತುಕತೆ ನಡೆಸಿದರು. ಹುತಾತ್ಮ ಚೌಕ್ ಗೆ ಭೇಟಿ ನೀಡಿ ಎಂಇಎಸ್ ನಾಯಕರನ್ನು ಭೇಟಿಯಾದರು. ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನನಗೂ ಹಾಗೂ ಬೆಳಗಾವಿಗೂ ಅವಿನಾಭಾವ ಸಂಬಂಧ ಇದೆ. ನಾನು ಮಹಾರಾಷ್ಟ್ರದಿಂದ ಯಾವುದೇ ಅಡ್ಡ ದಾರಿಯಿಂದ ಬಂದಿಲ್ಲ‌. ನೇರವಾಗಿ ಬಂದಿದ್ದೇನೆ. ಬೆಳಗಾವಿಲ್ಲಿರುವ ಮರಾಠಿ ಭಾಷಿಕರ ಸಮಸ್ಯೆಯನ್ನು ಬಗೆ ಹರಿಸಲು ಮಹಾರಾಷ್ಟ್ರ ಸದನದಲ್ಲಿ ಚರ್ಚೆ ನಡೆಸುವೆ ಎಂದರು. ರಾಜಕೀಯದಲ್ಲಿ ನನ್ನ ಚಿಕ್ಕಪ್ಪ ಶರದ್ ಪವಾರ್ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇನೆ. ಬೆಳಗಾವಿ ಮರಾಠಿಗರ ಬೇಡಿಕೆಯ ಅನುಸಾರ ನಾನು ಇಲ್ಲಿ ಬಂದಿದ್ದು ಇವರ ಸಮಸ್ಯೆಯ ಬಗ್ಗೆ ಮಹಾರಾಷ್ಟ್ರದಲ್ಲಿ ಬೆಳಕು ಚೆಲ್ಲುವುದಾಗಿ ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿ ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದಿದ್ದಾರೆ.

ಮಹಾರಾಷ್ಟ್ರದ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯ:
ಇಲ್ಲದ ವಿಷಯ ಇಟ್ಟುಕೊಂಡು ಪದೇ ಪದೇ ಕನ್ನಡಿಗರಿಗೆ ಕಿರುಕುಳ ಕೊಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಈ ಕುರಿತು ಪಟ್ಟಣದ ತಹಸೀಲ್‌ ಕಚೇರಿಯಲ್ಲಿ ಸೋಮವಾರ ತಾಲೂಕು ಕರವೇ ಅಧ್ಯಕ್ಷ ಗಣೇಶ ಪಾಟೀಲ್‌ ಜ್ಯಾಂತಿ ನೇತೃತ್ವದಲ್ಲಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ತಹಸೀಲ್ದಾರಗೆ ಸಲ್ಲಿಸಲಾಯಿತು.

ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಚ್‌ನಲ್ಲಿದೆ. ಹೀಗಿರುವಾಗ ಮಹಾರಾಷ್ಟ್ರ ರಾಜಕೀಯ ದುರುದ್ದೇಶದಿಂದ ಪದೇಪದೇ ಗಡಿ ಕ್ಯಾತೆ ತೆಗೆದು ರಾಜ್ಯದ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸುವುದು, ಮಸಿ ಬಳಿಯುವುದು, ಕನ್ನಡ ಧ್ವಜಗಳನ್ನು ಸುಡುವುದು, ಅಲ್ಲಿ ವಾಸ ಮಾಡುವ ಕನ್ನಡಿಗರಿಗೆ ಕಿರುಕುಳ ನೀಡುವ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದೆ. ಪ್ರಧಾನಮಂತ್ರಿಯವರ ಕಾರ್ಯಕ್ಕೂ ಸಹ ಚ್ಯೂತಿ ತರುವ ಕೆಲಸ ನಡೆಯುತ್ತಿದೆ, ಬೆಳಗಾವಿ, ನಿಪ್ಪಾಣಿ, ಕಾರವಾರ ಕನ್ನಂಡಾಬೆಯ ಅವಿಭಾಜ್ಯ ಅಂಗವಾಗಿದೆ. ಅಪಮಾನ ಎಂದಿಗೂ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಡಿ ವಿವಾದ: ಸಿಎಂಗೆ ಕೇಂದ್ರ ಬುಲಾವ್‌, ನಾಳೆ ಅಮಿತ್‌ ಶಾ ಸಂಧಾನ ಸಭೆ

ಇತಿಹಾಸ ತಿರುವಿ ನೋಡಿದಾಗ ಕನ್ನಡಿಗರು-ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಜನತೆಗೆ ಸಹಾಯ ಮತ್ತು ಆಶ್ರಯ ನೀಡಿದ್ದಾರೆ. ಸಮಾಜಘಾತುಕ ಕೆಲಸ ಪದೇ ಪದೇ ಮಾಡುತ್ತಿರುವ ಸಂಘಟನೆಗಳಾದ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸಂಪೂರ್ಣ ನಿಷೇಧಿಸಲು ಕೇಂದ್ರ ಸರಕಾರದಿಂದ ಆದೇಶ ಹೊರಡಿಸಬೇಕು. ಇಲ್ಲದಿದ್ದರೇ ಬರುವ ದಿನಗಳಲ್ಲಿ ಮಹಾರಾಷ್ಟ್ರದ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪಿಎಂಗೆ ಬರೆದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಗಡಿ ವಿವಾದ ಹಳೇ ವಿವಾದಕ್ಕೆ ಮರುಜೀವ, ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಆಗ್ರಹ

ಸಂಘಟನೆ ಸಲಹೆಗಾರ ರಮೇಶ ಚಿದ್ರಿ, ಯುವ ಘಟಕದ ಅಧ್ಯಕ್ಷ ಸುದೀಪ ತೂಗಾಂವೆ, ಕಾರ್ಯದರ್ಶಿ ವೀರೇಶ ಬಿರಾದಾರ್‌, ಪ್ರಮುಖರಾದ ಸಾಗರ ಸ್ವಾಮಿ, ಕಾಶಿನಾಥ ಚಳಕಾಪೂರೆ, ವಸಂತ ಮಾನೂರೆ, ಬಸವರಾಜ ಕಾರಬಾರಿ, ಸುರೇಶ ಬಿರಾದಾರ್‌, ರಾಜಕುಮಾರ ಬಿರಾದಾರ್‌, ಸಿದ್ದೇಶ್ವರ ಹಜನಾಳೆ, ಶ್ರೀನಿವಾಸ ಮೇತ್ರೆ, ಸುನಿಲ ಮೇತ್ರೆ, ಫಿರೋಜ್‌ ಹಿದಾಯತ್‌ ಅಲಿ, ಶೈಲೇಶ ಕರಂಜೆ ಸೇರಿದಂತೆ ಹಲವರು ಇದ್ದರು.

click me!