ಡಿ.ಕೆ. ಶಿವಕುಮಾರ್ ಜೀವ ತೆಗೆಯುವ ಸಂಚು : ಎಂ. ಲಕ್ಷ್ಮಣ

Published : Oct 11, 2023, 09:43 AM ISTUpdated : Oct 11, 2023, 09:47 AM IST
  ಡಿ.ಕೆ. ಶಿವಕುಮಾರ್ ಜೀವ ತೆಗೆಯುವ ಸಂಚು : ಎಂ. ಲಕ್ಷ್ಮಣ

ಸಾರಾಂಶ

ಒಕ್ಕಲಿಗ ಮುಖಂಡರ ಏಳಿಗೆ ಸಹಿಸದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮತ್ತೊಮ್ಮೆ ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.

  ಮೈಸೂರು :  ಒಕ್ಕಲಿಗ ಮುಖಂಡರ ಏಳಿಗೆ ಸಹಿಸದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮತ್ತೊಮ್ಮೆ ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.

ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಬಹಳ ಹತಾಶರಾಗಿ ಒತ್ತಡಕ್ಕೆ ಒಳಗಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮೈತ್ರಿಯ ಮೊದಲ ಕಂಡಿಷನ್ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳಹಿಸಬೇಕು ಎಂಬುದಾಗಿದೆ ಎಂದು ದೂರಿದರು.

ಕುಮಾರಸ್ವಾಮಿ ಅವರಿಗೆ ತಾಕತ್ತು ಧಮ್ ಇದ್ದರೆ ಜೈಲಿಗೆ ಕಳುಹಿಸಬೇಕು. ಡಿ.ಕೆ. ಶಿವಕುಮಾರ್ ಜೀವ ತೆಗೆಯುವ ಸಂಚು ರೂಪಿಸಿದ್ದಾರೆ. ಇದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಕೊಡುತ್ತೇನೆ. ಕುಮಾರಸ್ವಾಮಿ ಅವರಿಗೆ ತನ್ನ ಅಣ್ಣನ ಮಗನ ಬೆಳವಣಿಗೆ ಸಹಿಸಲಾಗದು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ತಪ್ಪಿಸಿದರು. ಹಿಂದೆ ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಬೆಳೆಯೋದು ಸಹಿಸಲಿಲ್ಲ. ಇದನ್ನು ಒಕ್ಕಲಿಗ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

19 ಶಾಸಕರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ- ಜೆಡಿಎಸ್ ಮೈತ್ರಿಗೆ ಒಪ್ಪಿಗೆ ಇದೆ ಎಂಬುದನ್ನು ಕುಮಾರಸ್ವಾಮಿ ಅವರು ಸಾಬೀತು ಪಡಿಸುವಂತೆ ಸವಾಲು ಹಾಕಿದರು. ರಾಜ್ಯಾಧ್ಯಕ್ಷರಿಗೆ ತಿಳಿಸಿದೇ ಮೈತ್ರಿ ಮಾಡಿಕೊಂಡಿದ್ದಾರೆ. ಸಿ.ಎಂ. ಇಬ್ರಾಹಿಂ ರಾಜೀನಾಮೆ ಸಲ್ಲಿಸಲು ಅ.16ರ ತನಕ ಯಾಕೇ ಕಾಯಬೇಕು ಎಂದು ಪ್ರಶ್ನಿಸಿದರು.

ಶಾಸಕ ಜಿ.ಟಿ. ದೇವೇಗೌಡ ಅವರು ಕಾಂಗ್ರೆಸ್ ಸರ್ಕಾರ ಸೂಸೈಡ್ ಭಾಗ್ಯ ಕೊಟ್ಟಿದೆ ಎಂದು ಆರೋಪಿಸಿದ್ದಾರೆ. ಜಿ.ಟಿ. ದೇವೇಗೌಡ ಅವರು ಹಿಟ್ ಅಂಡ್ ರನ್ ಹೇಳಿಕೆ ಕೊಡಬಾರದು. ನೂತನವಾಗಿ ಆಯ್ಕೆಯಾದ ಅಪ್ಪ- ಮಗ ತಮ್ಮ ಕ್ಷೇತ್ರಗಳಿಗೆ ಯಾವ ಯೋಜನೆ ತಂದಿದ್ದಾರೆ? ಮಾಡಿರುವ ಕೆಲಸದ ಬಗ್ಗೆ ಪಟ್ಟಿ ಬಿಡುಗಡೆ ಮಾಡಬೇಕು. ತಮ್ಮೊಂದಿಗೆ ಚರ್ಚೆಗಾದರೂ ಅವಕಾಶ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಜಾರಿ ನಿರ್ಲಕ್ಷ್ಯ ಮಾಡಿಲ್ಲ

 ಮೈಸೂರು :  ಕಾಂಗ್ರೆಸ್ ಸರ್ಕಾರ ಯಾವ ಜಾತಿಯನ್ನು ನಿರ್ಲಕ್ಷಿಸಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಆಧಾರದ ಮೇಲೆ ಹುದ್ದೆ ಕೊಡಲಾಗುವುದಿಲ್ಲ. ಅಲ್ಲದೆ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳಕ್ಕೆ ನಿಯೋಜಿಸಿಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

40 ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿ 10 ಲಿಂಗಾಯತ, 41 ವಿವಿಗಳ ಕುಲಪತಿಗಳ ಪೈಕಿ 14 ಲಿಂಗಾಯತರು, ಕರ್ನಾಟಕದ 87 ಐಎಎಸ್ ಅಧಿಕಾರಿಗಳಲ್ಲಿ 22 ಲಿಂಗಾಯತರು, ನಾಲ್ವರು ಜಿಲ್ಲಾಧಿಕಾರಿಗಳಾಗಿದ್ದಾರೆ. 10 ಜನರು ಜಿಪಂ ಸಿಇಒಗಳಾಗಿದ್ದಾರೆ. 439 ಕೆಎಎಸ್ ಶ್ರೇಣಿಯ ಅಧಿಕಾರಿಗಳಿದ್ದಾರೆ. ಇವರ ಪೈಕಿ 102 ಲಿಂಗಾಯತರಿದ್ದಾರೆ ಎಂದು ವಿವರಿಸಿದರು.

ಹೌಸಿಂಗ್ ಬೋರ್ಡ್, ತೋಟಗಾರಿಕೆ, ಕೃಷಿ, ಕ್ರೆಡಾಲ್, ಸೆಸ್ಕ್, ಬೆಸ್ಕಾಂ, ನೀರಾವರಿ ಮಂಡಲಿಗಳಲ್ಲಿ ಮುಖ್ಯಸ್ಥ ಸ್ಥಾನಗಳಲ್ಲಿ ಲಿಂಗಾಯತರಿದ್ದಾರೆ. ಇವು ಆಯಕಟ್ಟಿನ ಹುದ್ದೆಗಳಲ್ಲವೇ? ಎಂದು ಪ್ರಶ್ನಿಸಿದರು.

ಶಾಮನೂರು ಶಿವಶಂಕರಪ್ಪ ಅವರಿಗೆ ಯಾರೋ ಧಿಕ್ಕು ತಪ್ಪಿಸುತ್ತಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದೆ. ನಿಮ ಖುಷಿಗೋ ತೆವಲಿಗೋ ಹೇಳಿಕೆ ಕೊಟ್ಟು ಜೆಡಿಎಸ್- ಬಿಜೆಪಿಗೆ ಆಹಾರ ಕೊಡಬೇಡಿ. ಅಸಮಾಧಾನ ಇದ್ದರೆ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಹೇಳಿದರು.

ಕಾಂಗ್ರೆಸ್ ಸರ್ಕಾರ ಪ್ರತಿ ಸಮುದಾಯವನ್ನೂ ಒಟ್ಟಿಗೆ ಕೊಂಡೊಯ್ಯುತ್ತಿದೆ. ಸಿದ್ದರಾಮಯ್ಯ ಎಂದೂ ಜಾತಿ ರಾಜಕೀಯ ಮಾಡಿಲ್ಲ. ಕುರುಬರೇ ಸರ್ಕಾರ ನಡೆಸುತ್ತಿರುವುದು ಎನ್ನುವುದು ತಪ್ಪು. ಮುಖಂಡರು ಭಿನ್ನಾಭಿಪ್ರಾಯ ಸೃಷ್ಟಿಸುವ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅವರು ಟೀಕಿಸಿದರು.

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್