ಜು. 19ರಿಂದ ಲೋಕಸಭೆ ಅಧಿವೇಶನ, 20 ಮಸೂದೆ ಮಂಡನೆ: ಸಚಿವ ಜೋಶಿ

Kannadaprabha News   | Asianet News
Published : Jul 11, 2021, 11:49 AM IST
ಜು. 19ರಿಂದ ಲೋಕಸಭೆ ಅಧಿವೇಶನ, 20 ಮಸೂದೆ ಮಂಡನೆ: ಸಚಿವ ಜೋಶಿ

ಸಾರಾಂಶ

* ಜು.18ಕ್ಕೆ ಸರ್ವಪಕ್ಷ ಸಭೆ * ಬಿಎಸ್‌ವೈ ಬದಲಾವಣೆ ಪ್ರಶ್ನೆಯೇ ಇಲ್ಲ * ಅಧಿವೇಶನದಲ್ಲಿ ಯಾವುದೇ ಬಗೆಯ ಚರ್ಚೆಗೆ ಸರ್ಕಾರ ಸಿದ್ಧ  

ಹುಬ್ಬಳ್ಳಿ(ಜು.11):  ಲೋಕಸಭೆ ಮಳೆಗಾಲದ ಅಧಿವೇಶನವೂ ಜು. 19ರಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ 18ರಂದು ಕೇಂದ್ರದ ಸರ್ವಪಕ್ಷ ಸಭೆ ಕರೆದಿದ್ದೇವೆ. ಈ ಸಲ ಅಧಿವೇಶನದಲ್ಲಿ 20ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಯಾವುದೇ ಬಗೆಯ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದರು. ವಿಶ್ವದಲ್ಲೇ ಅತೀ ದೊಡ್ಡ ಲಸಿಕಾಭಿಯಾನ ಮಾಡಿದ್ದೇವೆ. 37 ಕೋಟಿಯಷ್ಟು ವ್ಯಾಕ್ಸಿನ್‌ ನೀಡಿದ್ದೇವೆ. ಎಲ್ಲರಿಗೂ ವ್ಯಾಕ್ಸಿನ್‌ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕೊರೋನಾ ನಿಯಂತ್ರಿಸಲು ಯಶಸ್ವಿಯಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ನುಡಿದರು.

ಕೊರೋನಾ ನಿರ್ವಹಣೆಯಲ್ಲಿ ವಿಫಲವಾದ ಕಾರಣದಿಂದಲೇ ಆರೋಗ್ಯ ಸಚಿವ ಡಾ. ಹರ್ಷವರ್ಧನ ಸೇರಿದಂತೆ ಹಲವು ಸಚಿವರ ತಲೆದಂಡವಾಗಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ತಲೆದಂಡವಲ್ಲ. ಹೊಸಬರಿಗೆ ಅವಕಾಶ ನೀಡುವ ಕೆಲಸ ಮಾಡಲಾಗಿದೆ ಅಷ್ಟೇ. ಹಲವು ಸಚಿವರು ಆರೇಳು ವರ್ಷದಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಹೊಸಬರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಆರೋಗ್ಯ ಸಚಿವರು ಸೇರಿದಂತೆ ಎಲ್ಲ ಸಚಿವರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ತಲೆ ದಂಡ ಅನ್ನುವುದು ಸರಿಯಲ್ಲ ಎಂದರು. ಮುಂದೆ ಬೇರೆ ಬೇರೆ ಜವಾಬ್ದಾರಿಯನ್ನೂ ಇವರಿಗೆ ಕೊಡಬಹುದು ಎಂದು ನುಡಿದರು.

ಸರ್ಕಾರದ ಶ್ವಾಸಕೋಶ ಗಟ್ಟಿಯಾಗಿದೆ, ಸಹಜವಾಗಿ ಉಸಿರಾಡುತ್ತಿದೆ: ಜೋಶಿ

ಬಿಎಸ್‌ವೈ ಬದಲಾವಣೆ ಪ್ರಶ್ನೆಯೇ ಇಲ್ಲ

ಶಾಸಕ ಬಸನಗೌಡ ಯತ್ನಾಳ ಪಾಟೀಲ ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೂ ದೆಹಲಿಗೆ ಹೋಗುವ ಅಗತ್ಯವಿಲ್ಲ. ಯಾರೋ ಒಬ್ಬರು ಹೋಗಿರಬಹುದು. ಅದು ಕೂಡ ವೈಯಕ್ತಿಕ ಕೆಲಸಕ್ಕೂ ಹೋಗಿರಬಹುದು ಎಂದರು. ನಮ್ಮ ಮೊದಲ ಆದ್ಯತೆ ಕೊರೋನಾ ನಿರ್ವಹಣೆ. ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಈಗಾಗಲೇ ಪಕ್ಷದ ಉಸ್ತುವಾರಿ ಅರುಣಸಿಂಗ್‌ ಕೂಡ ಸ್ಪಷ್ಟಪಡಿಸಿದ್ದಾರೆ ಎಂದರು.

ಅನಗತ್ಯ ವಿಚಾರ

ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಕ್‌ ಸಮರದ ಕುರಿತು ಮಾತನಾಡಿದ ಅವರು, ಇದೊಂದು ಅನಗತ್ಯ ವಿಚಾರ. ಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಅಂತ ಹೇಳುವುದಕ್ಕೆ ಎಕ್ಸ್‌ಫರ್ಟ್‌ ಕಮಿಟಿಯಿದೆ. ಈಗಾಗಲೇ ಅದು ತಿಳಿಸಿಯೂ ಆಗಿದೆ. ಅದಕ್ಕೆ ಪ್ರತಿಕ್ರಿಯೆ ಕೊಡುವ ಅಗತ್ಯ ಯಾರಿಗೂ ಇಲ್ಲ. ದೂರು ದುಮ್ಮಾನ ಇದ್ದರೆ ಸಂಬಂಧಿಸಿದ ಪ್ರಾಧಿಕಾರಕ್ಕೆ ನೀಡಲಿ. ಮಾಧ್ಯಮಗಳ ಎದುರು ಚರ್ಚೆ ಬೇಡ ಎಂದರು. ಎಚ್‌ಡಿಕೆ-ಸುಮಲತಾ ಇಬ್ಬರು ಅನಗತ್ಯ ಚರ್ಚೆ ಮಾಡಬೇಡಿ ಎಂದು ಸಲಹೆ ನೀಡಿದರು.
 

PREV
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ