ರಾಜಕಾರಣದಲ್ಲಿ ಧರ್ಮವಿರಲಿ, ಧರ್ಮದಲ್ಲಿ ರಾಜಕೀಯ ಬೇಡ: ಶಾಸಕ ಬಸನಗೌಡ ಯತ್ನಾಳ್‌

By Kannadaprabha NewsFirst Published Aug 2, 2024, 12:38 AM IST
Highlights

ನಮ್ಮ ದುಡಿಮೆಯಲ್ಲಿನ ಸ್ವಲ್ಪ ಭಾಗವನ್ನು ಮಠಮಾನ್ಯಗಳಿಗೆ ದಾನ ಮಾಡಬೇಕು. ಧರ್ಮದ ವಿಚಾರದಲ್ಲಿ ರಾಜಕೀಯ ಬರಬಾರದು. ರಾಜಕಾರಣದಲ್ಲಿ ಧರ್ಮ ಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

ಅಥಣಿ (ಆ.02): ಧರ್ಮ ಉಳಿಯಬೇಕಾದರೆ ಧಾರ್ಮಿಕ ಕ್ಷೇತ್ರಗಳು ಉಳಿಯಬೇಕು ಮತ್ತು ಅಭಿವೃದ್ಧಿ ಹೊಂದಬೇಕು. ಅದಕ್ಕಾಗಿ ನಮ್ಮ ದುಡಿಮೆಯಲ್ಲಿನ ಸ್ವಲ್ಪ ಭಾಗವನ್ನು ಮಠಮಾನ್ಯಗಳಿಗೆ ದಾನ ಮಾಡಬೇಕು. ಧರ್ಮದ ವಿಚಾರದಲ್ಲಿ ರಾಜಕೀಯ ಬರಬಾರದು. ರಾಜಕಾರಣದಲ್ಲಿ ಧರ್ಮ ಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ತಾಲೂಕಿನ ಹಲ್ಯಾಳ ಗ್ರಾಮದ ಗುರುಸಿದ್ದೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. 

ಲಿಂಗಾಯತ ಧರ್ಮ ಹೋರಾಟದಲ್ಲಿ ವಿದ್ವಾಂಸರನ್ನು, ವಚನಗಳನ್ನು ಅಧ್ಯಯನ ಮಾಡಿದ ಹಿರಿಯ ಪ್ರಾಧ್ಯಾಪಕ, ಸಾಹಿತಿಗಳನ್ನು ಮುಂಚೂಣಿಯಲ್ಲಿ ತರಬೇಕು. ಲಿಂಗಾಯತ ಧರ್ಮ ಹೋರಾಟ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಲಿಂಗಾಯತ ಮಠಗಳು ತ್ರಿವಿಧ ದಾಸೋಹದ ಮೂಲಕ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ಅರಿವು ಮೂಡಿಸುವ ಕಾರ್ಯ ಮಾಡುತ್ತಿವೆ. ನಾನು ಹೋದಲ್ಲೆಲ್ಲ ಉತ್ತರ ಕರ್ನಾಟಕದವರು ಎಂದು ಹೆಮ್ಮೆಯಿಂದ ಮಾತನಾಡಿಸುತ್ತಾರೆ. ಇಂತಹ ಕಾರ್ಯ ಮಾಡುತ್ತಿರುವ ಮಠಗಳು ಅಭಿವೃದ್ದಿಯಾಗಬೇಕು ಎಂದು ಆಶಿಸಿದರು.

Latest Videos

ಮೈಸೂರು ಪಾದಯಾತ್ರೆ ಹಿಂದೆ ಒಳ ಒಪ್ಪಂದ ರಾಜಕಾರಣ: ಶಾಸಕ ಬಸನಗೌಡ ಯತ್ನಾಳ್‌

ಸಾನಿಧ್ಯ ವಹಿಸಿದ್ದ ಸುಕ್ಷೇತ್ರ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ಕಾಯಕ ಮಂತ್ರವನ್ನ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಪರಿಶುದ್ಧ ಮನಸ್ಸಿನಿಂದ ಮಾಡಿದ ಕಾಯಕ. ಅದರಿಂದ ಬಂದ ಪ್ರತಿಫಲದಲ್ಲಿ ಸ್ವಲ್ಪ ಭಾಗವನ್ನು ಧರ್ಮಕಾರ್ಯಗಳಿಗೆ ನೀಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು. ಬಸವಾದಿ ಶರಣರ ವಚನ ಅಧ್ಯಯನ ಮಾಡಿದವರು ಹಾಗೂ ಬಸವ ತತ್ವ ಹೇಳುವವರ ಕೊರತೆಯಿಂದ ಲಿಂಗಾಯತ ಧರ್ಮದ ಆಚಾರ ವ್ಯಾಪಕ ಪ್ರಸಾರಗೊಳ್ಳುತ್ತಿಲ್ಲ. 

ಈ ಗುರುಸಿದ್ದೇಶ್ವರ ವಿರಕ್ತಮಠದಲ್ಲಿ ಶೇಗುಣಿಸಿಯ ಮಹಾಂತ ಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ವಚನೋತ್ಸವ ಕಾರ್ಯಕ್ರಮದ ಮೂಲಕ ಬಸವತತ್ವ ಪ್ರಸಾರಗೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಶೇಗುಣಸಿಯ ಡಾ.ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ತತ್ವ ಮತ್ತು ಆದರ್ಶಗಳು ಪ್ರತಿ ಕುಟುಂಬದಲ್ಲಿ ಪಾಲಿಸುವಂತಾಗಬೇಕು. ಮಹಾತ್ಮರ ಆದರ್ಶ ಮತ್ತು ಶರಣರ ವಚನಗಳನ್ನು ಕಲಿಸುವುದು ಇಂದು ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಬಿಜೆಪಿಯಲ್ಲಿ 2 ನಾಯಕರ ಭಿನ್ನಮತ?: ಜಾರಕಿಹೊಳಿ, ಯತ್ನಾಳ್ ಪ್ರತ್ಯೇಕ ಪಾದಯಾತ್ರೆ!

ಧರ್ಮಸಭೆಯಲ್ಲಿ ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರು, ಇಂಗಳದ ಸಿದ್ದಲಿಂಗ ಸ್ವಾಮೀಜಿ, ಗುರುಸಿದ್ದೇಶ್ವರ ವಿರಕ್ತ ಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿಯ ಸದಾಶಿವ ಸ್ವಾಮೀಜಿ, ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ತೆಲಸಂಗ ಹಿರೇಮಠದ ವೀರೇಶ್ವರ ದೇವರು, ಹೊನವಾಡದ ಬಾಬುರಾವ ಮಹಾರಾಜರು ಮತ್ತು ಶಾಸಕ ರಮೇಶ ಜಾರಕಿಹೊಳಿ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ, ಬಿಜೆಪಿ ಮುಖಂಡ ದರೆಪ್ಪ ಟಕ್ಕಣ್ಣವರ ಸೇರಿ ಇತರರು ಇದ್ದರು.

click me!