Belagavi Border dispute: ಮಹಾ ಬಸ್‌ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

By Kannadaprabha NewsFirst Published Dec 9, 2022, 12:10 PM IST
Highlights

ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚು ಗುರುವಾರ ತುಸು ತಣ್ಣಗಾಗಿದ್ದರೂ ಗಡಿಭಾಗದಲ್ಲಿ ಬೂದಿಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ  ಸ್ಥಗಿತಗೊಂಡಿರುವುದರಿಂದ ಗಡಿಭಾಗದ ಪ್ರಯಾಣಿಕರು ಪರದಾಡುವಂತಾಗಿದೆ.

ಬೆಳಗಾವಿ (ಡಿ.9) : ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚು ಗುರುವಾರ ತುಸು ತಣ್ಣಗಾಗಿದ್ದರೂ ಗಡಿಭಾಗದಲ್ಲಿ ಬೂದಿಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಕಪ್ಪು ಮಸಿ ಬಳಿದಿದ್ದರಿಂದ ಉಭಯ ರಾಜ್ಯಗಳ ನಡುವಿನ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಬಸ್‌ ಸಂಚಾರ ಸ್ಥಗಿತಗೊಂಡಿರುವುದರಿಂದ ಗಡಿಭಾಗದ ಪ್ರಯಾಣಿಕರು ಪರದಾಡುವಂತಾಗಿದೆ.

ಬೆಳಗಾವಿ: ತಕ್ಷಣ ಗಡಿ ಉಸ್ತುವಾರಿ ಸಚಿವರ ನೇಮಿಸಿ

ಬೆಳಗಾವಿ ಜಿಲ್ಲೆಯಿಂದ ನಿತ್ಯ ಮಹಾರಾಷ್ಟ್ರಕ್ಕೆ 400 ಬಸ್‌ಗಳು ಸಂಚರಿಸುತ್ತಿದ್ದವು. ಗಡಿಭಾಗದಲ್ಲಿ ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ, ಪ್ರಹಾರ ಸಂಘಟನೆಗಳ ಪುಂಡರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಉದ್ಧಟತನ ಮೆರೆದಿದ್ದರು. ಅಲ್ಲದೇ, ಕರ್ನಾಟಕ ಬಸ್‌ಗಳನ್ನೂ ಧ್ವಂಸಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದ್ದರು. ಮರಾಠಿ ಪುಂಡರ ಪುಂಡಾಟಿಕೆಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ಉಭಯ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗೆ ಲಕ್ಷಾಂತರ ರುಪಾಯಿ ಹಾನಿಯುಂಟಾಗಿದೆ. ಬಸ್‌ ಸೌಲಭ್ಯ ಇಲ್ಲದೇ ಇರುವುದರಿಂದ ಮದುವೆ ಸಮಾರಂಭ, ಜಾತ್ರಾ ಮಹೋತ್ಸವ, ಆಸ್ಪತ್ರೆಗಳಿಗೆ ತೆರಳಲು ಗಡಿಭಾಗದ ಪ್ರಯಾಣಿಕರು ಪರದಾಡುವಂತಾಗಿದೆ. ಗಡಿಭಾಗದಲ್ಲಿ ಬಿಗಿಭದ್ರತೆ ಮುಂದುವರೆದಿದೆ. ಕೊಗನೊಳ್ಳಿ, ಕಾಗವಾಡ ಸೇರಿದಂತೆ ಬೆಳಗಾವಿ ಜಿಲ್ಲೆಯ ಗಡಿಭಾಗದ 21 ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಪೊಲೀಸ್‌ ಭದ್ರತೆ ಮುಂದುವರೆದಿದೆ.

ಮಹಾ ಬಸ್‌ಗಳು ಸುರಕ್ಷಿತವಾಗಿ ವಾಪಸ್‌ :ಬೆಳಗಾವಿ ಗಡಿ ವಿವಾದದಿಂದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ 145 ಬಸ್‌ಗಳ ಮೂಲಕ ಮಹಾರಾಷ್ಟ್ರದ ಭಕ್ತರು ಆಗಮಿಸಿದ್ದರು. ರೇಣುಕಾ ಯಲ್ಲಮ್ಮ ಜಾತ್ರೆಗೆ ಪ್ರಯಾಣಿಕರನ್ನು ಕರೆತಂದಿದ್ದ ಮಹಾರಾಷ್ಟ್ರದ 145 ಬಸ್‌ಗಳು ಸುರಕ್ಷಿತವಾಗಿ ವಾಪಸ್‌ ಆಗಿವೆ. ಮಹಾರಾಷ್ಟ್ರದಿಂದ ಬಂದಿದ್ದ ಬಸ್‌ಗಳನ್ನು ಒಂದೆಡೆ ನಿಲುಗಡೆ ಮಾಡಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಈ ಮೂಲಕ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಸುರಕ್ಷಿತವಾಗಿ ಎಲ್ಲ ಬಸ್‌ಗಳನ್ನು ಮರಳಿ ಕಳುಹಿಸಲಾಗಿದೆ. ಮಹಾರಾಷ್ಟ್ರ ರಾಜ್ಯದ ಬಸ್‌ಗಳು ಸುರಕ್ಷಿತವಾಗಿ ಮರಳಿ ಬಂದಿರುವುದರಿಂದ ಕೊಲ್ಲಾಪುರ ವಿಭಾಗದ ಸಾರಿಗೆ ಇಲಾಖೆ ಅಧಿಕಾರಿಗಳು ಬೆಳಗಾವಿ ಜಿಲ್ಲಾ ಪೊಲೀಸ್‌ರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಬಸ್‌ ಸೇವೆ ಸ್ಥಗಿತ: ವ್ಯಾಪಾರ ಡಲ್‌

ಬೆಳಗಾವಿ ಗಡಿ ವಿವಾದದ ಬಿಸಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿನ ವ್ಯಾಪಾರಸ್ಥರಿಗೆ ತಟ್ಟಿದೆ. ಮಹಾರಾಷ್ಟ್ರದ ಮರಾಠಿ ಭಾಷಿಕ ಪುಂಡರ ಪುಂಡಾಟಿಕೆಗೆ ಗಡಿಭಾಗದ ಜನತೆ ಹೈರಾಣಾಗುವಂತಾಗಿದೆ.

ಹೊಸ್ತಿಲ ಹುಣ್ಣಿಮೆಯ ಹೊಸ್ತಿನಲ್ಲೇ ಗಡಿ ವಿವಾದ ತಾರಕಕ್ಕೇರಿದೆ. ಇದರಿಂದಾಗಿ ಕರ್ನಾಟಕ-ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವಿನ ಬಸ್‌ ಸಂಚಾರ ಸ್ಥಗಿತಗೊಂಡಿದೆ. ದಕ್ಷಿಣ ಮಹಾರಾಷ್ಟ್ರದ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಲಕ್ಷಾಂತರ ಭಕ್ತರು ಸವದತ್ತಿಗೆ ಆಗಮಿಸುತ್ತಿದ್ದರು. ಆದರೆ, ಬಸ್‌ ಸ್ಥಗಿತಗೊಂಡಿದ್ದರಿಂದ ಮಹಾರಾಷ್ಟ್ರದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ. ಇದು ವ್ಯಾಪಾರಸ್ಥರ ಮೇಲೆ ಪರಿಣಾಮ ಬೀರಿದೆ.

Vijayapura: ರಾಜ್ಯದ ಬಸ್‌ಗೆ ಮಸಿ ಬಳಿದಿದ್ದಕ್ಕೆ ಕರವೇ ಆಕ್ರೋಶ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 25 ರಷ್ಟುಜನ ಬಂದಿಲ್ಲ. ಇದರಿಂದಾಗಿ ವ್ಯಾಪಾರ ಇಲ್ಲದಂತಾಗಿದೆ. ಕಳೆದ ಎರಡು ವರ್ಷ ಕೋವಿಡ್‌ನಿಂದ ವ್ಯಾಪಾರ ಇಲ್ಲದೇ ನಾವೆಲ್ಲರೂ ಕಂಗಾಲಾಗಿದ್ದೇವೆ. ದೇವಸ್ಥಾನಕ್ಕೆ ಬಂದ ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವದಂತಿ ಹರಡಿಸಲಾಗಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿಲ್ಲ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡರು. ಮಹಾರಾಷ್ಟ್ರದ ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಮರಾಠಿ ಭಾಷಿಕ ಪುಂಡರ ವಿರುದ್ಧ ವ್ಯಾಪಾರಸ್ಥರ ಆಕ್ರೋಶ ವ್ಯಕ್ತಪಡಿಸಿದರು.

ಗಡಿ ಸಮಸ್ಯೆಗೆ ಪ್ರತ್ಯೇಕ ಇಲಾಖೆ ರಚಿಸಿ; ಅಶೋಕ್ ಪೂಜಾರಿ

ಗಡಿ ಸಮಸ್ಯೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಇಲಾಖೆಯನ್ನು ರಚಿಸಬೇಕು. ಗಡಿಭಾಗದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಅಶೋಕ ಪೂಜಾರಿ ಹೇಳಿದರು. ಗುರುವಾರ ನಗರದ ಜ್ಞಾನ ಮಂದಿದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಜವಾಬ್ದಾರಿ ಸ್ಥಾನದಲ್ಲಿರುವ ಇಬ್ಬರು ಮಂತ್ರಿಗಳು ನೀಡಿರುವ ಹೇಳಿಕೆಯಿಂದ ರಾಜ್ಯ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣರಾದ ಸಚಿವರ ಮೇಲೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ದಾಕ್ಷಿನ್ಯಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಶಾಂತಿ ಕಾಪಾಡಲು ಸಿಎಂ ಬೊಮ್ಮಾಯಿ-ಮಹಾರಾಷ್ಟ್ರ ಸಿಎಂ ಶಿಂಧೆ ಸಮ್ಮತಿ

ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ಗೋಕಾಕ ಜಿಲ್ಲೆಗಾಗಿ ಸರ್ಕಾರ ಘೋಷಿಸಬೇಕು. ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಮ್ಮ ಬೆಂಬಲಿಗರೊಂದಿಗೆ ಹೋರಾಟದಲ್ಲಿ ಭಾಗವಹಿಸುತ್ತೇವೆ ಎಂದು ಅಶೋಕ ಪೂಜಾರಿ ತಿಳಿಸಿದರು. ಈ ಸಂದರ್ಭದಲ್ಲಿ ಈರಣ್ಣ ಪೂಜಾರಿ, ಇಮ್ರಾನ ಪೈಲವಾನ, ನಿಂಗಪ್ಪ ಅಮ್ಮಿನಭಾಂವಿ ಹಾಗೂ ಇತರರು ಇದ್ದರು.

click me!