'ಬೆಳಗಾವಿ, ಕಾರವಾರ, ನಿಪ್ಪಾಣಿ ನಮಗೆ ಸೇರಬೇಕು' ಮಹಾರಾಷ್ಟ್ರ ಸಲ್ಲಿಸಿದ ತ್ವರಿತ ವಿಚಾರಣೆ ಅರ್ಜಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು

Published : Sep 02, 2026, 09:12 PM IST
Belagavi Border Dispute

ಸಾರಾಂಶ

ದಶಕಗಳಷ್ಟು ಹಳೆಯದಾದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ತನಗೆ ಹಸ್ತಾಂತರಿಸಬೇಕೆಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರ ವಿಚಾರಣೆಗೆ ಮನವಿ ಮಾಡಿದೆ.

ಬೆಳಗಾವಿ/ನವದೆಹಲಿ (ಸೆ.2): ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ದಶಕಗಳಷ್ಟು ಹಳೆಯ ಬೆಳಗಾವಿ ಗಡಿ ವಿವಾದ ಮತ್ತೆ ಕಾವೇರಿದೆ. ಒಂದೆಡೆ, ಕರ್ನಾಟಕದ ವಶದಲ್ಲಿರುವ ಮರಾಠಿ ಭಾಷಿಕ ಪ್ರದೇಶಗಳನ್ನು ತನಗೆ ಹಸ್ತಾಂತರಿಸಬೇಕು ಎಂದು ಕೋರಿ 2004ರಲ್ಲಿ ಸಲ್ಲಿಸಲಾಗಿದ್ದ ಮೂಲ ಅರ್ಜಿಯ ಶೀಘ್ರ ವಿಚಾರಣೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಇನ್ನೊಂದೆಡೆ, ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದು ಸ್ಪಷ್ಟಪಡಿಸುವ 1988ರ ಶಾಸನಸಭೆಯ ನಿರ್ಣಯವನ್ನು ಅಂಗೀಕರಿಸುವಂತೆ ಕರ್ನಾಟಕ ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಗೆ (BCC) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ವಾದವೇನು?

ಮಹಾರಾಷ್ಟ್ರ ಸರ್ಕಾರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ತನ್ನ 2004ರ ದಾವೆಯ ವಿಚಾರಣೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು ಎಂದು ಕೋರಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಲಿಖಿತ ವಾದ-ಪ್ರತಿವಾದಗಳ (Pleadings) ಪ್ರಕ್ರಿಯೆ ಪೂರ್ಣಗೊಂಡಿದ್ದು, ದಾವೆಯು ವಿಚಾರಣೆಗೆ ಸೂಕ್ತವಾಗಿದೆ ಎಂದು ವಾದಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯಮಾಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಮಹಾರಾಷ್ಟ್ರದ ಪರ ವಕೀಲರು ವಾದ ಮಂಡಿಸಿದರು.

565 ಹಳ್ಳಿಗಳ ಮೇಲೆ ಕಣ್ಣು: 1956ರ ರಾಜ್ಯ ಪುನರ್ವಿಂಗಡಣಾ ಕಾಯ್ದೆಯ ಭಾಷಾವಾರು ತತ್ವಗಳಿಗೆ ವಿರುದ್ಧವಾಗಿ, ಮರಾಠಿ ಭಾಷಿಕರು ಹೆಚ್ಚಾಗಿರುವ ನೂರಾರು ಹಳ್ಳಿಗಳ ಮೇಲೆ ಕರ್ನಾಟಕ ಇಂದಿಗೂ ಆಡಳಿತ ನಡೆಸುತ್ತಿದೆ ಎಂದು ವಕೀಲರು ವಾದ ಮಾಡಿದ್ದಾರೆ. ಕರ್ನಾಟಕದ ವ್ಯಾಪ್ತಿಯಲ್ಲಿ ಇಂತಹ 565 ಹಳ್ಳಿಗಳು ಉಳಿದುಕೊಂಡಿದ್ದು, ಯಾವುದೇ ವಿಳಂಬವಿಲ್ಲದೆ ಮೂಲ ದಾವೆಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಕೋರಿದರು.

ಈ ಮನವಿಗೆ ಸ್ಪಂದಿಸಿದ ಸಿಜೆಐ ಸೂರ್ಯ ಕಾಂತ್, ತಾವು ಪ್ರಕರಣದ ಕಡತಗಳನ್ನು ಪರಿಶೀಲಿಸುವುದಾಗಿ ತಿಳಿಸಿದರಾದರೂ, ತಕ್ಷಣವೇ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಏನಿದು ವಿವಾದ?

ಬೆಳಗಾವಿ (ಬೆಳಗಾಂ), ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಪ್ರಮುಖ ಗಡಿ ಪ್ರದೇಶಗಳ ಮೇಲೆ ಮಹಾರಾಷ್ಟ್ರ ಹಕ್ಕು ಸಾಧಿಸುತ್ತಿದೆ. 1956ರ ಕಾಯ್ದೆಯಡಿ ಬೆಳಗಾವಿಯನ್ನು ಕನ್ನಡ ಭಾಷಿಕರ ಬಾಹುಳ್ಯದ ಆಧಾರದ ಮೇಲೆ ಆಗಿನ ಮೈಸೂರು ರಾಜ್ಯಕ್ಕೆ ಸೇರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಎರಡು ದಶಕಗಳ ಹಿಂದೆ (2004ರಲ್ಲಿ) ಸುಪ್ರೀಂ ಕೋರ್ಟ್‌ನಲ್ಲಿ ಮೂಲ ದಾವೆ ಹೂಡಿದ್ದು, ಅದು ಇಂದಿಗೂ ವಿಚಾರಣೆಯ ಹಂತದಲ್ಲೇ ಬಾಕಿ ಉಳಿದಿದೆ.

ಬೆಳಗಾವಿ ಪಾಲಿಕೆಗೆ ಸರ್ಕಾರದ ಕಟ್ಟುನಿಟ್ಟಿನ ಸೂಚನೆ!

ಮಹಾರಾಷ್ಟ್ರದ ಈ ನಡೆಗೆ ಪ್ರತಿಯಾಗಿ ಕರ್ನಾಟಕ ಸರ್ಕಾರವೂ ಪ್ರಬಲ ಹೆಜ್ಜೆ ಇಟ್ಟಿದೆ. ಬೆಳಗಾವಿ ಗಡಿ ವಿವಾದದಲ್ಲಿ ಕರ್ನಾಟಕದ ನಿಲುವನ್ನು ಬೆಂಬಲಿಸಿ, ಮಾರ್ಚ್ 23, 1988ರಲ್ಲಿ ರಾಜ್ಯ ಶಾಸನಸಭೆ ಅಂಗೀಕರಿಸಿದ್ದ ನಿರ್ಣಯದಂತೆಯೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ (BCC) ಹೊಸ ನಿರ್ಣಯ ಅಂಗೀಕರಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಕನ್ನಡ ಸಂಘಟನೆಗಳ ನಿರಂತರ ಹೋರಾಟ: ಬೆಳಗಾವಿಯು ಕರ್ನಾಟಕದ ಬೇರ್ಪಡಿಸಲಾಗದ ಅಂಗ ಎಂದು ಘೋಷಿಸಿ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯ ಕನ್ನಡ ಸಂಘಟನೆಗಳು ಕಳೆದ ಐದು ತಿಂಗಳುಗಳಿಂದ ನಿರಂತರ ಅಭಿಯಾನ ನಡೆಸುತ್ತಿದ್ದವು. ಸಂಘಟನೆಗಳ ಪದಾಧಿಕಾರಿಗಳು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೂ ಸುದೀರ್ಘ ಚರ್ಚೆ ನಡೆಸಿದ್ದರು.

1988ರ ನಿರ್ಣಯದಲ್ಲಿ ಏನಿತ್ತು?: ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ, ಎಚ್.ಕೆ. ಪಾಟೀಲ್ ಅವರು ಮಂಡಿಸಿದ್ದ ನಿರ್ಣಯದ ಪ್ರತಿಯನ್ನು ಸರ್ಕಾರ ಈಗ ಪಾಲಿಕೆಗೆ ಕಳುಹಿಸಿಕೊಟ್ಟಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ತಿಳಿಸಿದ್ದಾರೆ.

1988ರ ಶಾಸನಸಭೆ ನಿರ್ಣಯದ ಪ್ರಮುಖ ಸಾಲುಗಳು

"ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಶಾಶ್ವತವಾಗಿ ಬಗೆಹರಿಸಲು ಮಹಾಜನ್ ಆಯೋಗದ ವರದಿಯನ್ನು ಜಾರಿಗೊಳಿಸುವುದು ಅತ್ಯಗತ್ಯ. ವರದಿ ಜಾರಿಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ಮಹಾರಾಷ್ಟ್ರ ನಾಯಕರು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಹಾಗೂ ಎರಡೂ ರಾಜ್ಯಗಳ ನಡುವೆ ವೈಷಮ್ಯ ಸೃಷ್ಟಿಸುತ್ತಿದ್ದಾರೆ. ಮಹಾಜನ್ ಆಯೋಗದ ಶಿಫಾರಸುಗಳು ಎರಡೂ ರಾಜ್ಯಗಳಿಗೂ ಬದ್ಧವಾಗಿದ್ದು, ಕೇಂದ್ರ ಸರ್ಕಾರ ತಕ್ಷಣವೇ ಅದನ್ನು ಜಾರಿಗೊಳಿಸಬೇಕು." ಎಂದಿದೆ.

PREV
Read more Articles on
click me!

Recommended Stories

Bagalakote: ತರಗತಿಯಲ್ಲೇ ಕುಸಿದುಬಿದ್ದ ಶಾಲಾ ಮೇಲ್ಛಾವಣಿ; ಕೂದಲೆಳೆಯ ಅಂತರದಲ್ಲಿ ವಿದ್ಯಾರ್ಥಿಗಳು ಪಾರು!
ಹೆಂಡತಿ ಕಣ್ಣೆದುರೇ ನರಳಿ ನರಳಿ ಪ್ರಾಣಬಿಟ್ಟ ನವ ವಿವಾಹಿತ - ಬಿಎಂಟಿಸಿಗೆ ಮತ್ತೊಂದು ಬಲಿ