
ಬೆಂಗಳೂರು (ಜೂ.24): ಕರ್ನಾಟಕ ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳಲ್ಲಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳಿಗೆ 'ಉಚಿತ ಬಸ್ ಪಾಸ್' ವಿತರಿಸಲು ಸರ್ಕಾರ ಆದೇಶಿಸಿದೆ. ಇದರ ಜೊತೆಗೆ, ಈಗಾಗಲೇ ಹಣ ಪಾವತಿಸಿ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಆ ಮೊತ್ತವನ್ನು ಮರುಪಾವತಿ (Refund) ಮಾಡಲು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (KKRTC) ಬಸ್ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ. 29-05-2026 ರಿಂದಲೇ ಸೇವಾ ಸಿಂಧು ಪೋರ್ಟಲ್ ಮೂಲಕ ಪಾಸ್ಗಳ ವಿತರಣೆ ಆರಂಭವಾಗಿದೆ.
ಈಗಾಗಲೇ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳು ತಮ್ಮ ಹಣವನ್ನು ಮರಳಿ ಪಡೆಯಲು ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:
ಅರ್ಜಿ ಸಲ್ಲಿಕೆ: ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ಲಿಂಕ್ https://sevasindhuservices.karnataka.gov.in/buspassservices/ ಗೆ ಭೇಟಿ ನೀಡಿ.
ಒಟಿಪಿ ದೃಢೀಕರಣ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ ಒಟಿಪಿ (OTP) ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು.
ಇ-ಕೆವೈಸಿ: ವಿದ್ಯಾರ್ಥಿಗಳು ತಮ್ಮ ಆಧಾರ್ ಆಧಾರಿತ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯ.
ಬ್ಯಾಂಕ್ ವಿವರ: ವಿದ್ಯಾರ್ಥಿ ಅಥವಾ ಅವರ ಪೋಷಕರ ಬ್ಯಾಂಕ್ ಖಾತೆಯ ವಿವರಗಳನ್ನು ನಿಖರವಾಗಿ ತಂತ್ರಾಂಶದಲ್ಲಿ ನಮೂದಿಸಬೇಕು.
ರೀಫಂಡ್ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ NEFT ಅಥವಾ RTGS ಮೂಲಕ ಹಣ ಜಮಾ ಆಗಲಿದೆ. ಹಣ ಜಮೆಯಾದ ನಂತರ ನಿಮ್ಮ ಮೊಬೈಲ್ಗೆ ಎಸ್ಎಂಎಸ್ (SMS) ಸಂದೇಶ ಬರಲಿದೆ.
ಈ ಮರುಪಾವತಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಡೆಯುವುದರಿಂದ, ವಿದ್ಯಾರ್ಥಿಗಳು ಯಾವುದೇ ಸಾರಿಗೆ ಕಚೇರಿ ಅಥವಾ ಕೌಂಟರ್ಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ನಿಗಮವು ಸ್ಪಷ್ಟಪಡಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಆಗುವ ಅಲೆದಾಟವನ್ನು ತಪ್ಪಿಸಲಾಗಿದೆ.