ಶಿವಮೊಗ್ಗದಲ್ಲಿ ‘ಲಂಡನ್‌ ಬಸವೇಶ್ವರ’ ಸ್ಥಾಪನೆ

By Kannadaprabha NewsFirst Published Jul 25, 2021, 8:34 AM IST
Highlights
  • ಶ್ರೀ ಬಸವೇಶ್ವರ ಪುತ್ಥಳಿಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ವರ್ಚುವಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು. 
  • ಶ್ರೀ ಬಸವೇಶ್ವರ ವೃತ್ತ, ಗಾಂಧಿ ಪಾರ್ಕ್ ಎದುರು ಮಹಾನಗರಪಾಲಿಕೆ ವತಿಯಿಂದ ಪ್ರತಿಷ್ಠಾಪನೆ

 ಶಿವಮೊಗ್ಗ (ಜು.25):  ನಗರದ ಶ್ರೀ ಬಸವೇಶ್ವರ ವೃತ್ತ, ಗಾಂಧಿ ಪಾರ್ಕ್ ಎದುರು ಮಹಾನಗರಪಾಲಿಕೆ ವತಿಯಿಂದ ಪ್ರತಿಷ್ಠಾಪಿಸಿರುವ ಶ್ರೀ ಬಸವೇಶ್ವರ ಪುತ್ಥಳಿಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ವರ್ಚುವಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು. ಲಂಡನ್‌ನ ದಿ ಲ್ಯಾಮ್‌ಬೆತ್‌ ಬಸವೇಶ್ವರ ಪ್ರತಿಷ್ಠಾನ ಯು.ಕೆ. ಅಧ್ಯಕ್ಷ ಡಾ.ನೀರಜ್‌ ಪಾಟೀಲ್‌ ಈ ಪುತ್ಥಳಿಯನ್ನು 2017ರಲ್ಲಿ ಕೊಡುಗೆಯಾಗಿ ನೀಡಿದ್ದರು.

ಶನಿವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಸ್‌.ಈಶ್ವರಪ್ಪ, ಭೈರತಿ ಬಸವರಾಜ ಉಪಸ್ಥಿತರಿದ್ದರು. ದಿ ಲ್ಯಾಮ್‌ಬೆತ್‌ ಬಸವೇಶ್ವರ ಪ್ರತಿಷ್ಠಾನ ಯು.ಕೆ. ಅಧ್ಯಕ್ಷ ಡಾ.ನೀರಜ್‌ ಪಾಟೀಲ್‌ ಹಾಗೂ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಎನ್‌.ಏಳುಮಲೈ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಶಿವಮೊಗ್ಗದಲ್ಲಿ ಲಂಡನ್‌ ಬಸವೇಶ್ವರ ಪುತ್ಥಳಿ ಅನಾವರಣ

ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಶ್ರೀ ನಾರಾಯಣ ಗುರು ಸೇವಾಶ್ರಮ ಅಮೃತ ನಿಟ್ಟೂರು ತೀರ್ಥಹಳ್ಳಿಯ ಶ್ರೀ ರೇಣುಕಾನಂದ ಸ್ವಾಮೀಜಿ, ಕಲ್ಲಗಂಗೂರು ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

4 ವರ್ಷದ ಬಳಿಕ ಪ್ರತಿಷ್ಠೆ ಯೋಗ: ಲಂಡನ್‌ನಿಂದ ಕೊಡುಗೆಯಾಗಿ ಶಿವಮೊಗ್ಗಕ್ಕೆ ಬಂದು ಸುಮಾರು 4 ವರ್ಷ ಕಳೆದರೂ ಈ ಪುತ್ಥಳಿ ಅನಾವರಣಗೊಂಡಿರಲಿಲ್ಲ. 2016ರಲ್ಲಿ ಡಾ. ನೀರಜ್‌ ಪಾಟೀಲ್‌ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಾವು ಲಂಡನ್‌ನ ಥೇಮ್ಸ್‌ ನದಿ ದಡದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಿರುವ ಕುರಿತು ಹೇಳಿದ್ದರು. ಆಗ ಶಿವಮೊಗ್ಗದಲ್ಲೂ ಇದೇ ರೀತಿ ಪ್ರತಿಮೆ ಸ್ಥಾಪಿಸುವುದಾದರೆ 3 ಅಡಿ ಎತ್ತರದ ಕಂಚಿನ ಪ್ರತಿಮೆ ನೀಡುವುದಾಗಿ ಹೇಳಿದ್ದರು. ಅದರಂತೆ ಲಂಡನ್‌ಗೆ ತೆರಳಿದ ಆಗಿನ ಶಿವಮೊಗ್ಗ ಮೇಯರ್‌ ಏಳುಮಲೈ ಬಾಬು ಅವರು 2017ರ ಅಕ್ಟೋಬರ್‌ 5 ರಂದು ಬಸವೇಶ್ವರರ ಕಂಚಿನ ಪುತ್ಥಳಿಯನ್ನು ನಗರಕ್ಕೆ ತಂದಿದ್ದರು. 

click me!