ಡಾ.ರಾಜ್‌ಕುಮಾರ್‌ ಕನಸಿನಂತೆ ಮೈಸೂರು ಫಿಲ್ಮ್‌ ಸಿಟಿಗೆ ಶೀಘ್ರವೇ ಶಂಕು: ಸಿಎಂ ಸಿದ್ದರಾಮಯ್ಯ ಭರವಸೆ

By Kannadaprabha NewsFirst Published Jul 1, 2024, 4:01 PM IST
Highlights

ಡಾ.ರಾಜ್‌ಕುಮಾರ್‌ ಅವರ ಕನಸಿನಂತೆ ಮೈಸೂರಿನಲ್ಲಿ ನೂರು ಎಕರೆಯಲ್ಲಿ ‘ಚಿತ್ರನಗರಿ’ (ಫಿಲಂ ಸಿಟಿ) ನಿರ್ಮಾಣಕ್ಕೆ ಕೂಡಲೇ ಶಂಕುಸ್ಥಾಪನೆ ನೆರವೇರಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

ಬೆಂಗಳೂರು (ಜು.01): ಡಾ.ರಾಜ್‌ಕುಮಾರ್‌ ಅವರ ಕನಸಿನಂತೆ ಮೈಸೂರಿನಲ್ಲಿ ನೂರು ಎಕರೆಯಲ್ಲಿ ‘ಚಿತ್ರನಗರಿ’ (ಫಿಲಂ ಸಿಟಿ) ನಿರ್ಮಾಣಕ್ಕೆ ಕೂಡಲೇ ಶಂಕುಸ್ಥಾಪನೆ ನೆರವೇರಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಗತ್ಯ ಸಹಕಾರ ನೀಡಲಾಗುವುದು. ಫಿಲಂ ಸಿಟಿ ನಿರ್ಮಾಣಕ್ಕಾಗಿ ಮೈಸೂರಿನಲ್ಲಿ ನೂರು ಎಕರೆಗೂ ಹೆಚ್ಚು ಜಾಗ ಕೊಟ್ಟಿದ್ದೇ ನಮ್ಮ ಸರ್ಕಾರ. ಜಮೀನು ಸಂಬಂಧ ಯಾವುದೇ ತೊಡಕಿಲ್ಲ. 

ಪಿಪಿಪಿ ಮಾಡೆಲ್‌ನಲ್ಲಿ ಅದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಡಾ.ರಾಜ್‌ಕುಮಾರ್‌ ಅವರ ಕನಸಿನಂತೆ ಫಿಲಂ ಸಿಟಿ ಬಗ್ಗೆ ನಮ್ಮ ಸರ್ಕಾರ ಕ್ರಮ ವಹಿಸಲಿದೆ ಎಂದರು. ಕರ್ನಾಟಕದಲ್ಲಿ ಜನಸಂಖ್ಯೆ ಏಳು ಕೋಟಿಯಷ್ಟು ಬೆಳೆದಿದೆ. ಜನಸಂಖ್ಯೆಯ ಜತೆಗೆ ಸಂಸ್ಕೃತಿ ಮತ್ತು ಭಾಷೆಯೂ ಬೆಳೆಯಬೇಕು. ಆದರೆ, ಪ್ರಸ್ತುತ ಕನ್ನಡ ಚಿತ್ರರಂಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಕೇಳಿದ್ದೇನೆ. ಚಿತ್ರಮಂದಿರಗಳ ಸಮಸ್ಯೆ, ಪೈರಸಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್‌ ದರ ಮತ್ತಿತರ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಗೆ ಶೀಘ್ರವೇ ಸಭೆ ನಡೆಸಿ ಇವುಗಳ ಪರಿಹಾರದ ಕುರಿತು ಯೋಚಿಸಲಾಗುವುದು ಎಂದು ತಿಳಿಸಿದರು.

Latest Videos

ಚಿತ್ರರಂಗದವರಲ್ಲಿ ಶಿಸ್ತು ಕಮ್ಮಿಯಾಗಿದೆ, ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಲ್ಲ: ನಟ ಜಗ್ಗೇಶ್

ಇನ್ನು, ಕಲಾವಿದರು ಹಾಗೂ ತಂತ್ರಜ್ಞರು ಬೆಳೆಯಬೇಕು ಎಂದರೆ ನಿರ್ಮಾಪಕರ ಪಾತ್ರ ದೊಡ್ಡದು. ಆದರೆ, ಇವತ್ತು ಕನ್ನಡ ನಿರ್ಮಾಪಕರು ಕಷ್ಟದಲ್ಲಿದ್ದಾರೆ. ಈ ಸಂಬಂಧ ಸದ್ಯದಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಾಗೂ ನಿರ್ಮಾಪಕರ ಸಂಘದ ಸದಸ್ಯರನ್ನು ಕರೆದು ಈ ಕುರಿತು ಅವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಪ್ರಶಸ್ತಿ, ಸಬ್ಸಿಡಿ ಬಗ್ಗೆ ಗಮನ ಹರಿಸಿ ಆರ್ಥಿಕ ನೆರವು ನೀಡುವುದಕ್ಕೆ ಈಗಾಗಲೇ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

ನಿರ್ಮಾಪಕರ ಸಂಘದ ಕಟ್ಟಡ ಸಮಿತಿ ಅದ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ‘ದಕ್ಷಿಣ ಭಾರತದಲ್ಲಿ ನಿರ್ಮಾಪಕರ ಸಂಘಕ್ಕಾಗಿಯೇ ಸ್ವಂತ ಕಟ್ಟಡ ಹೊಂದಿರುವುದು ಕರ್ನಾಟಕ ಮಾತ್ರ. ಇದು ಕನ್ನಡ ಚಿತ್ರರಂಗದ ದೊಡ್ಡ ಬೆಳವಣಿಗೆ. ಓಟಿಟಿಯವರು ಕನ್ನಡ ಚಿತ್ರಗಳನ್ನು ಕೊಳ್ಳುತ್ತಿಲ್ಲ. ನಿರ್ಮಾಪಕರಿಗೆ ಇದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸರ್ಕಾರವೇ ಒಂದು ಹೊಸ ಓಟಿಟಿ ಮಾಡಬೇಕು ಎಂದು ಹಲವು ನಿರ್ಮಾಪಕರು ಮನವಿ ಮಾಡುತ್ತಲೇ ಇದ್ದಾರೆ. ಕನ್ನಡಕ್ಕೊಂದು ಹೊಸ ಓಟಿಟಿ ಸಿಗುವ ಭರವಸೆ ಸಿಕ್ಕಿದೆ’ ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕ ರಿಜ್ವಾನ್‌ ಅರ್ಷದ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‍, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‍ ಬಣಕಾರ್‌, ಹಿರಿಯ ನಟ ಡಾ.ಶಿವರಾಜ್‌ಕುಮಾರ್‌, ಜಗ್ಗೇಶ್‌, ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ನೆರವಾಗಿದ್ದ ನಿರ್ಮಾಪಕ ರಮೇಶ್‌ ರೆಡ್ಡಿ ಮತ್ತಿತರರು ಇದ್ದರು.

ಸಿಎಂ ಬದಲಾವಣೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ?: ಸಚಿವ ಶಿವಾನಂದ ಪಾಟೀಲ

ಚಲನಚಿತ್ರ ಅಕಾಡೆಮಿಯಿಂದ ಒಟಿಟಿ: ಚಲನಚಿತ್ರ ಅಕಾಡೆಮಿ ವತಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಕನ್ನಡಕ್ಕಾಗಿಯೇ ‘ನಮ್ಮ ಚಲನಚಿತ್ರ’ ಎಂಬ ಒಟಿಟಿ ಮಾಡುವ ನಿಟ್ಟಿನಲ್ಲಿ ಕೆಲಸಗಳನ್ನು ಆರಂಭಿಸಿದ್ದೇವೆ ಎಂದು ಇದೇ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು. ಇನ್ನು ಆರು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳ್ಳುವ ವಿಶ್ವಾಸವಿದೆ. ಜತೆಗೆ ಚಿತ್ರರಂಗದ ಎಲ್ಲಾ ವಿಭಾಗದವರ ಮಾಹಿತಿಗಳನ್ನು ನೀಡುವ ‘ನಮ್ಮ ಚಲನಚಿತ್ರ’ ಎಂಬ ವೆಬ್‌ ಸೈಟ್‌ ಕೂಡ ಸಿದ್ಧಪಡಿಸುತ್ತಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇವೆ. ಸರ್ಕಾರ ಕೂಡ ನೆರವು ನೀಡುವ ಭರವಸೆ ನೀಡಿದೆ ಎಂದರು. ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

click me!